Tuesday, August 14, 2012
ಸಚಿನ್ vs ಧ್ಯಾನ್ಚಾಂದ್
ಹೌದು, ಧ್ಯಾನ್ ಚಾಂದ್ ಆಟವನ್ನ ನೋಡುವುದೇ ಚಂದ...ಅಂಗಣದಲ್ಲಿ ಮ್ಯಾಜಿಕ್ ಮಾಡುತ್ತಿದ್ದ ಧ್ಯಾನ್ಚಾಂದ್ ಎದುರಾಳಿ ಆಟಗಾರರನ್ನೇ ಬೆರಗುಗೊಳಿಸುತ್ತಿದ್ರು. ಅಂತಹ ಮಾಂತ್ರಿಕ ಶಕ್ತಿ ಧ್ಯಾನ್ ಚಾಂದ್ಗಿತ್ತು... ಕ್ರಿಕೆಟ್ನಲ್ಲಿ ಬ್ಯಾಟ್ಸ್ ಮನ್ ರನ್ ದಾಖಲಿಸುವ ಹಾಗೇ ಧ್ಯಾನ್ ಚಾಂದ್ ಹಾಕಿಯಲ್ಲಿ ಸಲೀಸಾಗಿ ಗೋಲು ದಾಖಲಿಸುತ್ತಿದ್ರು.
ಇನ್ನು, ಸಚಿನ್ ತೆಂಡುಲ್ಕರ್.. ಹೇಳಬೇಕಾದ ಅಗತ್ಯವೇ ಇಲ್ಲ.. ಎಲ್ರಿಗೂ ಗೊತ್ತಿರುವ ಚಿರಪರಿಚಿತ ಹೆಸರು.. ಸೂಜಿಗಲ್ಲಿನಂತೆ ಆಕರ್ಷಿಸುವ ಸಚಿನ್ ಬ್ಯಾಟಿಂಗ್ ವಿಶ್ವ ಕ್ರಿಕೆಟನ್ನ ಚಕಿತಗೊಳಿಸಿದೆ. ಸುಮಾರು 23 ವರ್ಷಗಳಿಂದ ಕ್ರಿಕೆಟ್ ಜಗತ್ತನ್ನ ಆಳುತ್ತಿರುವ ತೆಂಡುಲ್ಕರ್ ಯುವ ಆಟಗಾರರಿಗೆ ಸ್ಪೂರ್ತಿಯ ಚಿಲುಮೆ... ಜಂಟಲ್ ಮ್ಯಾನ್ ಗೇಮ್ನ ಜಂಟಲ್ಮ್ಯಾನ್ ಆಟಗಾರನೂ ಹೌದು.
ನಿಜ, ಸಚಿನ್ ಸಾಧನೆಗೆ ಬಹುತೇಕ ಪ್ರಶಸ್ತಿಗಳು ಅವ್ರ ಹೆಸರಿನಲ್ಲಿ ಅಂಟಿಕೊಂಡಿವೆ. ಆದ್ರೆ ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿ ಭಾರತ ರತ್ನ ಗರಿ ಮಾತ್ರ ಇನ್ನೂ ಸೇರಿಕೊಂಡಿಲ್ಲ. ಇದಕ್ಕಾಗಿ ಕೆಲವೊಂದು ಅಡಚಣೆಗಳಿದ್ದವು. ಅದು ಈಗ ನಿವಾರಣೆಯಾಗಿದೆ. ಅಲ್ಲದೆ, ಸಚಿನ್ಗೆ ಭಾರತ ರತ್ನ ಪ್ರಶಸ್ತಿ ನೀಡಲೇಬೇಕು ಅನ್ನೊ ಕೂಗು ಜೋರಾಗಿ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿಯ ನೀತಿ ನಿಯಮಗಳನ್ನ ಬದಲಾವಣೆ ಮಾಡಲು ಸಮ್ಮತಿ ಕೂಡ ನೀಡಿದೆ.
…
ಇದ್ರ ಬೆನ್ನಲ್ಲೇ ಸಚಿನ್ ಗೆ ಭಾರತ ರತ್ನ ಪ್ರಶಸ್ತಿ ಇಷ್ಟು ಬೇಗ ನೀಡಬಾರದು ಅಂತ ಅಪಸ್ವರದ ಮಾತುಗಳು ಕೇಳಿಬರ್ತಿವೆ. ಸಚಿನ್ಗಿಂತ ಮೊದಲು ಧ್ಯಾನ್ ಚಾಂದ್ಗೆ ಭಾರತ ರತ್ನ ನೀಡಬೇಕು.. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತ್ರದ ದಿನಗಳಲ್ಲಿ ಧ್ಯಾನ್ ಚಾಂದ್ ಹಾಕಿ ಕ್ರೀಡೆಯಲ್ಲಿ ಭಾರತಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ಪ್ರತಿಭೆ ಇಂದು ನಮ್ಮ ಜತೆ ಇಲ್ಲದಿದ್ರೂ ಅವ್ರ ಆಟದ ನೆನಪು, ಮಾಡಿರುವ ಸಾಧನೆಗಳನ್ನ ಇತಿಹಾಸ ಪುಟಗಳು ಸಾರಿ ಸಾರಿ ಹೇಳ್ತಾವೆ.
ಹಾಗಂತ ಸಚಿನ್ಗಿಂತ ಧ್ಯಾನ್ಚಾಂದ್ ಶ್ರೇಷ್ಠ,.. ಧ್ಯಾನ್ಚಾಂದ್ಗಿಂತ ಸಚಿನ್ ಶ್ರೇಷ್ಠ ಅನ್ನೋದು ಚರ್ಚೆಯ ವಿಷ್ಯವಲ್ಲ. ಸಚಿನ್ಗೆ ಇನ್ನೂ 38ರ ಹರೆಯ... ಕ್ರಿಕೆಟ್ನಲ್ಲಿ ಸಚಿನ್ ಸಾಧಿಸಲು ಇನ್ನೂ ಬೇಕಾದಷ್ಟಿದೆ. ಈ ನಿಟ್ಟಿನಲ್ಲಿ ಧ್ಯಾನ್ಚಾಂದ್ ನಂತ್ರ ಸಚಿನ್ಗೆ ಭಾರತ ರತ್ನ ಪ್ರಶಸ್ತಿ ನೀಡಬಹುದು ಎಂಬುದು ಕೆಲವು ಕ್ರೀಡಾಭಿಮಾನಿಗಳ ವಾದ.. ಆದ್ರೂ ಮತ್ತೆ ಕೆಲವರು ಸಚಿನ್ಗೆ ಭಾರತ ರತ್ನನೀಡಬೇಕು ಅನ್ನೋ ಮಾತನ್ನ ಹೇಳುತ್ತಾರೆ.
ಇನ್ನೊಂದೆಡೆ, ಭಾರತದಲ್ಲಿ ಸಚಿನ್ಗೆ ಇರುವಷ್ಟು ನೇಮ್ - ಫೇಮ್ ಧ್ಯಾನ್ಚಾಂದ್ಗೆ ಖಂಡಿತಾ ಇಲ್ಲ.. ಇದು ನಮ್ಮ ದುರಂತವೋ ಏನೋ.. ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ... ಎಂಟು ಬಾರಿ ಒಲಿಂಪಿಕ್ ಗೆದ್ದಿರುವ ಹೆಗ್ಗಳಿಕೆ.. ವಿಪರ್ಯಾಸ ಅಂದ್ರೆ ಇಂತಹ ಕ್ರೀಡೆ ಭಾರತದಲ್ಲಿ ಇಂದು ನಶಿಸಿ ಹೋಗ್ತಾ ಇದೆ. ಕಿಂಗ್ ಆಗಿದ್ದ ಭಾರತೀಯ ಹಾಕಿ ಇದೀಗ ಒಲಿಂಪಿಕ್ಸ್ ನಲ್ಲಿ ಅರ್ಹತೆ ಪಡೆಯಲು ಪರದಾಡುತ್ತಿದೆ.
…
ಅಂದ ಹಾಗೇ, ಧ್ಯಾನ್ಚಾಂದ್ ನಮಗೆಲ್ಲಾ ನೆನಪಾಗೊದು ಆಗಸ್ಟ್ 29 ರಂದು ಮಾತ್ರ. ಯಾಕಂದ್ರೆ ಅವತ್ತು ಧ್ಯಾನ್ ಚಾಂದ್ ಅವ್ರ ಹುಟ್ಟುಹಬ್ಬ.. ಆ ದಿನವನ್ನ ರಾಷ್ಟ್ರೀಯ ಕ್ರೀಡಾ ದಿನ ಅಂತ ಭಾರತದಲ್ಲಿ ಆಚರಿಸಲಾಗುತ್ತೆ.. ಆದ್ರೆ ಹೆಚ್ಚಿನವರಿಗೆ ಧ್ಯಾನ್ಚಾಂದ್ ಯಾರು ಅಂತಲೇ ಗೊತ್ತಿಲ್ಲ.. ಕೇವಲ ಹಾಕಿ ಆಡುವವರಿಗೆ ಮಾತ್ರ ಧ್ಯಾನ್ಚಾಂದ್ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ಇದೆ. ಇದಕ್ಕಾಗಿ ನಾವು ಇಲ್ಲಿ ಯಾರನ್ನ ದೂಷಣೆ ಮಾಡುವಂತಿಲ್ಲ..ಯಾಕಂದ್ರೆ ನಮ್ಮ ವ್ಯವಸ್ಥೆಯೇ ಅಂತಹ ಮಟ್ಟದಲ್ಲಿದೆ. ಆದ್ರೂ ಒಂದು ದಿನವಾದ್ರೂ ಭಾರತೀಯ ಹಾಕಿ ದೇವ್ರನ್ನ ನೆನಪಿಸಿಕೊಳ್ಳುತ್ತೇವೆ ಅನ್ನೋದಷ್ಟೇ ಸಮಾಧಾನ..
ಆದ್ರೆ ಕ್ರಿಕೆಟ್ ದೇವ್ರು ಹಾಗಲ್ಲ.. ಪ್ರತಿಯೊಬ್ಬರಿಗೂ ಗೊತ್ತು... ಯಾಕಂದ್ರೆ ಸಚಿನ್ ಮಾಡಿರುವ ಮೋಡಿಯೇ ಅಂತಹುದ್ದು. ಜತೆಗೆ ಸಚಿನ್ ಸಾಧನೆಗೆ ಕಮರ್ಷಿಯಲ್ ಟಚ್ ಕೂಡ ಸಿಕ್ತ್.. ಗ್ಲಾಮರ್ - ಸೆಲೆಬ್ರಿಟಿ, ಕಮರ್ಷಿಯಲ್, ಹೀಗೆ ಎಲ್ಲವೂ ಸಚಿನ್ ಆಟಕ್ಕೆ ಮೆರಗನ್ನ ನೀಡಿತ್ತು. ಆದ್ರೆ ಧ್ಯಾನ್ಚಾಂದ್ ಈ ಎಲ್ಲ ಅವಕಾಶಗಳಿಂದಲೂ ಮರಿಚೀಕೆಯಾಗಿಬಿಟ್ರು...
