Sunday, November 20, 2011

ಕಾಂಬ್ಳಿಯ ಮರ್ಕಟ ಆಟ

ವಿನೋದ್‌ ಕಾಂಬ್ಳಿ...ಮುಂಬೈ ಹುಡುಗ. ಎಲ್ಲವೂ ಅಂದುಕೊಂಡಂತೆ ಆಗ್ತಾ ಇದ್ರೆ ಇವತ್ತು ವಿನೋದ್‌ ಕಾಂಬ್ಳಿಯ ಹೆಸರು ಕೂಡ ವಿಶ್ವ ಕ್ರಿಕೆಟ್‌ನಲ್ಲಿ ರಾರಾಜಿಸುತ್ತಿತ್ತು. ಆದ್ರೆ ಬದುಕು ನಾವು ಅಂದುಕೊಂಡಂತಿಲ್ಲ. ಇದ್ರಿಂದಲೇ ಕಾಂಬ್ಳಿ ದುರಂತ ಕ್ರಿಕೆಟಿನಾಗಿರುವುದು. ಫ್ಲೋ... ಬ್ಯಾಟಿಂಗ್‌ ಮತ್ತು ಕಣ್ಣೀರು...
ಹೌದು, ಪ್ರತಿಭೆ ಯಾರ ಸ್ವತ್ತು ಅಲ್ಲ. ಹಾಗಂತ ಸುಮ್ಮನೆ ಕೂತ್ರೆ ಆಗಲ್ಲ. ನಿಖರ ಗುರಿ, ಶಿಸ್ತಿನಿಂದ ಮುನ್ನಡೆದ್ರೆ ಮಾತ್ರ ಪ್ರತಿಭೆಯನ್ನ ಅನಾವರಣಗೊಳಿಸಬಹುದು. ಆಗ ಮಾತ್ರ ಬದುಕಿಗೆ ನಿಜವಾದ ಅರ್ಥವನ್ನ ಕಲ್ಪಿಸಬಹುದು. ದುರಂತ ಅಂದ್ರೆ ವಿನೋದ್‌ ಕಾಂಬ್ಳಿಗೆ ಪ್ರತಿಭೆ ಇದ್ರೂ ಅದನ್ನ ಸರಿಯಾಗಿ ಬಳಸಿಕೊಳ್ಳಲಿಲ್ಲ. ಪರಿಣಾಮ, ತನ್ನ ವರ್ಣರಂಜಿತ ಕ್ರಿಕೆಟ್‌ ಬದುಕಿಗೆ ಬ್ಯಾಡ್‌ ಬಾಯ್‌ ಅನ್ನೋ ಇಮೇಜ್‌ ಅಂಟಿಕೊಂಡಿತ್ತು. ಜತೆಗೆ ಬಾಲ್ಯದಲ್ಲಿ ಕಟ್ಟಿಕೊಂಡಿದ್ದ ಕನಸು ಕನಸಾಗಿಯೇ ಉಳಿಯಿತ್ತು.
ಹಾಗಂತ ವಿನೋದ್‌ ಕಾಂಬ್ಳಿ ಕೆಟ್ಟವರಲ್ಲ.. ಆದ್ರೆ ದುಡ್ಡು ಅವ್ರ ವ್ಯಕ್ತಿತ್ವವನ್ನೇ ಹಾಳು ಮಾಡಿಬಿಟ್ಟಿತ್ತು. ಅದೇನೋ ಅಂತಾರಲ್ಲ. ಅಲ್ಪನಿಗೆ ಐಶ್ವರ್ಯ ಬಂದ್ರೆ ನಡು ರಾತ್ರಿಯಲ್ಲಿಎದ್ದು ಕೊಡೆ ಹಿಡಿದ ಅಂತ, ಹಾಗೇ ಆಗಿದೆ ಕಾಂಬ್ಳಿಯ ಜೀವನ ಚಕ್ರ. ಅಲ್ಪ ಅವಧಿಯಲ್ಲಿ ಕಂಡ ಯಶಸ್ಸು ಕಾಂಬ್ಳಿಯ ಕ್ರಿಕೆಟ್‌ ಬದುಕನ್ನೇ ಸರ್ವನಾಶ ಮಾಡಿತ್ತು. ಹುಂಬುತನ, ಅತೀಯಾದ ಆತ್ಮವಿಶ್ವಾಸ, ದುಡ್ಡು, ಮೋಜು, ಮಸ್ತಿ, ಹೆಣ್ಣಿನ ಸಂಗದಿಂದ ಕ್ರಿಕೆಟ್‌ ಮೇಲಿನ ಆಸಕ್ತಿ ಕಮ್ಮಿಯಾಯ್ತು. ಇದ್ರಿಂದ ಭಾರತ ಕ್ರಿಕೆಟ್‌ ತಂಡಕ್ಕೆ ವಿನೋದ್‌ ಕಾಂಬ್ಳಿ ಬಂದು ಹೋಗುವ ಅತಿಥಿಯಾದ್ರು.
ಆದ್ರೆ ಕಾಂಬ್ಳಿಯ ಬಾಲ್ಯದ ದಿನಗಳನ್ನ ನೆನಪಿಸಿಕೊಂಡಾಗ ಎಂಥವರ ಮನ ಕೂಡ ಕರಗಬಹುದು. ಯಾಕಂದ್ರೆ ಕಾಂಬ್ಳಿಯ ಕ್ರಿಕೆಟ್‌ ಬದುಕು ಅರಳಿದ್ದು ಬಡತನದ ಬೇಗೆಯಲ್ಲಿ. ಮಾಯಾ ನಗರಿಯ ವಠಾರದಲ್ಲಿ ಆಡಿ ಬೆಳೆದ ಹುಡುಗ ಮುಂದೊಂದು ದಿನ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗುತ್ತಾನೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ವಠಾರದ ಮುಂದಿರುವ ದೊಡ್ಡ ದೊಡ್ಡ ಕಟ್ಟಡಗಳನ್ನ ನೋಡ್ಕೊಂಡು ಅದಕ್ಕಿಂತಲೂ ಎತ್ತರವಾಗಿ ಚೆಂಡನ್ನ ಹೊಡೆಯುತ್ತಿದ್ದ ವಿನೋದ್‌ ಕಾಂಬ್ಳಿಯ ಕ್ರಿಕೆಟ್‌ ಆಸಕ್ತಿಗೆ ಅಪ್ಪ ಗಣಪತಿ ಕಾಂಬ್ಳಿ ಪ್ರೊತ್ಸಾಹ ನೀಡಿದ್ರು.