ಒಟ್ಟಿನಲ್ಲಿ ಭಾರತ ರತ್ನ ಯಾರಿಗೆ ನೀಡಬೇಕು ಅನ್ನೋದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಸಚಿನ್ಗೆ ಮೊದಲು ನೀಡಿದ್ರೆ, ಧ್ಯಾನ್ಚಾಂದ್ಗೆ ಅವಮಾನ ಮಾಡಿದಂತಾಗುತ್ತೆ.. ಅದೇ ಧ್ಯಾನ್ಚಾಂದ್ಗೆ ನೀಡಿದ್ರೆ ಸಚಿನ್ ಅಭಿಮಾನಿಗಳಿಗೆ ಬೇಸರವಾಗುತ್ತೆ. ಇದ್ರಿಂದ ಪ್ರಶಸ್ತಿಗೆ ಆಯ್ಕೆಮಾಡುವಾಗ ಕೇಂದ್ರ ಸರ್ಕಾರ ಕೂಡ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗುತ್ತೆ.
ಅದೇನೇ ಇರಲಿ...ಧ್ಯಾನ್ಚಾಂದ್ ಮತ್ತು ಸಚಿನ್ ತೆಂಡುಲ್ಕರ್ ಭಾರತೀಯ ಕ್ರೀಡಾಲೋಕದ ಅನರ್ಘ್ಯ ರತ್ನಗಳು... ಕ್ರೀಡಾ ಜಗತ್ತಿನಲ್ಲಿ ಇವರಿಬ್ರು ಎಲ್ಲವನ್ನೂ ಪ್ರೂವ್ ಮಾಡಿದ್ದಾರೆ... ಇನ್ನೂ ಯಾರಿಗೂ ಪ್ರೂವ್ ಮಾಡುವಂತಹ ಅಗತ್ಯವೂ ಇಲ್ಲ...ಭಾರತ ರತ್ನ ಪ್ರಶಸ್ತಿ ಇವ್ರ ಸಾಧನೆಗೆ ಹೆಮ್ಮೆ ಗೌರವ ಮೂಡಿಸುತ್ತೆ..
ಸನತ್ ರೈ ಸ್ಪೋಟ್ರ್ಸ್ ಬ್ಯೂರೋ ಸಮಯ ನ್ಯೂಸ್
ಹೀರೋ ಟು ಝಿರೊ...
ಇದು ಸುಮಾರು ಹತ್ತು ಹನ್ನೆರಡು ವರ್ಷಗಳ ಹಿಂದಿನ ಫ್ಲಾಷ್ ಬ್ಯಾಕ್.. ಅದು ಮ್ಯಾಚ್ ಫಿಕ್ಸಿಂಗ್ ಅನ್ನೋ ಪೆಡಂಭೂತ ಭಾರತ ಕ್ರಿಕೆಟ್ ತಂಡವನ್ನ ಆವರಿಸಿಕೊಂಡ ಸಮಯ...ತಂಡದಲ್ಲಿ ಸ್ಟಾರ್ ಆಟಗಾರರಿದ್ರೂ ಗೆಲ್ಲುವ ಪಂದ್ಯದಲ್ಲಿ ಸೋಲುತ್ತಿದ್ರು. ಸೋಲುವ ಪಂದ್ಯದಲ್ಲಿ ಗೆಲುವು ಸಾಧಿಸಿ ಅಚ್ಚರಿ ಮೂಡಿಸುತ್ತಿದ್ರು.
ಆಗಲೇ ಸಚಿನ್ ತೆಂಡುಲ್ಕರ್ಗೆ ನಾಯಕತ್ವದ ಸಹವಾಸನೇ ಸಾಕು ಅನ್ಸಿದ್ದು. ಸಾಲು ಸೋಲುಗಳಿಂದ ಕಂಗೆಟ್ಟ ಕಾರಣ ಮಾಸ್ಟರ್ ಬ್ಲ್ಯಾಸ್ಟರ್ನ ಆಟದ ಝಲಕ್ ಕೂಡ ಮಾಯವಾಗಿತ್ತು. ಜತೆಗೆ ತಂಡದಿಂದ ಸಾಂಘಿಕ ಆಟ ಕೂಡ ಹೊರಬರ್ತಿರಲಿಲ್ಲ. ಇದ್ರಿಂದ ಸಚಿನ್ ತೆಂಡುಲ್ಕರ್ ಬೇಸೆತ್ತು ನಾಯಕನ ಪಟ್ಟದಿಂದ ಕೆಳಗಿಳಿದ್ರು.
ಇನ್ನೇನೂ ತಂಡಕ್ಕೊಬ್ಬ ಹೊಸ ನಾಯಕ ಬೇಕು... ಅದು ಯುವ ಆಟಗಾರನಾಗಬೇಕು. ಹಾಗಂತ ಆಯ್ಕೆ ಸಮಿತಿ ಯೋಚನೆ ಮಾಡ್ತಾ ಇರೋವಾಗ್ಲೆ ತಟ್ಟನೇ ಹೊಳೆದ ಹೆಸರು ಸೌರವ್ ಗಂಗೂಲಿ.
ಅರೇ, ಸೌರವ್ ಗಂಗೂಲಿನಾ.. ಅಂತ ಅನೇಕರು ಹುಬ್ಬೇರಿಸಿದ್ರು. ಯಾಕಂದ್ರೆ ಗಂಗೂಲಿ ಮುಂಗೋಪಿ... ಅದಕ್ಕಿಂತಲೂ ಹೆಚ್ಚಾಗಿ ಅಹಂಕಾರಿ...ಆದ್ರಿಂದ ಸೌರವ್ ಹೇಗೆ ತಂಡವನ್ನ ಮುನ್ನಡೆಸುತ್ತಾರೆ ಅನ್ನೋ ಟೀಕೆಗಳು ಆಗ ಕೇಳಿಬಂದಿದ್ದವು. ಆದ್ರೆ ಆಯ್ಕೆ ಸಮಿತಿಗೆ ಅಂತಹ ವ್ಯಕ್ತಿಯೇ ಬೇಕಿತ್ತು. ಅವ್ಯವಸ್ಥೆಯ ಅಗರವಾಗಿದ್ದ ತಂಡವನ್ನ ಸರಿಯಾಗಿ ಮುನ್ನಡೆಸಲು ಗಂಗೂಲಿಯೇ ಬೆಸ್ಟ್ ಅಂತ ಆಯ್ಕೆ ಸಮಿತಿ ತೀರ್ಮಾನಿಸಿತ್ತು.
ಅಲ್ಲಿಂದ ಶುರುವಾಗಿದ್ದು ಗಂಗೂಲಿಯ ಪರ್ವ.. ಭಾರತ ಕ್ರಿಕೆಟ್ ತಂಡದ ಬದಲು ಟೀಮ್ ಇಂಡಿಯಾ ಅನ್ನೋ ಹೆಸರಿನೊಂದಿಗೆ ವಿಶ್ವ ಕ್ರಿಕೆಟ್ನಲ್ಲಿ ಕಾಳಗ ನಡೆಸಲು ಕೊಲ್ಕತ್ತಾದ ಮಹಾರಾಜ ಮುಂದಾದ್ರು. ಅಷ್ಟೇ ಅಲ್ಲ, ಆಯ್ಕೆ ಸಮಿತಿಯ ಮುಂದೆ ಧ್ವನಿ ಎತ್ತಿ ಮಾತನಾಡಿ ಯುವ ಆಟಗಾರರಿಗೆ ಅವಕಾಶ ಕಲ್ಪಿಸಿದ್ರು. ಇದ್ರಿಂದಾಗಿಯೇ ಸೆಹ್ವಾಗ್, ಯುವರಾಜ್ ಸಿಂಗ್, ಜಹೀರ್ಖಾನ್, ಹರ್ಭಜನ್ ಸಿಂಗ್ನಂತಹ ಆಟಗಾರರು ವಿಶ್ವ ಕ್ರಿಕೆಟ್ನಲ್ಲಿ ಇಂದು ಮಿಂಚು ಹರಿಸಲು ಸಾಧ್ಯವಾಯ್ತು.
ಈ ನಡುವೆ, ಗಂಗೂಲಿಯ ನಾಯಕತ್ವಕ್ಕೆ ವಿದೇಶಿ ಕೋಚ್ ಜಾನ್ ರೈಟ್ನ ಮಾರ್ಗದರ್ಶನವೂ ಸಿಕ್ಕಿತ್ತು. ಹೀಗೆ ಹೊಸ ಆಯಾಮ ಪಡೆದುಕೊಂಡ ಟೀಮ್ ಇಂಡಿಯಾ ನಿಧಾನವಾಗಿಯೇ ಗೆಲುವಿನ ನಗೆ ಬೀರಲು ಶುರು ಮಾಡಿತ್ತು. ಅದ್ರಲ್ಲೂ ವಿದೇಶಿ ನೆಲದಲ್ಲಿ ಮರಿಚೀಕೆಯಾಗಿದ್ದ ಗೆಲುವು ಗಂಗೂಲಿ ನಾಯಕತ್ವದಲ್ಲೇ ಒಲಿದು ಬಂತು.
ಇನ್ನೊಂದೆಡೆ, ವಿಶ್ವಚಾಂಪಿಯನ್ ತಂಡವಾಗಿ ಹೊರಹೊಮ್ಮಿದ್ದ ಆಸ್ಟ್ರೇಲಿಯನ್ನರು ವಿಶ್ವ ಕ್ರಿಕೆಟ್ನಲ್ಲಿ ಸೋಲಿಲ್ಲದ ಸರದಾರನಂತೆ ಮೆರೆದಾಡುತ್ತಿದ್ರು. ಆಗ ಆಸ್ಟ್ರೇಲಿಯನ್ನರಿಗೆ ತಿರುಗೇಟು ನೀಡಿ ಗರ್ವ ಭಂಗ ಮಾಡಿದ್ದು ಇದೇ ಕೊಲ್ಕತ್ತಾದ ಮಹಾರಾಜ ಎಂಬುದನ್ನ ಮರೆಯುವ ಹಾಗಿಲ್ಲ.