ತಿಂಗಳಿಗೆ 600 ರೂಪಾಯಿ ಸಂಪಾದನೆ ಮಾಡ್ತಾ ಇದ್ದ ಗಣಪತಿ ಕಾಂಬ್ಳಿಗೆ ಸಂಸಾರವನ್ನ ಮುನ್ನಡೆಸುವುದೇ ದೊಡ್ಡ ಕಷ್ಟವಾಗುತ್ತಿತ್ತು. 18 ಸದಸ್ಯರನ್ನೊಳಗೊಂಡ ಅವಿಭಕ್ತ ಕುಟುಂಬದಲ್ಲಿ ಬೆಳೆದ ಕಾಂಬ್ಳಿಗೆ ಕ್ರಿಕೆಟ್‌ ಪ್ರತಿಭೆ ಮಾತ್ರ ಬಡತನವಾಗಿ ಕಾಡಲಿಲ್ಲ. ಗುರು ರಮಕಾಂತ್‌ ಅಚ್ರೆಕರ್‌ ಮಾರ್ಗದರ್ಶನ, ಶಿಕ್ಷಕರ ಆರ್ಥಿಕ ಬೆಂಬಲ, ಅದಕ್ಕಿಂತಲೂ ಹೆಚ್ಚಾಗಿ ಆಪ್ತ ಗೆಳೆಯ ಸಚಿನ್‌ ತೆಂಡುಲ್ಕರ್‌ ಒಡನಾಟ, ವಿನೋದ್‌ ಕಾಂಬ್ಳಿಗೆ ಬಡತನದ ನೋವನ್ನ ಮರೆಯುವಂತೆ ಮಾಡಿತ್ತು.
ಬಳಿಕ ಕಾಂಬ್ಳಿಯ ಪ್ರತಿಭೆಗೆ ಮನ್ನಣೆ ನೀಡಿದ್ದು ಶಾರದಾಶ್ರಮ ಸ್ಕೂಲ್‌. ಸೇಂಟ್‌ ಕ್ಸೆವಿಯರ್‌ ಸ್ಕೂಲ್‌ ವಿರುದ್ಧ ಸಚಿನ್‌ ಜತೆಗೂಡಿ ಅಜೇಯ 664 ರನ್‌ ಕಲೆ ಹಾಕಿದ್ದು ಈಗ ಇತಿಹಾಸ. ಇಲ್ಲಿ ಕಾಂಬ್ಳಿ ಅಜೇಯ 349 ರನ್‌ ಸಿಡಿಸಿದ್ದು, ಅಲ್ಲದೆ, ಸಚಿನ್‌ಗಿಂತ ಅಧಿಕ ರನ್‌ ಸಹ ದಾಖಲಿಸಿದ್ರು. ಆದ್ರೆ ಸಚಿನ್‌ಗಿರುವಷ್ಟು ಅದೃಷ್ಟ ಕಾಂಬ್ಳಿಗೆ ಇರಲಿಲ್ಲ. ರಣಜಿ ಮತ್ತು ಭಾರತ ತಂಡಕ್ಕೆ ಕಾಂಬ್ಳಿಗಿಂತ ಮುನ್ನವೇ ಸಚಿನ್‌ ಎಂಟ್ರಿಕೊಟ್ರು. ಆದ್ರೂ ಕಾಂಬ್ಳಿ ಅಸೂಯೆ ಪಡಲಿಲ್ಲ. ಬದಲಾಗಿ ತನ್ನ ಗೆಳೆಯನ ಹಾದಿಯಲ್ಲೇ ತನಗೂ ಅವಕಾಶ ಸಿಕ್ಕೇ ಸಿಗುತ್ತೆ ಅಂತ ನಂಬಿಕೊಂಡಿದ್ರು.
ಅಂದ ಹಾಗೇ ಕಾಂಬ್ಳಿಯ ನಂಬಿಕೆ ಹುಸಿಯಾಗಲಿಲ್ಲ. 17ನೇ ಹರೆಯದಲ್ಲೇ ಮುಂಬೈ ರಣಜಿ ತಂಡವನ್ನ ಸೇರಿಕೊಂಡ್ರು.ಅಲ್ಲದೆ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ ಗಟ್ಟಿ ಎಲ್ರನ್ನ ಚಕಿತಗೊಳಿಸಿದ್ರು. ನಂತ್ರ ಹಿಂತಿರುಗಿ ನೋಡಲಿಲ್ಲ. ಆಕರ್ಷಕ ಎಡಗೈ ಬ್ಯಾಟಿಂಗ್‌ನಿಂದ ಮಿಂಚುಹರಿಸಿದ ಕಾಂಬ್ಳಿ 19ನೇ ವಯಸ್ಸಿನಲ್ಲಿ ಭಾರತದ ಏಕದಿನ ತಂಡದಲ್ಲಿ ಕಾಣಿಸಿಕೊಂಡ್ರು. ಹಾಗೇ, 1993ರಲ್ಲಿ ಇಂಗ್ಲೆಂಡ್‌ ವಿರುದ್ಧ ಚೊಚ್ಚಲ ಟೆಸ್ಟ್‌ವನ್ನಾಡಿದ ಕಾಂಬ್ಳಿ ಅಲ್ಲೂ ಸೈ ಅನ್ನಿಸಿಕೊಂಡ್ರು. ಅಲ್ಲದೆ ಮೂರು ಪಂದ್ಯಗಳಲ್ಲಿ ಎರಡು ದ್ವಿಶತಕ ದಾಖಲಿಸಿ ಗಮನ ಸೆಳೆದ್ರು.
ಇಲ್ಲಿಯವರೆಗೆ ಎಲ್ಲವೂ ಸರಿಯಾಗೇ ಇತ್ತು. ನಂತ್ರ ಕಾಂಬ್ಳಿ ಅಡ್ಡ ದಾರಿ ಹಿಡಿದ್ರು. ಕ್ರಿಕೆಟ್‌ ಬದುಕು ಅಂತ ನಂಬಿಕೊಂಡಿದ್ದ ಕಾಂಬ್ಳಿ, ಯಾಕೋ ಕ್ರಿಕೆಟ್‌ ಶೋಕಿ ಅಂತನೇ ಭಾವಿಸಿದ್ರು. ಕ್ರಿಕೆಟ್ ಇಷ್ಟೇ ಅನ್ನೋ ಅಸಡ್ಡೆ ಭಾವನೆ ಮೂಡಿತ್ತು. ಅಂಗಣದಲ್ಲಿ ಚೆಲ್ಲಾಟವಾಡ್ತಾ ಇದ್ರು. ಹೇರ್‌ ಸ್ಟೈಲ್‌, ಗಾಗಲ್‌ ಜತೆಗೆ ಫೀಲ್ಡಿಂಗ್ ಮಾಡುವಾಗ ಚಿತ್ರ ವಿಚಿತ್ರ ಹಾವಭಾವಗಳಿಂದ ಅಭಿಮಾನಿಗಳನ್ನ ರಂಜಿಸ್ತಾ ಇದ್ರು. ಆದ್ರೆ ಇದೆಲ್ಲಾ ಅಶಿಸ್ತು ಅನ್ನೋ ಮನೋಭಾವನೆ ಮಾತ್ರ ಕಾಂಬ್ಳಿಯ ಮನಸ್ಸಿಗೆ ಅರ್ಥನೇ ಆಗಲಿಲ್ಲ.
ಬರ್ತಾ ಬರ್ತಾ ಕಾಂಬ್ಳಿ ವಿನೋದವಾದ್ರು. ಚಂಚಲೆಯಾದ ಮನಸ್ಸನ್ನ ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಎಲ್ಲವೂ ಪರ್ಫೆಕ್ಟ್‌ ಅಂತ ನಂಬಿಕೊಂಡಿದ್ದ ಕಾಂಬ್ಳಿಗೆ ತನ್ನ ವೀಕ್‌ನೆಸ್‌ ಏನೂ ಎಂಬುದರ ಪರಿವೇ ಇರಲಿಲ್ಲ. ಆದ್ರೂ ಸ್ಪಿನ್ನ ರ್‌ಗಳ ಎದುರು ಕಾಂಬ್ಳಿ ಅಬ್ಬರಿಸ್ತಾ ಇದ್ರು. ಅದ್ರಲ್ಲೂ ಟೆಸ್ಟ್‌ ಪಂದ್ಯವೊಂದರಲ್ಲಿ ಶೇನ್‌ ವಾರ್ನ್‌ ಅವ್ರ ಒಂದೇ ಓವರ್‌ನಲ್ಲಿ 22 ರನ್‌ ಸಿಡಿಸಿರುವುದನ್ನ ಅಷ್ಟೊಂದು ಸುಲಭವಾಗಿ ಮರೆಯೋಕೆ ಆಗಲ್ಲ.
ಆದ್ರೆ ಕಾಂಬ್ಳಿ ಶಾರ್ಟ್‌ ಬೌಲ್‌ ಎಸೆತಗಳಿಗೆ ಮಾತ್ರ ನಿರುತ್ತರಾಗುತ್ತಿದ್ರು. ಹಾಗಂತ ಇದನ್ನ ಸರಿಪಡಿಸಿಕೊಳ್ಳುವ ಮನಸ್ಸು ಮಾಡಲಿಲ್ಲ. 1994ರಲ್ಲಿ ಕೆರೆಬಿಯನ್ನರು ಶಾರ್ಟ್‌ ಬೌಲ್‌ ಎಸೆತಗಳನ್ನ ಎಸೆಯುವ ಮೂಲಕ ಕಾಂಬ್ಳಿಯ ವಿಕ್‌ನೆಸ್ ಅನ್ನು ಬಹಿರಂಗಗೊಳಿಸಿದ್ರು.
ನಂತ್ರ ಭಾರತ ತಂಡದಲ್ಲಿ ಕಾಂಬ್ಳಿಗೆ ಅಭದ್ರತೆ ಕಾಡಿತ್ತು. ಕೇವಲ ಎರಡು ಮೂರು ವರ್ಷಗಳಲ್ಲಿ ಪೌರುಷ ತೋರಿದ್ದ ವಿನೋದ್‌ ಕಾಂಬ್ಳಿ ಕ್ರಮೇಣ ವಿಶ್ವ ಕ್ರಿಕೆಟ್‌ಗೆ ಅಪರಿಚಿತರಾದ್ರು. 9 ಬಾರಿ ಭಾರತ ಕ್ರಿಕೆಟ್‌ ತಂಡಕ್ಕೆ ಬಂದು ಹೋಗಿರುವ ವಿನೋದ್‌ ಕಾಂಬ್ಳಿ ತನ್ನ ಕ್ರಿಕೆಟ್‌ ಬದುಕನ್ನು ತಾವಾಗಿಯೇ ಹಾಳು ಮಾಡ್ಕೊಂಡ್ರು.
ಇದೀಗ ಕಾಂಬ್ಳಿ ಕಣ್ಣೀರು ಹಾಕ್ತಾ ಇದ್ದಾರೆ. ಯಾವತ್ತೋ ಹೇಳಬೇಕಾಗಿದ್ದ ಸತ್ಯಸಂಗತಿಗಳನ್ನ ಈಗ ಹೇಳ್ತಾ ಇದ್ದಾರೆ. ಆದ್ರೆ ಅದನ್ನ ಯಾರು ನಂಬುತ್ತಿಲ್ಲ. ಯಾಕಂದ್ರೆ ಕಾಂಬ್ಳಿ ಅಂತಹ ವರ್ಚಸ್ಸು ಹಾಗೂ ವ್ಯಕ್ತಿತ್ವವನ್ನ ಮೈಗೂಡಿಸಿಕೊಂಡಿಲ್ಲ. ತನ್ನ ಬದುಕನ್ನ ತನಗೆ ರೂಪಿಸಿಕೊಳ್ಳಲು ಸಾಧ್ಯವಾಗಿಲ್ಲ ಅನ್ನೋ ನೋವು ಅವ್ರ ಮುಖದಲ್ಲಿದೆ. ಆದ್ರೆ ಅದನ್ನ ಹೇಳಿಕೊಳ್ಳಲು ಆಗ್ತಾ ಇಲ್ಲ. ಹಾಗಂತ ತನ್ನ ಬದುಕು ಇನ್ನೊಬ್ಬನಿಂದ ಹಾಳಾಯ್ತು ಅನ್ನೋದ್ರಲ್ಲಿ ಅರ್ಥವಿಲ್ಲ.
ಸನತ್ ರೈ