ಇನ್ನು, ದಾದಾನ ಆಕ್ರಮಣಕಾರಿ ಪ್ರವೃತ್ತಿಯೇ ಗೆಲುವಿನ ಸೂತ್ರವಾಗಿತ್ತು. ಅದ್ರಲ್ಲೂ ಇಂಗ್ಲೆಂಡ್ ವಿರುದ್ಧ 2002ರಲ್ಲಿ ನಡೆದ ನ್ಯಾಟ್ ವೆಸ್ಟ್ ಸರಣಿಯಲ್ಲಿ ಲಾಡ್ಸ್ ನ ಬಾಲ್ಕನಿ ಮೇಲೆ ಗಂಗೂಲಿ ಶರ್ಟ್ ಬಿಚ್ಚಿ ಕುಣಿದು ಸಂಭ್ರಮಿಸಿದ ಕ್ಷಣವನ್ನ ಇವತ್ತಿಗೂ ಮರೆಯೋಕೆ ಆಗೊಲ್ಲ. .
ಹಾಗೇ, 2003ರ ವಿಶ್ವಕಪ್ನಲ್ಲೂ ಗಂಗೂಲಿ ತಂಡವನ್ನ ಮುನ್ನಡೆಸಿದ ರೀತಿ ಅದ್ಭುತವಾಗಿತ್ತು. ತಂಡದಲ್ಲಿ ಏಳು ಬ್ಯಾಟ್ಸ್ ಮನ್ ಗಳು ಇರಲೇಬೇಕು ಅನ್ನೋ ಕಾರಣಕ್ಕೆ ದ್ರಾವಿಡ್ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನ ನೀಡಿದ್ರು. ಜತೆಗೆ ತಂಡ ಗೆಲುವಿನ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿದ್ರೂ ಫೈನಲ್ನಲ್ಲಿ ಮುಗ್ಗರಿಸಿತ್ತು. ಆದ್ರೂ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಗಂಗೂಲಿ ಎವರ್ಗ್ರೀನ್ ಹೀರೋ. .
ನಂತ್ರ ಮಹಾರಾಜನ ಆಟ ಮಂಕಾಗಿ ಹೋಯ್ತು... ನಾಯಕತ್ವದ ಬಗ್ಗೆ ಅಪಸ್ವರಗಳು ಕೇಳಿಬಂದವು. ಇದಕ್ಕೆ ತಕ್ಕಂತೆ ಕೋಚ್ ಜಾನ್ ರೈಟ್ ಅವಧಿ ಕೂಡ ಮುಗಿದಿತ್ತು. ಬಳಿಕ ಗ್ರೇಗ್ ಚಾಪೆಲ್ ತಂಡದ ತರಬೇತುದಾನಾದ್ರು. ಆದ್ರೆ ಗಂಗೂಲಿ ಮತ್ತು ಚಾಪೆಲ್ಗೆ ಅದ್ಯಾಕೋ ಕೂಡಿ ಬರ್ತಿರಲಿಲ್ಲ. ಇದೇ ವೇಳೆ ಗಂಗೂಲಿಗೆ ಫಾರ್ಮ್ ಕೂಡ ಕೈಕೊಟ್ಟಿತ್ತು.
ಇದ್ರಿಂದ ನಾಯಕತ್ವದದಿಂದ ದಾದಾ ಅನಿವಾರ್ಯವಾಗಿ ಕೆಳಗಿಳಿಯಬೇಕಾಯ್ತು. ಅಷ್ಟೇ ಅಲ್ಲ, ತಂಡಕ್ಕೆ ಬಂದು ಹೋಗುವ ಅತಿಥಿ ಆಟಗಾರನಾಗಬೇಕಾಯ್ತು. ಆದ್ರೂ ಗಂಗೂಲಿಗೆ ಇನ್ನೂ ಆಡಬೇಕು ಅನ್ನೋ ಹಂಬಲವಿತ್ತು. ಕೊನೆಗೆ ಫಾರ್ಮ್ ಕಂಡುಕೊಂಡು ತಂಡದೊಳಗೆ ರಿ ಎಂಟ್ರಿಯಾದ್ರೂ ಮತ್ತೆ ನಾಯಕನಾಗುವ ಅವಕಾಶ ಮಾತ್ರ ಸಿಗಲೇ ಇಲ್ಲ. ಕೊನೆಗೂ ದಾದಾ ನಿರಾಸೆಯಿಂದಲೇ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಿದ್ರು.
ಕ್ಯಾಪ್ಟನ್ ಸೌರವ್ ಗಂಗೂಲಿ ಮೂಲೆಗುಂಪು ಅದಾಗ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಸಾರಥಿಯಾದ್ರು. ಆದ್ರೆ ದ್ರಾವಿಡ್ ಖುಷಿ ಪಡುವ ಹಾಗಿರಲಿಲ್ಲ. ಯಾಕಂದ್ರೆ ಟೀಮ್ ಇಂಡಿಯಾ ಯಜಮಾನನ ಸಿಂಹಾಸನ ಮುಳ್ಳಿನ ಸಿಂಹಾಸನ ಅನ್ನೋದು ದ್ರಾವಿಡ್ಗೆ ಗೊತ್ತಿಲ್ಲದ ವಿಚಾರವೇನೂ ಆಗಿರಲಿಲ್ಲ.
ಆದ್ರೂ ದ್ರಾವಿಡ್ ಚಾಲೆಂಜ್ ಆಗಿಯೇ ಸ್ವೀಕರಿಸಿದ್ರು. ದುರಾದೃಷ್ಟ ಅಂದ್ರೆ ಅದೇ ಟೈಮ್ನಲ್ಲಿ ಟೀಮ್ಇಂಡಿಯಾದ ಹಿರಿಯ ಆಟಗಾರರು ಗಾಯ ಮತ್ತು ಕೆಟ್ಟ ಫಾರ್ಮ್ನಿಂದಾಗಿ ಕಂಗೆಟ್ಟಿದ್ರು. ತೆಂಡುಲ್ಕರ್ ಟೆನಿಸ್ ಎಲ್ಬೊ ನೋವಿನಿಂದ ಬಳಲುತ್ತಿದ್ರು. ಈ ನಡುವೆ ತಂಡದೊಳಗೆ ಯುವ ಆಟಗಾರರ ಆಗಮನವೂ ಆಯ್ತು. ಮತ್ತೊಂದೆಡೆ, ಹಿರಿಯ ಆಟಗಾರರನ್ನ ಮನೆಗೆ ಕಳುಹಿಸಬೇಕು ಅಂತ ಪಣತೊಟ್ಟಿದ್ದ ಕೋಚ್ ಗ್ರೆಗ್ ಚಾಪೆಲ್ ದ್ವಂದ ನೀತಿಯನ್ನ ಅನುಸರಿಸಿದ್ರು.
ಆದ್ರೆ, ದ್ರಾವಿಡ್ ಕಂಗೆಡಲಿಲ್ಲ. ರೈನಾ, ಧೋನಿ, ಯುವರಾಜ್ಸಿಂಗ್ ನಂತಹ ಆಟಗಾರರು ಬ್ಯಾಟಿಂಗ್ನಲ್ಲಿ ಪ್ರಬುದ್ಧತೆ ತೋರಿಸಿದ್ರು.ಜತೆಗೆ ಇರ್ಪಾನ್ ಪಠಾಣ್, ಆರ್. ಪಿ.ಸಿಂಗ್, ಹರ್ಭಜನ್ ಸಿಂಗ್ ಬೌಲಿಂಗ್ನಲ್ಲಿ ಮೋಡಿ ಮಾಡಿದ್ರು. ಇದ್ರಿಂದ ದ್ರಾವಿಡ್ ನಾಯಕತ್ವದಲ್ಲೂ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಾ ಸಾಗಿತ್ತು.
ಇನ್ನೊಂದೆಡೆ, ಕೋಚ್ ಗ್ರೇಗ್ ಚಾಪೆಲ್ ಉಪಟಳದಿಂದ ದ್ರಾವಿಡ್ಗೆ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೆಡ್ ಮಾಸ್ಟರ್ನ ರೀತಿಯಲ್ಲಿ ವರ್ತಿಸುತ್ತಿದ್ದ ಚಾಪೆಲ್ ಹೇಳಿದ್ದಕ್ಕೆಲ್ಲಾ ದ್ರಾವಿಡ್ ತಲೆಯಾಡಿಸುತ್ತಿದ್ರು. ತಂಡದಲ್ಲಿ ಉಸಿರು ಕಟ್ಟುವ ವಾತಾವರಣವಿದ್ರೂ ರಾಹುಲ್ ಎಲ್ಲವನ್ನ ಸಹಿಸಿಕೊಂಡಿದ್ರು. ಹಾಗೇ, ಕೂಲ್ ಆಗಿಯೇ ವಿದೇಶಿ ನೆಲದಲ್ಲಿ ಕೆಲವೊಂದು ಸರಣಿ ಗೆದ್ದು ಇತಿಹಾಸ ಬರೆಯುವಂತೆ ಮಾಡಿದ್ರು.
ಇನ್ನು, ದ್ರಾವಿಡ್ ನಾಯಕತ್ವಕ್ಕೆ ಸವಾಲು ಆಗಿದ್ದು 2007ರ ಕೆರೆಬಿಯನ್ ವಿಶ್ವಕಪ್. ವಿಶ್ವಕಪ್ ಗೆಲ್ಲಬೇಕು ಎಂಬುದು ಪ್ರತಿ ಆಟಗಾರನ ಕನಸು ಅಂದ ಮೇಲೆ ತನ್ನ ನಾಯಕತ್ವದಲ್ಲೇ ವಿಶ್ವಕಪ್ ಗೆಲ್ಲಬೇಕು ಅಂತ ದ್ರಾವಿಡ್ ಸಹ ಅಂದುಕೊಂಡಿದ್ರು. ಅಲ್ಲದೆ ಇದಕ್ಕಾಗಿ ತುಂಬಾನೇ ಪ್ಲಾನ್ ಕೂಡ ಮಾಡ್ಕೊಂಡಿದ್ರು.
ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡ್ಕೊಂಡು ಪ್ರಯೋಗಕ್ಕೆ ಮುಂದಾದ್ರು. ಸಚಿನ್ ತೆಂಡುಲ್ಕರ್ ತಂಡದ ಟ್ರಂಪ್ ಕಾರ್ಡ್ ಬ್ಯಾಟ್ಸ್ ಮನ್. ಇದ್ರಿಂದ ಸಚಿನ್ ಇನಿಂಗ್ಸ್ ಆರಂಭಿಸುವ ಬದಲು ಮಧ್ಯಮ ಕ್ರಮಾಂಕದಲ್ಲಿ ಆಡಬೇಕು ಎಂಬುದು ಗುರು ಚಾಪೆಲ್ನ ಕಟ್ಟಾಜ್ಞೆಯಾಗಿತ್ತು. ಇದನ್ನ ಸಚಿನ್ ಒಪ್ಪಿಕೊಳ್ಳದಿದ್ರೂ ದ್ರಾವಿಡ್ ಮಾತಿಗೆ ಬೆಲೆ ನೀಡಲೇಬೇಕಾಯ್ತು.
ಆದ್ರೆ ಕೆರೆಬಿಯನ್ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಬಾಂಗ್ಲಾ ದೇಶ ವಿರುದ್ಧ ಸೋತು ಅವಮಾನ ಅನುಭವಿಸಿತ್ತು. ಅಷ್ಟೇ ಅಲ್ಲ, ವಿಶ್ವಕಪ್ ಟೂರ್ನಿಯ ಲೀಗ್ನಿಂದ ಹೊರನಡೆದು ಮುಖಭಂಗಕ್ಕೀಡಾಯ್ತು. ಅಷ್ಟೇ ಸಾಕಿತ್ತು. ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಿತ್ತ ನೆತ್ತಿಗೇರಿತ್ತು. ಕ್ರಿಕೆಟಿಗರನ್ನ ದೇವ್ರಂತೆ ಆರಾಧಿಸಿದ ಅಭಿಮಾನಿಗಳು ಕ್ರಿಕೆಟಿಗರುಗಳ ಪೋಸ್ಟರ್ಗಳನ್ನ ಬಿಕ್ಷುಕರಂತೆ ಬಿಂಬಿಸಿದ್ರು.
ಮತ್ತೊಂದೆಡೆ, ಸೋಲಿನ ಅವಮಾನದಿಂದ ಬೇಸೆತ್ತ ದ್ರಾವಿಡ್ ನಾಯಕತ್ವವನ್ನ ತ್ಯಜಿಸಿದ್ರು. ತಂಡದ ಹೀನಾಯ ಸ್ಥಿತಿಗೆ ಕಾರಣರಾಗಿದ್ದ ಕೋಚ್ ಗ್ರೇಗ್ ಚಾಪೆಲ್ಸಹ ಮನೆ ದಾರಿ ಹಿಡಿದ್ರು. ಇದ್ರೊಂದಿಗೆ ಟೀಮ್ ಇಂಡಿಯಾದಲ್ಲಿ ದ್ರಾವಿಡ್ ಅಧ್ಯಾಯ ಸಹ ಇತಿಹಾಸ ಪುಟ ಸೇರಿಕೊಂಡಿತ್ತು. ನಾಯಕತ್ವಕ್ಕೆ ಗುಡ್ ಬೈ ಹೇಳಿದ ರಾಹುಲ್ ಏಕದಿನ ಪಂದ್ಯದಿಂದ ದೂರವೇ ಉಳಿದ್ರು. ಹಾಗೇ ಕಳೆದ ವರ್ಷ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ರು. ಇದೀಗ ಟೆಸ್ಟ್ ಕ್ರಿಕೆಟ್ಗೂ ವಿದಾಯ ಹೇಳುವ ಸೂಚನೆ ನೀಡಿದ್ದಾರೆ.
ಏನೇ ಆಗ್ಲಿ, ದ್ರಾವಿಡ್ ನಾಯಕನಾಗಿ ಗಂಗೂಲಿಯಂತೆ ವಿಜೃಂಬಿಸದಿದ್ರೂ ಅನೇಕ ಯುವ ಆಟಗಾರರಿಗೆ ಸ್ಪೂರ್ತಿಯಾಗಿದ್ರು. ಈ ನಡುವೆ, ಚುಟುಕು ಕ್ರಿಕೆಟ್ಗೆ ಆಯಾಮ ಸಿಕ್ಕ ಬೆನ್ನಲ್ಲೇ ದ್ರಾವಿಡ್ ಹಿರಿಯ ಆಟಗಾರರನ್ನ ಆಡದಂತೆ ತಡೆಹಿಡಿದ್ರು. ಟ್ವೆಂಟಿ ಟ್ವೆಂಟಿ ಯುವಕರ ಆಟ.. ಹಿರಿಯ ಆಟಗಾರರು ಆಡುವುದಿಲ್ಲ ಅನ್ನೋ ಹೇಳಿಕೆ ನೀಡಿ ಕೆಲವು ಹಿರಿಯ ಆಟಗಾರರಿಗೆ ನಿರಾಸೆಯನ್ನುಂಟು ಮಾಡಿದ್ರು. ಆದ್ರೂ ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟಿ-ಟ್ವೆಂಟಿ ಪಂದ್ಯವನ್ನ ಆಡಿದ ರಾಹುಲ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ತನ್ನ ಸಾಮರ್ಥ್ಯವನ್ನ ಪ್ರದರ್ಶಿಸಿ ಚುಟುಕು ಕ್ರಿಕೆಟ್ಗೂ ವಿದಾಯ ಹೇಳಿದ್ರು. .
ಅದೇನೇ ಇರಲಿ.. ದ್ರಾವಿಡ್ಗೆ ಭವಿಷ್ಯದ ಟೀಮ್ ಇಂಡಿಯಾ ಬಗ್ಗೆ ದೂರದೃಷ್ಟಿ ಇತ್ತು. ಯುವ ಆಟಗಾರನಿಗೆ ನಾಯಕತ್ವ ವಹಿಸಬೇಕು ಅನ್ನೋದು ದ್ರಾವಿಡ್ನ ಆಸೆಯಾಗಿತ್ತು. ಮೊದಲೇ ಯುವ ನಾಯಕನ ಹುಡುಕಾಟದಲ್ಲಿದ್ದ ಬಿಸಿಸಿಐ ಮತ್ತು ಆಯ್ಕೆ ಸಮಿತಿಗೆ ಸಚಿನ್ ಜತೆ ಸೇರ್ಕೊಂಡು ಹೊಸ ನಾಯಕನ ಹೆಸರನ್ನ ಸೂಚಿಸಿದ್ರು. ಒಟ್ಟಿನಲ್ಲಿ, ದ್ರಾವಿಡ್ ವಿಶ್ವದ ಶ್ರೇಷ್ಠ ಆಟಗಾರನಾಗಿದ್ರೂ ನಾಯಕನಾಗಿ ಆರಕ್ಕೆರಳಿಲ್ಲ .ಮೂರಕ್ಕಿಳಿಯಲಿಲ್ಲ.
ಕೆರೆಬಿಯನ್ ವಿಶ್ವಕಪ್ ಟೂರ್ನಿಯ ಸೋಲನ್ನ ಟೀಮ್ ಇಂಡಿಯಾಗೆ ಅರಗಿಸಿಕೊಳ್ಳಲು ಸಾಧ್ಯನೇ ಇರಲಿಲ್ಲ. ಅಷ್ಟೇ ಅಲ್ಲ, ದೊಡ್ಡಣ್ಣ ಬಿಸಿಸಿಐ ಕೂಡ ಗರಂ ಆಗಿಬಿಟ್ಟಿತ್ತು. ಹೇಗಾದ್ರೂ ಸರಿ ಕಳೆದು ಹೋದ ಮರ್ಯಾದೆಯನ್ನ ಮತ್ತೆ ಪಡೆಯಬೇಕು ಎಂಬುದು ಬಿಸಿಸಿಐ ಮತ್ತು ಟೀಮ್ ಇಂಡಿಯಾದ ಗುರಿಯಾಗಿತ್ತು. ಇದಕ್ಕಾಗಿಯೇ ಚೊಚ್ಚಲ ಟ್ವೆಂಟಿ ಟ್ವೆಂಟಿ ಟೂರ್ನಿಗೆ ಟೀಮ್ ಇಂಡಿಯಾದ ಸಾರಥಿಯಾಗಿ ಮಹೇಂದ್ರ ಸಿಂಗ್ ಧೋನಿಯನ್ನ ಆಯ್ಕೆ ಮಾಡಲಾಯ್ತು.
ಆಗ ಎಲ್ರೂ ಅಚ್ಚರಿಗೊಂಡಿದ್ರು. ಸೆಹ್ವಾಗ್, ಯುವರಾಜ್ ಬದಲು ಧೋನಿಯ ಆಯ್ಕೆ ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆದ್ರೆ ದ್ರಾವಿಡ್ ಮತ್ತು ಸಚಿನ್ಗೆ ಧೋನಿಯ ಎಬಿಲಿಟಿ ಏನು ಎಂಬುದು ಚೆನ್ನಾಗಿಯೇ ಗೊತ್ತಿತ್ತು. ಇದ್ರಿಂದ ಯಾರು ಕೂಡ ದೂಸ್ರಾ ಮಾತು ಆಡಲಿಲ್ಲ.
ಆದ್ರೂ ಚೊಚ್ಚಲ ಟ್ವೆಂಟಿ ಟ್ವೆಂಟಿಗೆ ತರಬೇತುದಾರನಿಲ್ಲದೆ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಿತ್ತು. ಮ್ಯಾನೇಜರ್ ಲಾಲ್ ಚಂದ್ ರಜಪೂತ್ ಧೋನಿಗೆ ಪಾತ್ರಧಾರಿಯಾದ್ರು. ಟೂರ್ನಿಯಲ್ಲಿ ನೋಡ ನೋಡುತ್ತಲೇ ಟೀಮ್ ಇಂಡಿಯಾ ಅಚ್ಚರಿಯ ಫಲಿತಾಂಶವನ್ನ ನೀಡಿತ್ತು. ಅಷ್ಟೇ ಅಲ್ಲ, ಫೈನಲ್ನಲ್ಲಿ ಬದ್ಧ ವೈರಿ ಪಾಕ್ ತಂಡವನ್ನ ಮಣಿಸಿದ ಟೀಮ್ ಇಂಡಿಯಾ ಚೊಚ್ಚಲ ಟ್ವೆಂಟಿ ಟ್ವೆಂಟಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಇಷ್ಟೇ ಸಾಕಿತ್ತು... ಧೋನಿಯ ನಾಯಕತ್ವದ ಬಗ್ಗೆ ಪ್ರಶಂಸೆಗಳ ಸುರಿಮಳೆ...ಪ್ರತಿಷ್ಠಿತ ಟೂರ್ನಿಯಲ್ಲಿ ತಂಡವನ್ನ ಧೋನಿ ಮುನ್ನಡೆಸಿದ ರೀತಿ ಕೂಡ ಅದ್ಭುತವಾಗಿತ್ತು. ಅದ್ರಲ್ಲೂ ಫೈನಲ್ ಪಂದ್ಯದ ಫೈನಲ್ ಓವರ್ನಲ್ಲಿ ಗ್ಯಾಂಬಲ್ ಮಾಡಿದ ಧೋನಿಯ ಧೈರ್ಯ ಕ್ರಿಕೆಟ್ ಪಂಡಿತರನ್ನೇ ಚಕಿತಗೊಳಿಸಿತ್ತು. ಜೋಗಿಂದರ್ ಶರ್ಮಾನ ಮೇಲಿಟ್ಟ ನಂಬಿಕೆಯೇ ಧೋನಿಯ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ನಂತ್ರ ಟೀಮ್ ಇಂಡಿಯಾದಲ್ಲಿ ಎಲ್ಲವೂ ಮಾಹಿಯ ಮಹಿಮೆ. ಟ್ವೆಂಟಿ ಟ್ವೆಂಟಿ ವಿಶ್ವಕಪ್ ಗೆದ್ದ ನಂತ್ರ ಧೋನಿ ಏಕದಿನ ತಂಡದ ನಾಯಕನಾದ್ರು. ಆರಂಭದಲ್ಲಿ ಧೋನಿ ಎಡವಿದ್ರೂ ನಿಧಾನವಾಗಿಯೇ ಗೆಲುವಿನ ಹಾದಿಯಲ್ಲಿ ತಂಡವನ್ನ ಮುನ್ನಡೆಸಿದ್ರು. ವಿದೇಶಿ ನೆಲದಲ್ಲೂ ಧೋನಿ ಮ್ಯಾಜಿಕ್ ಮಾಡಿದ್ರು. ಮರೀಚಿಕೆಯಾಗಿದ್ದ ಗೆಲುವುಗಳು ಟೀಮ್ ಇಂಡಿಯಾಗೆ ಒಲಿದು ಬಂದವು.