Thursday, November 17, 2011

ಅಭಿಮಾನಿ ದೇವ್ರು ಮತ್ತು ಕ್ರಿಕೆಟ್‌ ದೇವ್ರು...

ಡಾ. ರಾಜ್‌ ಕುಮಾರ್‌.. ನಟ ಸಾರ್ವಭೌಮ ..ಸಚಿನ್‌ ತೆಂಡುಲ್ಕರ್‌... ವಿಶ್ವ ಕ್ರಿಕೆಟ್‌ನ ಸಾಮ್ರಾಟ.. ಡಾ. ರಾಜ್‌ಗೆ ನಟನೆಯೇ ಆರಾಧ್ಯದೈವ... ಸಚಿನ್‌ಗೆ ಮೈದಾನವೇ ಸಾಧನೆಯ ಸ್ವರ್ಗ... ತನ್ನನ್ನು ಆರಾಧಿಸುವ ಅಭಿಮಾನಿಗಳನ್ನ ಡಾ. ರಾಜ್‌ ದೇವರೆಂದು ತಿಳಿದ್ರೆ, ಸಚಿನ್‌ಗೆ ಅಭಿಮಾನಿಗಳೇ ಕ್ರಿಕೆಟ್‌ ದೇವ್ರ ಅಂತ ಕರೆದಿದ್ದಾರೆ..
ಕನ್ನಡ ಚಿತ್ರರಂಗದಲ್ಲಿ ಅಪ್ರತಿಮ ಸಾಧನೆ ಮಾಡಿ ನಮ್ಮನ್ನಗಲಿರುವ ಡಾ. ರಾಜ್‌ ಕುಮಾರ್‌ ಮತ್ತು ವಿಶ್ವ ಕ್ರಿಕೆಟ್‌ನಲ್ಲಿ ಅನಭಿಷಕ್ತ ದೊರೆಯಾಗಿ ಮಿಂಚುತ್ತಿರುವ ಸಚಿನ್‌ ತೆಂಡುಲ್ಕರ್‌ ಅವ್ರ ಜನುಮ ದಿನ ಏಪ್ರಿಲ್‌ 24.
ಚಲನ ಚಿತ್ರ ರಂಗದಲ್ಲಿ ಮಹಾನ್‌ ಸಾಧನೆ ಮಾಡಿದ ರಾಜ್‌ ಕುಮಾರ್‌ ಮತ್ತು ವಿಶ್ವ ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ಮಾಡುತ್ತಿರುವ ಸಚಿನ್ ತೆಂಡುಲ್ಕರ್‌ ಎಲ್ರಿಗೂ ಆದರ್ಶ ಪ್ರಾಯರಾಗಿದ್ದಾರೆ. ಸಾಧನೆ, ಪರಿಶ್ರಮ, ಬದ್ಧತೆಯಿಂದ ಯಶಸ್ಸು ಸಾಧಿಸಬಹುದು ಅನ್ನೋದನ್ನ ಸಾಧಿಸಿದ ಧೀಮಂತರು.
ಪ್ರತಿಭೆ ಯಾರ ಸ್ವತ್ತಲ್ಲ.. ಕದಿಯೋದಕ್ಕಾಗ್ಲಿ, ನಾಶಮಾಡೋದಾಕ್ಕಾಗ್ಲಿ ಸಾಧ್ಯವಿಲ್ಲ. ಹಾಗಂತ ಸುಮ್ಮನೆ ಕೂತ್ರೆ ಪ್ರತಿಭೆ ಅನಾವರಣಗೊಳ್ಳುವುದಿಲ್ಲ. ಸಿಕ್ಕ ಅವಕಾಶಗಳನ್ನು ಕೈಚಾಚಿ ಬಾಚಿಕೊಳ್ಳಬೇಕು ಅನ್ನೋ ತತ್ವವನ್ನು ಪಾಲಿಸಿದವರು ಇವರು. ಇದನ್ನೇ ಸಾಬೀತು ಪಡಿಸಿದ ಧೀಮಂತರು ಸಚಿನ್ ಮತ್ತು ಡಾ. ರಾಜ್‌. ಯಶಸ್ಸಿನ ಮೆಟ್ಟಿಲುಗಳು ಎಷ್ಟು ಎಂದು ಕೇಳಿದ್ರೇ ಅದಕ್ಕೆ ಮಿತಿಯೇ ಇಲ್ಲ ಎಂದು ತೋರಿಸಿಕೊಟ್ಟವರಿವರು.
ಗಾಡ್ ಫಾದರ್ ಗಳಿಲ್ಲದೆ ಯಾವುದೇ ಹಿನ್ನಲೆ ಇಲ್ಲದೆ ಸ್ವ ಪ್ರತಿಭೆ, ಪ್ರಯತ್ನದಿಂದ ತಮ್ಮ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದ ತೆಂಡುಲ್ಕರ್‌ ಮತ್ತು ರಾಜ್‌ ಅವ್ರ ವ್ಯಕ್ತಿತ್ವದಲ್ಲಿ ಸಾಕಷ್ಟು ಸಾಮ್ಯತೆಗಳಿವೆ. ಪ್ರಚಾರದಿಂದ ಬಲುದೂರದಲ್ಲಿದ್ರೂ ಜನಪ್ರಿಯತೆಯ ಉತ್ತುಂಗಕ್ಕೇರಿದ್ರು. ಆದ್ರೂ ತಮ್ಮ ಹಳೆಯ ದಿನಗಳನ್ನ ಮರೆಯದೆ, ಮುಂದಿನ ಗುರಿಯನ್ನ ನೆನೆಯದೆ ಅಡಿಯಿಟ್ಟವರಲ್ಲ..
ಡಾ. ರಾಜ್‌ ಬೆಳ್ಳಿ ಪರದೆಯ ಮೇಲೆ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರನ್ನ ಮೋಡಿ ಮಾಡಿದ್ರು. ತಮ್ಮ ಸಿನಿಮಾ ಬಿಡುಗಡೆಯಾಗುವ ದಿನ ಮೈಲು ಗಟ್ಟಲೇ ಕ್ಯೂನಿಂತು ಟಿಕೆಟ್‌ ಖರೀದಿ ಮಾಡುವಂತೆ ಮಾಡುವ ಶಕ್ತಿ ಡಾ. ರಾಜ್‌ ಅಭಿನಯಕ್ಕಿತ್ತು. ಅಭಿನಯ ಕಲೆಯನ್ನ ಒಲಿಸಿಕೊಂಡು ಧ್ರುವತಾರೆಯಾಗಿ ಮೆರೆದ ರಾಜಣ್ಣ ಅವರನ್ನ ಕಾಣುವುದೇ ಅಭಿಮಾನಿ ಬಳಗಕ್ಕೆ ದೊಡ್ಡ ಸಂಭ್ರಮ.
ಇನ್ನು ಸಚಿನ್ ತೆಂಡುಲ್ಕರ್ ಆಟಕ್ಕೆ ಕೊನೆ ಮೊದಲಿಲ್ಲ.. ಸಚಿನ್ ಗೆ ಸಚಿನ್ನೇ ಸಾಟಿ ಅನ್ನೋ ಹಾಗೆ ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರುವ ನಕ್ಷತ್ರ. ಬ್ಯಾಟ್ ಅನ್ನೋ ದಂಡ ಹಿಡಿದು ಪ್ರೇಕ್ಷಕರನ್ನ ಮಂತ್ರಮುಗ್ದಗೊಳಿಸಬಲ್ಲ ಮಾಂತ್ರಿಕ ಈ ಲಿಟ್ಲ್ ಮಾಸ್ಟರ್.
ಹೊಸ ಪ್ರತಿಭೆಗಳಿಗೆ ನೀರೆರೆದು ಪೋಷಿಸಿ, ತಪ್ಪಿದವರನ್ನ ತಿದ್ದಿ ನಡೆಸೋದು ಸಚಿನ್ ಹಾಗೂ ಡಾ. ರಾಜ್ ಅವರ ದೊಡ್ಡ ಗುಣ.. ಅಹಂಭಾವನ್ನ ಮೆಟ್ಟಿನಿಂತು ವೃತ್ತಿ ರಂಗವನ್ನು ಮನಸಾರೆ ಪ್ರೀತಿಸಿ ಮಾದರಿ ಎನಿಸಿದವರಿವರು.
ವೃತ್ತಿ ಬದುಕಿನಲ್ಲಿ ಮೇರು ಪರ್ವತಗಳೆನಿಸಿದ ಈ ಇಬ್ಬರು ಯಾವತ್ತೂ ಪ್ರಶಸ್ತಿ ಪುರಸ್ಕಾರಗಳ ಬೆನ್ನತ್ತಿ ಹೋದವರಲ್ಲ. ಬದಲಾಗಿ ಕೀರ್ತಿ, ಹೆಸರು – ಯಶಸ್ಸುಗಳೆಲ್ಲಾ ಇವರಿಬ್ಬರಿಗಾಗಿ ಕಾದು ನಿಲ್ಲುತ್ತಿತ್ತು. ಸಜ್ಜನಿಕೆ, ಸೌಜನ್ಯತೆ ಇವರಿಬ್ಬರಿಗೂ ಭೂಷಣ.. ಸಮಾಜ ಸೇವೆ, ನೊಂದವರ ಕಣ್ಣೋರಿಸುವುದು ಇವರ ಕರ್ತವ್ಯ.. ಹೀಗಾಗಿ ಸಚಿನ್ ಹಾಗೂ ಡಾ.ರಾಜ್ ಕೋಟಿ ಕೋಟಿ ಹೃದಯಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.

ಸನತ್ ರೈ,

ಅಂಗವಿಕಲ ಮಕ್ಕಳ ಜತೆ ರಾಜ್ಯ ಕ್ರಿಕೆಟಿಗರು..

ಅನಾಥರು... ಆದ್ರೂ ಇಲ್ಲಿ ಅನಾಥ ಪ್ರಜ್ಞೆ ಮೂಡಿಲ್ಲ. ತನ್ನವರು ಯಾರು ಇಲ್ಲ ಅನ್ನೋ ಕೊರಗಿಲ್ಲ. ಕನಸುಗಳು ಕಮರಿ ಹೋಗಿಲ್ಲ. ಬೆಳಕು ಕಾಣದಿದ್ರೂ ಬದುಕು ಕತ್ತಲಾಗಿಲ್ಲ. ನಿರೀಕ್ಷೆ – ಆಕಾಂಕ್ಷೆಗಳಿಗೆ ಎಲ್ಲೇ ಇಲ್ಲಿಲ್ಲ. ಹೌದು, ಮಾನವೀಯತೆಯ ನಂದಾದೀಪ. ಕತ್ತಲಿನಿಂದ ಬೆಳಕಿನಡೆಗೆ ಸಾಗುವ ನಿರಂತರ ಪಯಣ...