ಇನ್ನೊಂದೆಡೆ, ನಾಯಕತ್ವದಲ್ಲಿ ಪ್ರಬುದ್ಧತೆ ಸಾಧಿಸಿದ ಧೋನಿ ಕೂಲ್ ಕ್ಯಾಪ್ಟನ್ ಅಂತಲೇ ಬಿಂಬಿತವಾದ್ರು. ಸದಾ ಮಂದಹಾಸ ದಿಂದಲೇ ಮೋಡಿ ಮಾಡುವ ಧೋನಿ ಎದುರಾಳಿ ತಂಡಗಳ ವೀಕ್ನೆಸ್ಗಳನ್ನ ಬೇಗನೇ ಅರ್ಥಮಾಡಿಕೊಳ್ಳುತ್ತಿದ್ರು. ಅಷ್ಟೇ ಅಲ್ಲ, ಗೇಮ್ ಪ್ಲಾನ್ಗಳನ್ನ ಚೆಂಜ್ ಮಾಡ್ಕೊಂಡು ಟೀಮ್ ಇಂಡಿಯಾದ ಯಶಸ್ವಿ ನಾಯಕನಾಗುವ ಸೂಚನೆ ನೀಡಿದ್ರು.
ಅಷ್ಟರಲ್ಲೇ ಟೆಸ್ಟ್ ಕ್ಯಾಪ್ಟನ್ ಆಗಿದ್ದ ಅನಿಲ್ ಕುಂಬ್ಳೆ ಕೂಡ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ರು. ಇದ್ರಿಂದ ಧೋನಿ ಟೆಸ್ಟ್ ತಂಡದ ಸಾರಥಿಯಾದ್ರು. ಅಲ್ಲಿಂದ ಶುರುವಾಯ್ತು ಧೋನಿಯ ನಸೀಬು. ಸಾಲು ಸಾಲು ಗೆಲುವುಗಳು ತಂಡದ ಆತ್ಮವಿಶ್ವಾಸವನ್ನ ಹೆಚ್ಚಿಸಿತ್ತು. ಅಷ್ಟೇ ಅಲ್ಲ, ಟೆಸ್ಟ್ ಸರಣಿಗಳಲ್ಲಿ ಟೀಮ್ ಇಂಡಿಯಾ ಸೋಲಿಲ್ಲದ ಸರದಾರನಂತೆ ಮೆರೆದಾಡಿತ್ತು. ಜತೆಗೆ ಟೆಸ್ಟ್ ಚಾಂಪಿಯನ್ ಎಂಬ ಹೆಗ್ಗಳಿಕೆಗೂ ಪಾತ್ರವಾಯ್ತು.
ಆದ್ರೂ ಟ್ವೆಂಟಿ ಟ್ವೆಂಟಿ ವಿಶ್ವಕಪ್, ಏಷ್ಯಾಕಪ್ ಸೇರಿದಂತೆಕೆಲವೊಂದು ಪ್ರತಿಷ್ಠಿತ ಟೂರ್ನಿಗಳಲ್ಲಿ ಧೋನಿ ಪಡೆ ನಿರಾಸೆ ಅನುಭವಿಸಿದ್ದು ಉಂಟು. ಆದ್ರೆ ಈ ಸೋಲುಗಳನ್ನ ಸಾಲುಸಾಲುಗೆಲುವುಗಳು ಮರೆಮಾಚುವಂತೆ ಮಾಡಿದ್ದವು. ಇದ್ರಿಂದ ಧೋನಿಯ ನಾಯಕತ್ವಕ್ಕೆ ಅಷ್ಟೊಂದು ಎಫೆಕ್ಟ್ ಆಗಲಿಲ್ಲ.
ಈ ನಡುವೆ, ಧೋನಿಯ ನಾಯಕತ್ವಕ್ಕೆ ಗುರು ಗ್ಯಾರಿ ಕಸ್ಟರ್ನ್ ಮಾರ್ಗದರ್ಶನ ನೀಡಿದ್ರು. ಕೋಚ್ ಅನ್ನೋ ಅಹಂ ಬಿಟ್ಟು ಗೆಳೆಯನಂತೆ ಟೀಮ್ ಇಂಡಿಯಾ ಆಟಗಾರರ ತಪ್ಪುಗಳನ್ನ ಗ್ಯಾರಿ ಸರಿಪಡಿಸಿದ್ರು. ಪಬ್ಲಿಸಿಟಿಯಿಂದ ದೂರವೇ ಉಳಿದುಕೊಂಡ ಗ್ಯಾರಿ ಕಸ್ಟರ್ನ್ ಟೀಮ್ ಇಂಡಿಯಾದ ಯಶಸ್ಸಿಗಾಗಿ ಶ್ರಮಿಸಿದ್ರು.
ಸೋತಾಗ ಕುಗ್ಗದೆ, ಗೆದ್ದಾಗ ಬೀಗದೆ ಕೂಲ್ ಆಗಿಯೇ ಹ್ಯಾಂಡಲ್ ಮಾಡ್ತಾ ಇದ್ದ ಧೋನಿ 2011ರ ವಿಶ್ವಕಪ್ ಮೇಲೆ ಚಿತ್ತವನ್ನಿಟ್ಟಿದ್ರು. ಇದಕ್ಕೆಪೂರಕವಾಗಿಯೇ ಗುರು ಗ್ಯಾರಿ ಮಾಸ್ಟರ್ ಪ್ಲಾನ್ ಕೂಡ ಮಾಡ್ಕೊಂಡ್ರು. ಕೋಟಿ ಕೋಟಿ ಭಾರತೀಯ ಕನಸನ್ನ ಸಾಕಾರಗೊಳಿಸಲು ಟೀಮ್ ಇಂಡಿಯಾ ಕೂಡ ಪಣತೊಟ್ಟಿತ್ತು.
ವಿಶ್ವಕಪ್ ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಧೋನಿ ಹುಡುಗರು ಸಾಧಾರಣ ಮಟ್ಟದ ಪ್ರದರ್ಶನ ನೀಡಿದ್ರು. ಆದ್ರೆ ನಾಕೌಟ್ ಹಂತದಲ್ಲಿ ಅದ್ಭುತ ಆಟವನ್ನಾಡಿ ಫೈನಲ್ಗೂ ಎಂಟ್ರಿಯಾಯ್ತು. ಫೈನಲ್ನಲ್ಲಿ ಲಂಕಾ ವಿರುದ್ಧ ಸೋಲಿನ ಭೀತಿಗೆ ಸಿಲುಕಿದಾಗ ಎಮ್.ಎಸ್. ಧೋನಿ ನಾಯಕನ ಆಟವನ್ನಾಡಿದ್ರು. ತನ್ನ ಅದ್ಭುತ ಬ್ಯಾಟಿಂಗ್ನಿಂದ ಲಂಕಾ ಕೈಯಿಂದ ಗೆಲುವನ್ನ ಕಸಿದುಕೊಂಡ ಧೋನಿ ಭಾರತೀಯರ ಹೀರೋ ಅದ್ರು. ವಿಶ್ವ ಕ್ರಿಕೆಟ್ನ ಗ್ರೇಟ್ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ರು. 28 ವರ್ಷಗಳ ವರ್ಷಗಳಿಂದ ಮರೀಚಿಕೆಯಾಗಿದ್ದ ವಿಶ್ವಕಪ್ ಟ್ರೋಫಿಯನ್ನ ಭಾರತಾಂಭೆಗೆ ಅರ್ಪಿಸಿದ್ರು.
ಆದ್ರೆ ವಿಶ್ವಕಪ್ ಗೆದ್ದ ನಂತ್ರ ಎಲ್ಲವೂ ಧೋನಿ ಅಂದುಕೊಂಡಂತೆ ಆಗ್ತಾ ಇಲ್ಲ. ತವರಿನಲ್ಲಿ ಆರ್ಭಟಿಸಿದ್ರೂ ವಿದೇಶಿ ನೆಲದಲ್ಲಿ ಮಂಕಾಗಿದ್ದಾರೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ವೈಟ್ ವಾಶ್ ಮಾಡ್ಕೊಂಡಿರುವುದು ಧೋನಿಯ ನಾಯಕತ್ವಕ್ಕೆ ಕಪ್ಪುಚುಕ್ಕೆಯಾಗಿದೆ. ಇದೀಗ ಧೋನಿಯ ನಾಯಕತ್ವದ ಬಗ್ಗೆ ಅಪಸ್ವರ ಕೇಳಿ ಬರ್ತಿದೆ. ಆದ್ರೆ ಧೋನಿಗೆ ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ಅಭಯ ಇದೆ. ಇದ್ರಿಂದ ಸದ್ಯಕ್ಕಂತೂ ಧೋನಿ ನಾಯಕತ್ವದಿಂದ ಕೆಳಗಿಳಿಯುವುದಿಲ್ಲ. ಒಂದು ವೇಳೆ,ಸಾಲು ಸಾಲು ಸೋಲುಗಳು ಮತ್ತೆ ಆವರಿಸಿಕೊಂಡ್ರೆ ಸ್ವತಃ ಧೋನಿಯೇ ನಾಯಕತ್ವ ತ್ಯಜಿಸುತ್ತಾರೆ ಎಂಬದುರಲ್ಲಿ ಸಂದೇಹವೇ ಇಲ್ಲ.