ಸಮರ್ಥನಂ ವಿಕಲ ಚೇತನರ ಸಂಸ್ಥೆ

ನಿಜ, ಈ ಬಾರಿಯ ದೀಪಾವಳಿ ಸಮಯ ಗೇಮ್‌ ಪ್ಲಾನ್‌ ತಂಡಕ್ಕೆ ವಿಭಿನ್ನ.. ವಿಶಿಷ್ಠ... ಸಮರ್ಥನಂ ವಿಕಲ ಚೇತನ ಮಕ್ಕಳ ಜತೆ ದೀಪಾವಳಿಯ ಸಡಗರವನ್ನ ಹಂಚಿಕೊಳ್ಳಬೇಕು ಅಂದಾಗ ರಾಜ್ಯದ ರಣಜಿ ಕ್ರಿಕೆಟಿಗರು ನಮ್ಮೊಂದಿಗೆ ಕೈಜೋಡಿಸಿದ್ರು. ಎನ್‌. ಸಿ. ಅಯ್ಯಪ್ಪ, ಸಿ.ಎಮ್‌. ಗೌತಮ್‌, ರಾಜು ಭಟ್ಕಳ್‌ , ಆದಿತ್ಯ ಸಾಗರ್‌ ಹಾಗೂ ಕೆ.ಬಿ.ಪವನ್‌ ಇಳಿ ಸಂಜೆಯ ವೇಳೆಗೆ ಸಮರ್ಥನಂ ಸಂಸ್ಥೆಗೆ ಎಂಟ್ರಿಕೊಟ್ರು. ಇನ್ನೊಂದೆಡೆ, ಈ ಅಂಧ ಮಕ್ಕಳಿಗೆ ಸ್ಪೂರ್ತಿ ನೀಡಲು ಚಿತ್ರನಟಿ ಸ್ಪೂರ್ತಿ ಬಂದಿದ್ರು.

ಅಂದ ಹಾಗೇ ನಮ್ಮ ಸಮಾಜದ ಕಣ್ಣಿಗೆ ಇವ್ರು ಅಂಧರು.. ಅನಾಥರು.. ಹಾಗಂತ ಇವ್ರ ಸಾಧನೆಗೆ ಯಾವುದು ಕೂಡ ಅಡ್ಡಿಯಾಗಿಲ್ಲ. ಸಾಧಿಸುವ ಛಲವಿದ್ದರೆ ಜಗತ್ತನ್ನೇ ಗೆಲ್ಲಬಹುದು. ಇದಕ್ಕೆ ಸಾಕ್ಷಿ ಶೇಖರ್‌

ಟೀಮ್‌ ಇಂಡಿಯಾದ ಅಂಧರ ಕ್ರಿಕೆಟ್‌ ತಂಡದ ನಾಯಕನಾಗಿರುವ ಶೇಖರ್‌ ಜತೆ ನಮ್ಮ ಕ್ರಿಕೆಟಿಗರು ಮಾತಿಗಿಳಿದ್ರು. ಮುಳ್ಳಿನ ಹಾದಿಯಲ್ಲಿ ನಡೆದು ಗುಲಾಬಿಯಂತೆ ಅರಳಿದ ಶೇಖರ್‌ ಅವ್ರ ಯಶೋಗಾಧೆ ನಿಜಕ್ಕೂ ಬೆರಗುಗೊಳಿಸುತ್ತೆ. ಬದುಕಿಗೆ ಅಂಧತ್ವ ಕಾಡಿದ್ರೂ, ಶೇಖರ್‌ ಗೆ ಕ್ರಿಕೆಟ್‌ ಆಟ ಹೊಸ ಬೆಳಕನ್ನ ಮೂಡಿಸಿದೆ. ಶೇಖರ್‌ ಯಶಸ್ಸಿನ ಕಥೆಯನ್ನ ಕೇಳಿದಾಗ ಕ್ರಿಕೆಟಿಗರ ಮನಸ್ಸು ಕರಗಿ ಹೋಯ್ತು.

ಇನ್ನು, ಮಕ್ಕಳನ್ನ ಕಂಡಾಗ ಹೃದಯ ಮಿಡಿಯಬಹುದು. ಆದ್ರೆ ಈ ಮಕ್ಕಳ ಬಗ್ಗೆ ದಯ-ದಾಕ್ಷಿಣ್ಯ, ಕರುಣೆ ಯಾವುದು ಬೇಡ. ಬೇಕಾಗಿರುವುದು ಕೇವಲ ಪ್ರೀತಿ, ಪ್ರೋತ್ಸಾಹ ಮಾತ್ರ.ಯಾಕಂದ್ರೆ ಈ ಪುಟಾಣಿಗಳಿಗೂ ಗೊತ್ತು. ತಮಗೆ ಅಪ್ಪ- ಅಮ್ಮನ ಪ್ರೀತಿ ಇಲ್ಲ.. ಅಜ್ಜ – ಅಜ್ಜಿಯ ವಾತ್ಸಲ್ಯವಂತೂ ಇಲ್ಲವೇ ಇಲ್ಲ. ತಾವು ತಬ್ಬಲಿಗಳು ಅಂತ ಗೊತ್ತಿದ್ರೂ ಅದ್ರ ಅರಿವು ಕೂಡ ಇಲ್ಲ. ಆದ್ರೆ ಇಲ್ಲಿ ಪರಿಶುದ್ಧವಾದ ಸ್ನೇಹವಿದೆ. ಯಾವುದೇ ರೀತಿಯ ಕಲ್ಮಶವಿಲ್ಲ. ಪುಟಾಣಿ ಮಕ್ಕಳಾದ್ರೂ ಪರಸ್ಪರ ಒಬ್ಬರನೊಬ್ಬರನ್ನ ಅರ್ಥಮಾಡಿಕೊಂಡು ಹೆಗಲಿಗೆಹೆಗಲುಕೊಟ್ಟು ಸಾಗೋ ಛಲವಿದೆ. ನಾವೆಲ್ಲಾ ಒಂದೇ ಅನ್ನೋ ಭಾವಕೈತೆಯಬದುಕು ಸಾಗಿಸ್ತಿದ್ದಾರೆ.

ಮಕ್ಕಳಿಗೆ ಸ್ಪೂರ್ತಿ ಸ್ಪೂರ್ತಿಯಾದ್ರು. ಜತೆಗೆ ಕ್ರಿಕೆಟಿಗರು ಪುಟಾಣಿಗಳ ಪ್ರಶ್ನೆಗಳಿಗೆ ಉತ್ತರ ನೀಡ್ತಾ ತಾವು ಮಕ್ಕಳ ಜತೆ ಆಟವಾಡಿದ್ರು. ಕುಣಿ, ಕುಣಿ, ನಲಿ ನಲಿ ಅಂತ ಮಕ್ಕಳ ಜತೆಗೆ ಬೆರೆತಾಗ ಟೈಮ್ಪಾಸ್‌ ಆಗಿದ್ದೇ ಗೊತ್ತಾಗಲಿಲ್ಲ. ಹಾಗೇ, ಅಂಧ ಬಾಲಕಿಯಯರಂತೂ ಅಂದುಕೊಂಡಿದ್ದನ್ನು ಸಾಧಿಸುವ ಛಲದಲ್ಲಿದ್ದಾರೆ. ಜಗತ್ತು ಕತ್ತಲಾಗಿದ್ರೂ ತಮ್ಮ ಬದುಕಿನಲ್ಲಿ ಬೆಳಕಿನ ಹೊಂಗಿರಣವನ್ನ ಕಾಣ್ತಾ ಇದ್ದಾರೆ. ಬದುಕೇ ಒಂದು ಹೋರಾಟ ಅಂತ ಜೀವನ ಸಾಗಿಸ್ತಾ ಇದ್ದಾರೆ. ಹಾಡಿನಿಂದಲೇ ತಮ್ಮ ನೋವು , ಬೇಸರವನ್ನ ಮರೆಯುವ ಪ್ರಯತ್ನ ನಡೆಸ್ತಾ ಇದ್ದಾರೆ.ಯಾರು ಏನೇ ಅಂದ್ರೂ ಇವ್ರಿಗೆ ಇವ್ರೆ ಸ್ಪೂರ್ತಿ. ಇವ್ರೆ ಪ್ರೇರಣೆ. ಮುಂದೇನು ಅನ್ನೋದನ್ನ ನೋಡಲು ಕಷ್ಟವಾದ್ರೂ ಮುಂದೆ ಹೋಗುವ ಪ್ರಯತ್ನ ಇದ್ದೇ ಇದೆ.