ಏನೇ ಆದ್ರೂ ಭಾರತೀಯ ಕ್ರಿಕೆಟ್ ಇತಿಹಾಸವೇ ಅಂತಹುದ್ದು. ನಾಯಕನಾಗಿ ಮೆರೆದಾಡಿದವ್ರು ಕೊನೆಗೆ ಮೂಲೆಗುಂಪಾಗಿ ತೆರೆಮರೆಗೆ ಸೇರಿದ್ದಾರೆ. ಇದಕ್ಕೆ ಗಂಗೂಲಿ ಮತ್ತು ದ್ರಾವಿಡ್ ಜಸ್ಟ್ ಎಕ್ಸಾಂಪಲ್ ಅಷ್ಟೇ. ಮುಂದಿನ ದಿನಗಳಲ್ಲಿ ಧೋನಿ ಈ ಲೀಸ್ಟ್ಗೆ ಸೇರ್ಪಡೆಯಾಗುತ್ತಾರಾ ಅನ್ನೋದು ಸದ್ಯಕ್ಕಿರುವ ಕುತೂಹಲ.
ಸನತ್ ರೈ ಸ್ಪೋಟ್ರ್ಸ್ ಬ್ಯೂರೋ ಸಮಯ ನ್ಯೂಸ್ .
ಕಮರಿದ ಚಿನ್ನದ ಹುಡುಗಿಯರ ಕನಸುಗಳು....
ಲಂಡನ್ ಒಲಿಂಪಿಕ್ಸ್ ಹತ್ತಿರವಾಗುತ್ತಿದೆ. ಆದ್ರೆ ನಮ್ಮ ಮುಂದೆ ಈಗ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಅದೇ ಎಲ್ಲಿದ್ದಾರೆ ನಮ್ಮ ಚಿನ್ನದ ಹುಡುಗಿಯರು.. ? ಲಂಡನ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಆಸೆ ಮೂಡಿಸಿದ ಗೋಲ್ಡನ್ ಗಲ್ರ್ಸ್ ಈಗ ಸುದ್ದಿಯಲ್ಲೇ ಇಲ್ಲ... ಒಲಿಂಪಿಕ್ಸ್ ಪದಕ ಗೆಲ್ಲುವ ಕನಸುಗಳೆಲ್ಲಾ ಕಮರಿ ಹೋಗಿದೆ. ಯಾರದ್ದೋ ಮಾತು ಕೇಳ್ಕೊಂಡು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಪದಕ –ಹೆಸರು, ದುಡ್ಡಿನ ಆಸೆಗೋಸ್ಕರ ಉದ್ದೀಪನ ದ್ರವ್ಯ ಸೇವಿಸಿ ತಮ್ಮ ಹೆಸರಿಗೆ ತಾವಾಗೇ ಮಸಿ ಬಳಿದುಕೊಂಡಿದ್ದಾರೆ.
ಹೌದು, 2010ರ ಕಾಮನ್ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಮಹಿಳಾ ರಿಲೆ ತಂಡ ಇತಿಹಾಸ ನಿರ್ಮಿಸಿತ್ತು. ಯಾರು ನಿರೀಕ್ಷಿಸದ ರೀತಿಯಲ್ಲಿ ಚಿನ್ನ ಗೆದ್ದಾಗ ಎಲ್ರೂ ಅಚ್ಚರಿಪಟ್ರು. ಮತ್ತೆ ಕೆಲವರು ಈ ಹುಡುಗಿಯರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಅಷ್ಟೇ ಅಲ್ಲ, ಒಲಿಂಪಿಕ್ಸ್ ಎಂಬ ಮಹಾ ಕ್ರೀಡಾ ಜಾತ್ರೆಯಲ್ಲಿ ಭಾರತದ ಮಹಿಳೆಯರು ಪದಕ ಗೆಲ್ಲುವ ಸಾಮರ್ಥ್ಯಹೊಂದಿದ್ದಾರೆ ಅಂತ ಖುಷಿಪಟ್ರು. ಇನ್ನು ಕೆಲವರು ಈ ಹುಡುಗಿಯರ ಸಾಧನೆಯ ಬಗ್ಗೆ ಅನುಮಾನ ಪಟ್ರು.
ಈ ನಡುವೆ, ಚಿನ್ನ ಗೆದ್ದ ಖುಷಿಯಲ್ಲಿ ಕೋಟಿ ಕೋಟಿ ಭಾರತೀಯರು ಹೆಮ್ಮೆಪಟ್ರು. ಯಾರೊ ಕೆಲವರು ಮತ್ಸರದಿಂದ ಚಿನ್ನದ ಹುಡುಗಿಯರ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ ಎಂದು ಹೇಳ್ಕೊಂಡು ಸುಮ್ಮನಾದ್ರು. ಮತ್ತೊಂದೆಡೆ, ಚಿನ್ನದ ಹುಡುಗಿಯರ ಸಾಧನೆಗೆ ಸನ್ಮಾನ –ನಗದು ಬಹುಮಾನಗಳು ಹರಿದುಬಂದವು. ಹಲವು ವರ್ಷಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿತ್ತು ಅಂತ ಈ ಹುಡುಗಿಯರು ಸಂಭ್ರಮಪಟ್ಟರು. ಜತೆಗೆ ಚಿನ್ನದ ಹುಡುಗಿಯರ ಹಸ್ತಾಕ್ಷರಕ್ಕೂ ಅಭಿಮಾನಿಗಳು ಮುಗಿಬಿದ್ರು.
ಆದ್ರೆ ಈ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಚಿನ್ನದ ಹುಡುಗಿಯರು ಉದ್ದೀಪನ ದ್ರವ್ಯ ಸೇವನೆ ಮಾಡಿದ್ದಾರೆ ಅನ್ನೋ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತ್ತು. ಸ್ಟಾರ್ ಅಥ್ಲೀಟ್ಗಳಾದ ಅಶ್ವಿನಿ ಅಕ್ಕುಂಜೆ, ಸಿನಿ ಜೋಸ್, ಮನ್ದೀಪ್ಕೌರ್, ಮನ್ ಜಿತ್ ಕೌರ್ ಸೇರಿದಂತೆ ಜೌನಾ ಮರ್ಮ್, ಟೀನಾ ಮೇರಿ, ಪ್ರಿಯಾಂಕಾ ಪನ್ವಾರ್ ಉದ್ದೀಪನಾ ದ್ರವ್ಯ ಸೇವನಾ ಪರೀಕ್ಷೆಯಲ್ಲಿ ಫೇಲ್ ಅದ್ರು. ಅಚ್ಚರಿಯಂದ್ರೆ ಏಳು ಅಥ್ಲೀಟ್ಗಳು ಒಂದೇ ಕೋಚ್ನ ಗರಡಿನಲ್ಲಿ ಪಳಗಿದ್ರು. ಜತೆಗೆ ಎಲ್ರೂ ಕೂಡ 400 ಮೀಟರ್ ಓಟದಲ್ಲಿ ಅದ್ಭುತ ಪ್ರದರ್ಶನವನ್ನೇ ನೀಡಿದ್ರು.
ಹಾಗಾದ್ರೆ ಇವ್ರಿಗೆ ಉದ್ದೀಪನಾ ದ್ರವ್ಯ ಸೇವನೆಗೆ ಪ್ರೇರಣೆ ನೀಡಿರುವುದು ಯಾರು... ? ಕೋಚ್ ಮಾತು ಕೇಳಿ ಬಲಿಪಶುಗಳಾದ್ರಾ ? ಅಷ್ಟಕ್ಕೂ ಇವ್ರೆಲ್ಲಾ ಡಿಗ್ರಿ ಪಡೆದುಕೊಂಡವರಲ್ಲ.. ಹಾಗೇ ವೇಗ ಹೆಚ್ಚಿಸಿಕೊಳ್ಳಲು ಯಾವ ಔಷಧಿ ಸೇವಿಸಬೇಕು ಅನ್ನೋ ಸಾಮಾನ್ಯ ಜ್ಞಾನ ಕೂಡ ಇವರಿಗಿಲ್ಲ. ಹಾಗಿದ್ರೂ ಇವ್ರಿಗೆಲ್ಲಾ ಈ ಔಷಧಿಗಳು ಹೇಗೆ ಸಿಕ್ಕಿದ್ದವು.. ? ಯಾವುದಕ್ಕೂ ಉತ್ತರವಿಲ್ಲ. ಯಾಕಂದ್ರೆ ಉತ್ತರ ನೀಡಬೇಕಾದವ್ರು ಭ್ರಷ್ಟಚಾರದ ಆರೋಪ ಹೊತ್ತು ಜೈಲ್ ಸೇರಿಕೊಂಡಿದ್ರು.
ಇನ್ನೊಂದೆಡೆ, ತಾವು ಅಮಾಯಕರು.. ತಾವು ಯಾವುದೇ ಉದ್ದೀಪನಾ ಔಷಧಿ ಸೇವಿಸಿಲ್ಲ ಅಂತ ಈ ಚಿನ್ನದ ಹುಡುಗಿಯರು ಕಣ್ಣೀರಿಟ್ರು. ಒಂದು ವೇಳೆ ಇವ್ರು ಹೇಳುವುದು ನಿಜವಾಗಿದ್ರೆ, ಎ ಮತ್ತು ಬಿ ಸ್ಯಾಂಪಲ್ ಟೆಸ್ಟ್ ಗಳಲ್ಲಿ ಯಾಕೆ ಫೇಲ್ ಆದ್ರು ? ಭಾರತೀಯ ಕ್ರೀಡಾ ಪ್ರಾಧಿಕಾರ ಗೊತ್ತಿದ್ದು ಯಾಕೆ ಮೌನ ವಹಿಸಿತ್ತು...ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಯಾಕೆ ಉತ್ತರ ನೀಡ್ತಾ ಇಲ್ಲ. ಇದನ್ನೆಲ್ಲಾ ಗಮನಿಸಿದಾಗ ಇದ್ರ ಹಿಂದೆ ದೊಡ್ಡವರ ಕೈವಾಡ ಇರೋದು ಸ್ಪಷ್ಟ.
ಅದೇನೇ ಇರಲಿ... ಇವತ್ತು ಈ ಚಿನ್ನದ ಹುಡುಗಿಯರು ಲಂಡನ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿಲ್ಲ. ವರ್ಷಗಳಿಂದ ಕಷ್ಟಪಟ್ಟ ಶ್ರಮ ಎಲ್ಲಾ ವ್ಯರ್ಥವಾಗಿದೆ. ಬಡತನದ ಬೇಗೆಯಲ್ಲಿ ಅರಳುತ್ತಿದ್ದ ಈ ಏಳು ಅಥ್ಲೀಟ್ಗಳ ಬದುಕು ಅಯೋಮಯವಾಗಿದೆ. ಈಗಾಗಲೇ ನಿಷೇಧದಿಂದ ಹೊರಬಂದ ನಂತ್ರ ಶ್ರೇಷ್ಠ ಪ್ರದರ್ಶನ ನೀಡುವ ವಿಶ್ವಾಸವನ್ನ ಈ ಅಥ್ಲೀಟ್ಗಳು ವ್ಯಕ್ತಪಡಿಸುತ್ತಾರೆ. ಆದ್ರೆ ಅವೆಲ್ಲಾ ಆಗು ಹೋಗುವ ಸಂಗತಿಗಳಲ್ಲ.. ಯಾಕಂದ್ರೆ, ಈ ಹಿಂದೆ ಇಂತಹುದ್ದೇ ಆರೋಪ ಹೊತ್ತುಕೊಂಡ ಅಥ್ಲೀಟ್ಗಳು ಮೂಲೆ ಗುಂಪಾಗಿಬಿಟ್ಟಿದ್ದಾರೆ. ಇದ್ರಿಂದ ಈ ಏಳು ಅಥ್ಲೀಟ್ಗಳು ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡ್ತಾರೆ ಎಂಬುದರಲ್ಲಿ ನಂಬಿಕೆ ಇಲ್ಲ.
ಏನೇ ಆದ್ರೂ ಈ ಅಥ್ಲೀಟ್ಗಳ ಬಗ್ಗೆ ಅನುಕಂಪ ಇದೆ. ಆದ್ರೆ ಗೊತ್ತಿದ್ದು ತಪ್ಪು ಮಾಡಿರೋದಕ್ಕೆ ಕ್ಷಮೆ ಇಲ್ಲ. ಆದ್ರೂ ಈ ಚಿನ್ನದ ಹುಡುಗಿಯರ ಓಟ ಇವತ್ತಿಗೂ ಕಣ್ಣ ಮುಂದೆ ಒಂದು ಕ್ಷಣಹಾದು ಹೋಗುತ್ತೆ.. ಚಿನ್ನದ ಪದಕ್ಕಾಗಿ ಚಿರತೆಯಂತೆ ಓಡುತ್ತಿದ್ದ ಈ ಗೋಲ್ಡನ್ ಗಲ್ರ್ಸ್ ಈಗ ನೆನಪು ಅಷ್ಟೇ..ಯಾಕಂದ್ರೆ ಲಂಡನ್ ಒಲಿಂಪಿಕ್ಸ್ನಲ್ಲಿ ಓಡುವ ಅವಕಾಶವನ್ನೇ ಕಳೆದುಕೊಂಡಿದ್ದರೆ. ಎಂಥಾ ದುರಂತ ಅಲ್ವಾ..
ಸನತ್ ರೈ ಸ್ಪೋಟ್ರ್ಸ್ ಬ್ಯೂರೋ ಸಮಯ ನ್ಯೂಸ್
ಲೈಟ್ನಿಂಗ್ ಸ್ಟಾರ್ ಉಸೇನ್ ಬೋಲ್ಟ್...
ವಿಶ್ವ ಅಥ್ಲೆಟಿಕ್ ರಂಗದ ಸುನಾಮಿ... ಚಿರತೆಯನ್ನ ನಾಚಿಸುವಂತಹ ಓಟ... ಗಂಟೆಗೆ 37 ಕಿಲೋ ಮೀಟರ್ ವೇಗದಲ್ಲಿ ಓಡುವ ಮಾನವ... ಅಭಿಮಾನಿಗಳ ಪಾಲಿನ ನೆಚ್ಚಿನ ಲೈಟ್ನಿಂಗ್ ಸ್ಟಾರ್.. ಶರವೇಗದ ಸರದಾರ...
ಉಸೇನ್ ಸೇಂಟ್ ಲಿಯೋ ಬೋಲ್ಟ್...
ಹೌದು, ಉಸೇನ್ ಬೋಲ್ಟ್ ಓಟವೇ ಅಂತಹುದ್ದು. ಒಂದು ಕ್ಷಣ ಇಡೀ ಜಗತ್ತನ್ನೇ ತನ್ನತ್ತ ಸೆಳೆಯುವ ಮಾಂತ್ರಿಕತೆ ಇದೆ. ಅಷ್ಟೇ ಅಲ್ಲ, ಉಸೇನ್ ಓಡ್ತಾರೆ ಅಂದ್ರೆ ಕ್ರೀಡಾಂಗಣವೇ ಭರ್ತಿಯಾಗುತ್ತೆ. ಜತೆಗೆ ಉಸೇನ್... ಉಸೇನ್… ಉಸೇನ್ ಅನ್ನೋ ಕೂಗು ಪ್ರತಿಧ್ವನಿಯಾಗಿ ಕೇಳಿ ಬರುತ್ತೆ.
ಯಾಕಂದ್ರೆ, ಬೋಲ್ಟ್, ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಗುರಿ ತಲುಪುವ ಮಾನವ ರಾಕೆಟ್. ಈ ರಾಕೆಟ್ ಮಾನವನ ಓಟವನ್ನ ಕಣ್ಣು ತುಂಬಿಕೊಳ್ಳಬೇಕು ಅನ್ನೋ ತುಡಿತ ಕ್ರೀಡಾಭಿಮಾನಿಗಳಲ್ಲಿರುತ್ತೆ. ಹಾಗೇ, ಉಸೇನ್ ಬೋಲ್ಟ್ ಕೂಡ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಸ್ಪಂದಿಸುತ್ತಾರೆ. ಇನ್ನು, ಅಭಿಮಾನಿಗಳತ್ತ ಬಿಲ್ಲು ಬಿಡುವ ಶೈಲಿಯಲ್ಲಿ ಗೆಲುವಿನ ಸಂಭ್ರಮವನ್ನ ಹಂಚಿಕೊಳ್ಳುವ ಬೋಲ್ಟ್ ಸ್ಟೈಲ್ಲೇ ಒಂಥರಾ ಡಿಫರೆಂಟ್.
ಅಂದ ಹಾಗೇ ಉಸೇನ್ ಬೋಲ್ಟ್ ಜಗತ್ತಿನ ವೇಗದೂತನಾಗುತ್ತಾರೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಜಮೈಕಾದ ಟ್ರೆಲ್ವಾನಾ ಪಟ್ಟಣದ ಹುಡುಗ ಉಸೇನ್ ಬೋಲ್ಟ್. ಅಪ್ಪ ವೆಲ್ಲೆಸ್ಲಿ ಬೋಲ್ಟ್, ಅಮ್ಮ ಜೆನ್ನಿಫರ್ ಬೋಲ್ಟ್.. ದಿನಸಿ ಅಂಗಡಿಯನ್ನಿಟ್ಟು ಕೊಂಡು ಸಂಸಾರ ಸಾಗಿಸುತ್ತಿದ್ರು. ಅಣ್ಣ –ತಂಗಿಯ ಜತೆ ಬೆಳೆದ ಹುಡುಗ ಉಸೇನ್ ಬೋಲ್ಟ್ ಗೆ ಕ್ರಿಕೆಟ್ ಅಂದ್ರೆ ಪಂಚ ಪ್ರಾಣ. ಅದ್ರಲ್ಲೂ ಪಾಕಿಸ್ಥಾನ ತಂಡದ ಅಭಿಮಾನಿಯಾಗಿದ್ದ ಉಸೇನ್ಗೆ ವಕಾರ್ ಯೂನಸ್ ಅವ್ರ ಪಕ್ಕಾ ಅಭಿಮಾನಿ. .
ಹೀಗೆ ಶಾಲಾ ದಿನಗಳಲ್ಲಿ ಕ್ರಿಕೆಟ್ ಆಡುತ್ತಿದ್ದ ಬೋಲ್ಟ್ ಅಂಗಣದಲ್ಲಿ ಮಿಂಚಿನಂತೆ ಓಡುತ್ತಿದ್ರು. ಇದನ್ನ ಗಮನಿಸಿದ ಕ್ರಿಕೆಟ್ ಕೋಚ್ ಟ್ರ್ಯಾಕ್ ಆಂಡ್ ಫಿಲ್ಡ್ ನತ್ತ ಗಮನಹರಿಸುವಂತೆ ಸಲಹೆ ನೀಡಿದ್ರು. ಇದ್ರಿಂದ ಶಾಲಾ ಕ್ರೀಡಾಕೂಟಗಳಲ್ಲಿ ಬೋಲ್ಟ್ ವೇಗದ ಓಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ರು.
ಆದ್ರೆ ಬೋಲ್ಟ್ ಗೆ ಇದು ಇಷ್ಟವಿರಲಿಲ್ಲ. ಅಪ್ಪ- ಅಮ್ಮನ ಒತ್ತಾಯಕ್ಕಾಗಿ ಓಡುತ್ತಿದ್ರು. ಆದ್ರೂ ಜಮೈಕಾದಲ್ಲಿ 200 ಮೀಟರ್ಮತ್ತು 400 ಮೀಟರ್ ಓಟಗಳಲ್ಲಿ ಮಿಂಚು ಹರಿಸಿದ ಬೋಲ್ಟ್ 2001ರಲ್ಲಿ ವಿಶ್ವ ಯೂತ್ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಿದ್ರು. ಆದ್ರೆ ಸೆಮಿಫೈನಲ್ನಲ್ಲಿ ನಿರಾಸೆ ಅನುಭವಿಸಿದ್ದ ಬೋಲ್ಟ್, 2002ರ ವಿಶ್ವ ಯೂತ್ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದು ಬೀಗಿದ್ರು. ನಂತ್ರ ಹಿಂತಿರುಗಿ ನೋಡಲೇ ಇಲ್ಲ. ಉಸೇನ್ ಓಟಕ್ಕೆ ಮನಸೋತ ಪ್ರತಿಷ್ಠಿತ ಪ್ಯೂಮಾ ಕಂಪೆನಿ ಪ್ರಾಯೋಜಕತ್ವ ಕೂಡ ನೀಡಿತ್ತು.