ಕ್ರಿಕೆಟಿಗರ ಜತೆ ಖುಷಿಯನ್ನು ಹಂಚಿಕೊಂಡ ಈ ಮಕ್ಕಳ ಸಂತಸಕ್ಕೆ ಪಾರವೇ ಇಲ್ಲ. ಎಲ್ಲರೊಂದಿಗೆ ಬೆರೆಯುತ್ತಿರುವಾಗ ಗೌತಮ್ ಮನಸೆಳೆದಿದ್ದು ಈ ಮನು..ಅಂಗ ವೈಕಲ್ಯದಿಂದ ಬಳಲುತ್ತಿರುವ ಮನುವನ್ನು ಕಂಡಾಗ ಗೌತಮ್ ಮನ ಮಿಡಿಯಿತು. ಕಾಲಿನ ವೈಕಲ್ಯತೆಗೆ ತುತ್ತಾಗಿರುವ ಮನು ಜೊತೆ ಗೌತಿ ಮಗುವಿನಂತೆ ಮಾತನಾಡಿದ್ರು...ಸದಾ ಮನೆ ಮಂದಿಯ ಜೊತೆ ಹಬ್ಬವನ್ನು ಆಚರಿಸುತ್ತಿದ್ದ ಈ ಆಟಗಾರರು ಮಕ್ಕಳೊಂದಿಗೆ ಸಂಪೂರ್ಣವಾಗಿ ಬೆರೆತ್ರು..ವಿಕಲ ಚೇತನ ಮಕ್ಕಳಿಗೆ ಆತ್ಮವಿಶ್ವಾಸವನ್ನು ತುಂಬಿದ್ರು. ಪ್ರೀತಿ, ಸ್ನೇಹದ ಖುಷಿ ಕೊಟ್ರು..ತಮಗೆ ಯಾರು ಇಲ್ಲ ಅನ್ನೋದನ್ನು ದೂರ ಮಾಡಿ ನಾವಿದ್ದೇವೆ ಅನ್ನೋದನ್ನು ಸಾರಿದ್ರು..

ಜೀವನದ ಕಲ್ಲು ಮುಳ್ಳಿನ ಹಾದಿಯಲ್ಲಿ ಈ ಪುಟಾಣಿಗಳು, ಬಾಲಕ,ಬಾಲಕಿಯರು ಎಡವದೇ, ಹೆದರದೇ ಬಾಳೋಂದು ಹೋರಾಟದ ಅಂತ ಮುಂದೆ ಸಾಗಲು ಹಾರೈಸಿದ್ರು..ಆಟಗಾರರು ಸ್ವತಃ ಮಕ್ಕಳ ಕೈಯಲ್ಲಿದ್ದ ದೀಪ ಬೆಳಗಿಸಿದ್ರು.ನಿಮ್ಮ ಬದುಕಿನಲ್ಲಿ ನಾವು ಬೆಳಕಿನ ಕಿರಣಗಳಾಗುತ್ತಿವೆ ಅಂತ ಹೇಳುವ ಮೂಲಕ ಭಾರವಾದ ಮನಸ್ಸಿನಿಂದಲೇ ಕ್ರಿಕೆಟಿಗರು ಹಿಂತಿರುಗಿದ್ರು. ಇವ್ರ ಬೆನ್ನ ಹಿಂದೆನೇ ಹೊರಬಂದ ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ಬಣ್ಣ ಬಣ್ಣದ ಚಿತ್ತಾರಗಳ ನಡುವೆಯೇ ವಿಕಲ ಚೇತನ ಮಕ್ಕಳು ಕುಣಿದು ಕುಪ್ಪಳಿಸಿದ್ರು.
ಒಟ್ಟಿನಲ್ಲಿ ಬೆಳಕಿನ ಹಬ್ಬದಲ್ಲಿ ಈ ಮಕ್ಕಳಿಗೆ ಕ್ರಿಕೆಟಿಗರು ಸ್ಪೂರ್ತಿಯಾದ್ರೆ, ತಮ್ಮ ಮಾನವೀಯತೆಯ ಗುಣದಿಂದ ಕ್ರಿಕೆಟಿಗರು ಹಲವರಿಗೆ ದಾರಿ ದೀಪವಾದ್ರು....

ಸನತ್ ರೈ

ಕ್ರಿಕೆಟ್ ರಾಜನಿಗೆ ರಾಜಯೋಗ

ಸಚಿನ್‌ ತೆಂಡುಲ್ಕರ್‌...
ಕ್ರಿಕೆಟ್‌ ಜಗತ್ತಿನ ಅನಭಿಷಕ್ತ ಸಾರ್ವಭೌಮ. ಕಳೆದ 22 ವರ್ಷಗಳಿಂದ ಅಭಿಮಾನಿಗಳನ್ನ ರಂಜಿಸುತ್ತಿರುವ ಮೋಡಿಗಾರನ ಬಗ್ಗೆ ಇದಕ್ಕಿಂತ ಹೆಚ್ಚು ಏನನ್ನು ಹೇಳೋಕೇ ಸಾಧ್ಯವಿಲ್ಲ.

ಹೌದು, ಸಚಿನ್ ಬ್ಯಾಟಿಂಗ್‌ ವೈಖರಿಯೇ ಅಂತಹುದ್ದು...ಅಲ್ಲಿ ಕಲಾವಿದನ ತಾಳ್ಮೆಯೂ ಇದೆ. ಶಿವ ತಾಂಡವ ನೃತ್ಯದ ಆರ್ಭಟವೂ ಇದೆ. ಯಾಕಂದ್ರೆ ಇದು ದೇವ್ರ ಆಟ.

ಯಾರು ಏನೇ ಅಂದ್ರೂ, ಇಂತಹ ಆಟವನ್ನ ಆಡಲು ಸಾಮಾನ್ಯ ಮನುಷ್ಯನಿಂದ ಸಾಧ್ಯವಿಲ್ಲ. ಒಂದು ವೇಳೆ ಆಡುತ್ತಿದ್ರೆ ಎಲ್ರೂ ಸಚಿನ್ ತೆಂಡುಲ್ಕರೇ ಆಗಿರುತ್ತಿದ್ರು. ಆದ್ರೆ ಹಾಗಲಿಲ್ಲ. ಯಾಕಂದ್ರೆ ವಿಶ್ವಕ್ಕೆ ಒಬ್ಬನೇ ಸಚಿನ್ ತೆಂಡುಲ್ಕರ್‌. ಅದು ಆ ಬ್ರಹ್ಮ ಬರೆದ ಅಲಿಖಿತ ನಿಯಮ.
ತಪ್ತ ಮನಸ್ಸಿನಿಂದ ತಪಸ್ಸು ಮಾಡಿ ಕ್ರಿಕೆಟ್‌ ಆಟವನ್ನ ಕೈವಶ ಮಾಡ್ಕೊಂಡಿರುವ ಸಚಿನ್‌ ಕ್ರಿಕೆಟ್‌ ಜಗತ್ತಿನಲ್ಲಿ ಸೂರ್ಯನಂತೆ ಪ್ರಜ್ವಲಿಸುತ್ತಿದ್ದಾರೆ. ಸಚಿನ್ ತನ್ನ ಬ್ಯಾಟಿಂಗ್ ಕರಾಮತ್ತಿನಿಂದ ಕ್ರಿಕೆಟ್ ವಿಶ್ವದಲ್ಲಿ ತನ್ನ ಜಾತಕವನ್ನು ತಾವೇ ರಚಿಸಿಕೊಂಡಿದ್ದಾರೆ.

ಹೌದು. ವೃತ್ತಿ ಜೀವನವೆಂಬ ದಾರಕ್ಕೆ ಶತಕಗಳ ಮಣಿಯನ್ನು ಪೋಣಿಸುತ್ತಾ ಸಾಗುತ್ತಿರುವ ಮಾಸ್ಟರ್ ವಿಶ್ವ ಕ್ರಿಕೆಟ್ ನ ಅನರ್ಘ್ಯ ರತ್ನ.. ಅಹಂ ಅನ್ನೋ ಪದ ಈ ಮಹಾನ್ ಆಟಗಾರನತ್ತ ಸುಳಿದಿಲ್ಲ. ಪರಿಸ್ಥಿತಿ ಹೆಂಗೇ ಇರಲಿ, ಸಚಿನ್‌ ಮುಖದಲ್ಲಿ ಮಾತ್ರ ಅದೇ ಮುಗ್ಧತೆಯನ್ನ ಕಾಣಬಹುದು.

ಪ್ರತಿ ಪಂದ್ಯದಲ್ಲೂ ಸಚಿನ್ ಕ್ರಿಕೆಟ್ ನ ವಿದ್ಯಾರ್ಥಿಯಾಗ್ತಾರೆ..ಪ್ರತಿದಿನ ಹೊಸ ಪಾಠಗಳನ್ನು ಕಲಿಯುತ್ತಾರೆ. ಎದುರಾಳಿಯ ಪ್ರತಿ ಎಸೆತಗಳನ್ನು ಕೂಡ ಸೂಕ್ಷ್ಮವಾಗಿ ತಿಳಿದುಕೊಳ್ಳುತ್ತಾರೆ. ಸಚಿನ್ ರ ಈ ವಿಶೇಷ ಗುಣಗಳಿಂದಲೇ ವಿಶ್ವ ಕ್ರಿಕೆಟ್‌ನ ಮಾಸ್ಟರ್‌ ಆಗಿರೋದು..

ಇಷ್ಟೆಲ್ಲಾ ಮಾಡಿದ್ರೂ ಸಚಿನ್‌ ಸ್ವಂತದ್ದೊಂದು ಮನೆ ಕಟ್ಟಿರಲಿಲ್ಲ. ಆದ್ರೆ ಇದೀಗ ಸಚಿನ್ ಕನಸು ನನಸಾಗಿದೆ. ನವರಾತ್ರಿಯ ಮೊದಲ ದಿನವೇ ಹೊಸ ಮನೆಯ ಗೃಹ ಪ್ರವೇಶ ಮಾಡ್ಕೊಂಡಿದ್ದಾರೆ. ಆದ್ರೆ, ಗಡಿಬಿಡಿಯಿಂದ ಗೃಹ ಪ್ರವೇಶ ಮಾಡ್ಕೊಂಡಿರುವ ಸಚಿನ್‌, ಬೃಹತ್‌ ಮುಂಬೈ ಮಹಾ ನಗರ ಪಾಲಿಕೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೊಸ ಮನೆಗೆ ಮಾನ್ಯತಾ ಪತ್ರ ಪಡೆಯದ ಕಾರಣ 4.75 ಲಕ್ಷ ದಂಡ ಕಟ್ಟುವಂತೆ ಮುಂಬೈ ಪಾಲಿಕೆ ನೋಟಿಸ್‌ ಜಾರಿ ಮಾಡಿದೆ.

ಅದೇನೂ ಇದ್ರೂ, ನವರಾತ್ರಿಯ ಮೊದಲ ದಿನ ಸಚಿನ್‌ ಹೊಸ ಮನೆಗೆ ಎಂಟ್ರಿಕೊಟ್ಟಿರುವುದು ಶುಭ ಸೂಚನೆ. ಕ್ರಿಕೆಟ್‌ ಜಗತ್ತಿನಲ್ಲಿ ಸಚಿನ್‌ ಮತ್ತಷ್ಟು ಮಿಂಚು ಹರಿಸ್ತಾರೆ. ಯಾಕಂದ್ರೆ ಸಚಿನ್‌ಗೆ ರಾಜ ಯೋಗ ಮತ್ತು ಕುಮಾರ ಯೋಗವಿದೆಯಂತೆ. ಹಾಗಂತ ಸಚಿನ್ ಜಾತಕವೇ ಹೇಳುತ್ತೆ ಎಂಬುದು ಖ್ಯಾತ ಜ್ಯೋತಿಷಿ ಬೆಜಾನ್‌ ದರುವಾಲಾ ಅವ್ರ ಭವಿಷ್ಯ ನುಡಿ.

ರಾಜಯೋಗ ಮತ್ತು ಕುಮಾರ ಯೋಗ ಸಿಗೋದು ಕೆಲವೇ ಕೆಲವು ಮಂದಿಗೆ ಮಾತ್ರ. ಮುಖೇಶ್‌ ಅಂಬಾನಿ, ನರೇಂದ್ರ ಮೋದಿ, ಬರಾಕಾ ಒಬಾಮಾ ಮತ್ತು ಅಟಲ್‌ ಬಿಹಾರಿ ವಾಜಪೇಯಿ ಮೊದಲಾದವರ ಜಾತಕಗಳಲ್ಲೂ ರಾಜಯೋಗ ಮತ್ತು ಕುಮಾರ ಯೋಗವಿದೆ. ಇಂತವರು ತಮ್ಮ ಕ್ಷೇತ್ರಗಳಲ್ಲಿ ರೂಲ್‌ ಮಾಡ್ತಾರೆ ಅಂತಲೂ ಬೆಜಾನ್‌ ದರುವಾಲಾ ಹೇಳ್ತಾರೆ.

ಅಂದ ಹಾಗೇ, ಸಚಿನ್‌ ಭೂಮಿಯ ಸಂಕೇತ. ಆದ್ದರಿಂದಲೇ ತೆಂಡುಲ್ಕರ್‌ ಜನಪ್ರಿಯತೆಯ ಉತ್ತುಂಗಕ್ಕೇರಿದ್ದಾರೆ. ಭೂಮಿಯಂತೆ ಸಚಿನ್‌ ಕ್ರಿಕೆಟ್‌ ಮೈದಾನದಲ್ಲಿ ಸ್ಥಿರತೆಯಿಂದ ಇರುತ್ತಾರೆ. ಹಾಗೇ ಅವ್ರ ಜಾತಕ ನೀರಿನ ಸಂಕೇತವನ್ನ ತೋರಿಸುತ್ತೆ. ಇದ್ರಿಂದ ಅವ್ರ ಭವಿಷ್ಯ ಕೂಡ ನೀರಿನಂತೆ ತೇಲಾಡುತ್ತಿರುತ್ತೆ ಅಂತಾರೆ ದರುವಾಲಾ.