17ರ ಹರೆಯದಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲೇ ಸುದ್ದಿ ಮಾಡಿದ ಉಸೇನ್, ಅಥೆನ್ಸ್ ಒಲಿಂಪಿಕ್ಸ್ನ ವೇಗದೂತನಾಗುತ್ತಾರೆ ಅಂತಲೇ ಭವಿಷ್ಯ ನುಡಿಯಲಾಗಿತ್ತು. ಆದ್ರೆ ಯಶಸ್ಸಿನ ಆಮಲು ಬೋಲ್ಟ್ ಅವ್ರನ್ನ ಅಡ್ಡ ದಾರಿ ಹಿಡಿಯುವಂತೆ ಮಾಡಿತ್ತು. ಪಾರ್ಟಿ, ಡಾನ್ಸ್, ಶೋಕಿ ಜೀವನ ಸಾಗಿಸುತ್ತಿದ್ದ ಬೋಲ್ಟ್ ಗಾಯದ ಸಮಸ್ಯೆಗೂ ತುತ್ತಾದ್ರು. ಇದ್ರಿಂದ ಅಥೆನ್ಸ್ ಒಲಿಂಪಿಕ್ಸ್ ನಲ್ಲಿ ಗಾಯದಿಂದ ಚೇತರಿಸಿಕೊಳ್ಳದೇ ಕಣಕ್ಕಿಳಿದ್ರು. ಪರಿಣಾಮ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ರು. ಇದು ಬೋಲ್ಟ್ ಅವ್ರನ್ನ ಘಾಸಿಗೊಳಿಸುವಂತೆ ಮಾಡಿತ್ತು.
ಸೋಲು ಒಪ್ಪಿಕೊಳ್ಳಲು ರೆಡಿ ಇಲ್ಲದ ಉಸೇನ್ ಬದುಕಿನಲ್ಲಿ ಸಾಕಷ್ಟು ಬದಲಾದ್ರು. ಅಥ್ಲೆಟಿಕ್ಸ್ ತನ್ನ ಉಸಿರು ಅಂತ ನಂಬಿಕೊಂಡ್ರು. ನೂರು ಮತ್ತು 200 ಮೀಟರ್ ಓಟಗಳಲ್ಲಿ ತ್ರಿವಿಕ್ರಮನಾಗಬೇಕು ಅಂತ ಪಣತೊಟ್ರು. ಅದಕ್ಕಾಗಿ ಫಿಟ್ಜ್ ಕೊಲೆಮನ್ ಗರಡಿಯಲ್ಲಿ ಪಳಗಿದ್ರು. ಸುಸ್ತಾಗುವಷ್ಟು ಅಭ್ಯಾಸ ನಡೆಸುತ್ತಿದ್ದ ಬೋಲ್ಟ್ ತನ್ನ ವೇಗವನ್ನ ಹೆಚ್ಚಿಸಿಕೊಂಡ್ರು. ಸ್ವಿಮ್ಮಿಂಗ್ ಫೂಲ್ನಲ್ಲಿ ಓಡ್ಕೊಂಡು, .ಸೊಂಟಕ್ಕೆ ಟಯರ್ ಕಟ್ಕೊಂಡು ಅಭ್ಯಾಸ ನಡೆಸುತ್ತಿದ್ದ ಬೋಲ್ಟ್ ಜಿಮ್ನಲ್ಲೂ ಬೆವರಿಳಿಸಿದ್ರು.
ಹೀಗೆ ಕಠಿಣ ಅಭ್ಯಾಸ ಮಾಡ್ಕೊಂಡು ಮಹತ್ವದ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿ ಬೀಜಿಂಗ್ ಒಲಿಂಪಿಕ್ಸ್ ಗೆ ರೆಡಿಯಾದ್ರು. ನಂತ್ರ ನಡೆದದ್ದು ಬರೀ ಇತಿಹಾಸ.. ಬೀಜಿಂಗ್ ಒಲಿಂಪಿಕ್ಸ್ ನ ನೂರು ಮತ್ತು 200 ಮೀಟರ್ ಓಟಗಗಳಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದು ಇತಿಹಾಸ ಬರೆದ್ರು.
ಬಳಿಕ, ಬೋಲ್ಟ್ ಅವ್ರ ಜವಾಬ್ದಾರಿ ಹೆಚ್ಚಾಯ್ತು. ಪ್ರತಿಯೊಂದು ಕ್ರೀಡಾಕೂಟದ ಕೂಡ ಪ್ರತಿಷ್ಠೆಯ ಕಣವಾಗಿತ್ತು. ಅದ್ರಲ್ಲೂ 2009ರ ಬರ್ಲಿನ್ ಕ್ರೀಡಾಕೂಟದಲ್ಲಿ ಉಸೇನ್ ಬೋಲ್ಟ್ ನೂರು ಮೀಟರ್ ಓಟವನ್ನ9.58 ಸೆಕೆಂಡ್ಹಾಗೂ 200 ಮೀಟರ್ ಓಟವನ್ನ 19.19 ಸೆಕೆಂಡ್ಗಳಲ್ಲಿ ಕ್ರಮಿಸಿ ವಿಶ್ವ ದಾಖಲೆ ನಿರ್ಮಿಸಿದ್ರು. ಹೀಗೆ 2011ರ ತನಕ ಉಸೇನ್ ಬೋಲ್ಟ್ ಸೋಲಿಲ್ಲದ ಸರದಾರನಂತೆ ಮೆರೆದಾಡಿದ್ರು.
ಮತ್ತೊಂದೆಡೆ, ಉಸೇನ್ ಬೋಲ್ಟ್ ಲಂಡನ್ ಒಲಿಂಪಿಕ್ಸ್ ಮೇಲೂ ಚಿತ್ತವನ್ನಿಟ್ಟಿದ್ರು. ಒಡನಾಡಿ ಯೊಹಾನ್ ಬ್ಲೇಕ್ ಜತೆ ಅಭ್ಯಾಸ ಕೂಡ ನಡೆಸುತ್ತಿದ್ರು. ಇನ್ನೇನೂ ಲಂಡನ್ ಒಲಿಂಪಿಕ್ ಸನೀಹವಾಗುತ್ತಿದ್ದಂತೆ ಬೋಲ್ಟ್ ಆಘಾತ ಅನುಭವಿಸಿದ್ರು. ಡಿಯಾಗೊದಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ನ ನೂರು ಮೀಟರ್ ಓಟದಲ್ಲಿ ಬೋಲ್ಟ್ ಫೌಲ್ ಸ್ಟಾರ್ಟ್ ಮಾಡಿದ್ರು. ಪರಿಣಾಮ ಸ್ಪರ್ಧೆಯಿಂದಲೇ ಬೋಲ್ಟ್ ಹೊರಬಿದ್ರು. ಇದ್ರಿಂದ ಹತಾಶನಾದ ಉಸೇನ್ ಬೋಲ್ಟ್ 15 ನಿಮಿಷಗಳ ಕಾಲ ಎಲ್ಲಿದ್ರೂ ಎಂಬುದು ಯಾರಿಗೂ ಗೊತ್ತೇ ಆಗಲಿಲ್ಲ.
ಅಷ್ಟೇ ಅಲ್ಲ, ತನ್ನ ಒಡನಾಡಿ, ಗೆಳೆಯ ಯೋಹಾನ್ ಬ್ಲೇಕ್ ಚಿನ್ನ ಗೆದ್ರೂ ಅದನ್ನ ಬೋಲ್ಟ್ ಒಪ್ಪಿಕೊಳ್ಳಲು ರೆಡಿ ಇರಲಿಲ್ಲ. ಯೋಹಾನ್ ಅವ್ರನ್ನ ಚುಡಾಯಿಸಿಕೊಂಡು ತನ್ನ ನೋವನ್ನ ಮರೆಯುವಂತೆ ಮಾಡ್ತಾ ಇದ್ರು. ಮತ್ತೊಂದೆಡೆ, 200 ಮೀಟರ್ ಓಟದಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದ್ರೂ ನೂರು ಮೀಟರ್ ಓಟದ ಸೋಲು ಮಾತ್ರ ಅವ್ರನ್ನ ಕಾಡುತ್ತಲೇ ಇತ್ತು.
ಒಟ್ಟಿನಲ್ಲಿ ಲಂಡನ್ ಒಲಿಂಪಿಕ್ಸ್ ನಲ್ಲಿ ಉಸೇನ್ ಬೋಲ್ಟ್ ಸುಲಭವಾಗಿ ಚಿನ್ನ ಗೆಲ್ಲುವುದಿಲ್ಲ ಅಂತ ಅಂದುಕೊಂಡವರಿಗೆಲ್ಲಾ ಈಗ ಉತ್ತರ ನೀಡಿದ್ದಾರೆ. 100 ಮೀಟರ್ ಓಟದಲ್ಲಿ ಜಿದ್ದಾಜಿದ್ದಿನ ಪೈಪೋಟಿಯ ನಡುವೆ ಚಿನ್ನ ಗೆದ್ರೆ, 200 ಮೀಟರ್ ಓಟ ಹಾಗೂ 400 ಇಂಟ್ 100 ಮೀಟರ್ ರಿಲೆನಲ್ಲಿ ಸುಲಭವಾಗಿ ಮೊದಲ ಸ್ಥಾನ ಪಡೆದು ಒಲಿಂಪಿಕ್ಸ್ ನಲ್ಲಿ ದಾಖಲೆಯನ್ನೇ ಬರೆದ್ರು. ಸತತ ಎರಡು ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಆರು ಚಿನ್ನ ಗೆದ್ದ ಮೊದಲ ಅಥ್ಲೀಟ್ ಅನ್ನೋ ಹೆಗ್ಗಳಿಕೆ ಉಸೇನ್ ಬೋಲ್ಟ್ ಅವ್ರದ್ದು.
ಅದೇನೇ ಇರಲಿ... ಉಸೇನ್ ಬೋಲ್ಟ್ ಮತ್ತು ಅವ್ರ ಸಾಧನೆಯನ್ನ ಯಾರಿಗೂ ಹೊಲಿಕೆ ಮಾಡಲು ಸಾಧ್ಯವಿಲ್ಲ. ಜಮೈಕಾದ ಬಡ ಕುಟುಂಬದ ಹುಡುಗನೊಬ್ಬ ಶರವೇಗದ ಸರದಾರನಾದ ರಿಯಲ್ ಸ್ಟೋರಿ ಯುವ ಅಥ್ಲೀಟ್ಗಳಿಗೆ ದಾರಿದೀಪ. ಯಶಸ್ಸಿನ ಆಮಲಿನಿಂದ ಅಡ್ಡದಾರಿ ಹಿಡಿದ್ರೂ ಅದ್ರಿಂದ ಬುದ್ದಿ ಕಲಿತುಕೊಂಡಿರುವ ಉಸೇನ್ ಬೋಲ್ಟ್ ಯಶಸ್ಸಿನ ಶಿಖರವೇರಿದ್ದಾರೆ. ಈಗ ಏನಿದ್ರೂ ಉಸೇನ್ ಬೋಲ್ಟ್ ಗೆ ಉಸೇನ್ ಬೋಲ್ಟೇ ಪ್ರತಿಸ್ಪರ್ಧಿ.
ಸನತ್ ರೈ ಸ್ಪೋಟ್ರ್ಸ್ ಬ್ಯೂರೋ ಸಮಯ ನ್ಯೂಸ್
Subscribe to:
Posts (Atom)