ಏನೇ ಆದ್ರೂ ಸಚಿನ್ ಜಾತಕವನ್ನ ಆ ಬ್ರಹ್ಮ, ಸ್ವಇಚ್ಚೆಯಿಂದ ಬರೆದಿರೋದು. ಆದ್ರೂ ಸಚಿನ್‌ ಭವಿಷ್ಯವನ್ನ ಯಾರು ಬರೆದ್ರೂ, ಯಾರು ಹೇಳಿದ್ರೂ ಅದನ್ನು ರೂಪಿಸಿದ್ದು ಮಾತ್ರ ಅವ್ರ ಸುಂದರ ಆಟ.
ಸನತ್ ರೈ

ಮರಡೋನಾನ ಕಿರಿಕ್‌..!

ಡಿಗೊ ಮರಡೋನಾ ಅವ್ರ ವರ್ಚಸ್ಸೆ ಅಂತಹುದ್ದು. ಫುಟ್‌ಬಾಲ್‌ ಆಟ ಮರಡೋನಾಗೆ ಬದುಕಿನ ಪಾಠ ಹೇಳಿಕೊಟ್ಟಿದೆ. ಬಡತನದಲ್ಲೇ ಅರಳಿದ ಮರಡೋನಾ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿದ್ರು. ಅದ್ಭುತ ಕಾಲ್ಚಳಕದಿಂದಲೇ ಮರಡೋನಾ ಫುಟ್‌ಬಾಲ್‌ ಜಗತ್ತನ್ನೇ ಬೆರಗುಗೊಳಿಸುವಂತೆ ಮಾಡಿದ್ರು. ಅಷ್ಟೇ ಅಲ್ಲ, ಕೋಟ್ಯಂತರ ಅಭಿಮಾನಿಗಳ ಎವರ್‌ ಗ್ರೀನ್‌ ಹೀರೋ..
ಆಟಗಾರನಾಗಿ ಮರಡೋನಾ ಎಲ್ಲಾ ಸಾಧನೆಗಳನ್ನ ಮಾಡಿದ್ದಾರೆ. ತನ್ನ ಆಟದಿಂದಲೇ ಮೋಡಿ ಮಾಡುವ ಈ ಮ್ಯಾಜಿಷಿಯನ್‌ನ ವೈಯಕ್ತಿಕ ಬದುಕನ್ನ ಅರ್ಥ ಮಾಡಿಕೊಳ್ಳುವುದು ತುಂಬಾನೇ ಕಷ್ಟ. ಯಾಕಂದ್ರೆ ಮರಡೋನಾಗೆ ಬಡತನದ ಬೇಗೆ ಏನೂ ಎಂಬುದು ಎಳೆವೆಯಲ್ಲಿ ಗೊತ್ತಿತ್ತು. ಆದ್ರೆ ಫುಟ್‌ಬಾಲ್‌ ಅವ್ರ ಬಡತನವನ್ನ ದೂರ ಮಾಡಿತ್ತು. ವಿಪರ್ಯಾಸ ಅಂದ್ರೆ, ಯಶಸ್ಸಿನ ಆಮಲು ಮರಡೋನಾ ಅವ್ರ ಬದುಕನ್ನ ಕವಲೋಡೆಯುವಂತೆ ಮಾಡಿತ್ತು.
ಹಠಮಾರಿ- ಛಲಗಾರ, ಮುಂಗೋಪಿಯಾಗಿರುವ ಡಿಗೋ ಯಾರನ್ನ ಕ್ಯಾರ್‌ ಮಾಡ್ತಾ ಇರಲಿಲ್ಲ. ಇದ್ರಿಂದ ವಿವಾದಗಳು ಅವ್ರ ಬೆನ್ನಿಗೆ ಅಂಟಿಕೊಂಡವು. ಆದ್ರೂ ಅರ್ಜೆಂಟಿನಾ ತಂಡಕ್ಕೆ ಹೊಸ ಚೈತನ್ಯ ನೀಡಿರುವ ಮರಡೋನಾ , 1986ರ ವಿಶ್ವಕಪ್‌ ಗೆಲುವಿನಲ್ಲಿ ಅವ್ರ ಏಕಾಂಗಿ ಹೋರಾಟ ಇನ್ನೂ ಕಣ್ಣ ಮುಂದೆ ಹಾದು ಹೋಗುತ್ತವೆ. ಅದ್ರಲ್ಲೂ ಇಂಗ್ಲೆಂಡ್‌ ವಿರುದ್ಧ ದಾಖಲಿಸಿದ ಎರಡು ಗೋಲುಗಳನ್ನ ಯಾವತ್ತೂ ಮರೆಯೋಕೆ ಸಾಧ್ಯವಿಲ್ಲ.
ಹಾಗಂತ ಡಿಗೋ ಮರಡೋನಾ ಕೇವಲ ಆಟಗಾರನಾಗಿ ಸುದ್ದಿ ಮಾಡಲಿಲ್ಲ. ಮೈದಾನದ ಹೊರಗೂ ಸುದ್ದಿಯ ಕೇಂದ್ರ ಬಿಂದುವಾಗಿದ್ರು. ಹೌದು, ಮರಡೋನಾ ಕುಡುಕ.. ಸಿಗರೇಟ್‌ ಸೇದುತ್ತಿದ್ರು. ಕೊಕೇನ್‌ ಸೇರಿದಂತೆ ಉದ್ದೀಪನಾದ್ರವ್ಯ ಸೇವನೆ ಮಾಡಿ ಕೊನೆಗೆ ತನ್ನ ವರ್ಣ ರಂಜಿತ ಫುಟ್‌ಬಾಲ್ ಬದುಕಿಗೆ ಅವ್ರೆ ಕೊಳ್ಳಿ ಇಟ್ಟುಕೊಂಡ್ರು. ಇನ್ನು, ಡಿಗೋಗೆ ಹುಡುಗಿಯರ ಸುತ್ತ ತಿರುಗುವ ಅಗತ್ಯವಿರಲಿಲ್ಲ. ಯಾಕಂದ್ರ ಆ ಕೆಲಸವನ್ನ ಹುಡುಗಿಯರೇ ಮಾಡ್ತಾ ಇದ್ರು. ಅಷ್ಟೊಂದು ರಸಿಕ ಶಿರೊಮಣಿ ಮರಡೋನಾ.
ಆದ್ರೂ ಮರಡೋನಾ ಅವ್ರ ಚಾರ್ಮ್‌ ಮಾತ್ರ ಕಮ್ಮಿಯಾಗಿರಲಿಲ್ಲ. ಈ ನಡುವೆ, ತೀರಾ ಮದ್ಯ ವ್ಯಸನಿಯಾಗಿದ್ದ ಡಿಗೋ ತನ್ನ ವೈಯಕ್ತಿನ ಬದುಕನ್ನ ಚಿತ್ರನ್ನವಾಗಿಸಿಕೊಂಡ್ರು. ಅತೀಯಾದ ದೇಹ ಭಾರ, ಹೊಟ್ಟೆನೋವಿನಿಂದ ಮರಡೋನಾ ಅವ್ರ ಆರೋಗ್ಯದಲ್ಲಿ ಏರುಪೇರಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ರು.
ಕೊನೆಗೂ ಚೇತರಿಸಿಕೊಂಡ ಡಿಗೋಮರಡೋನಾ ಅರ್ಜೆಂಟಿನಾ ಫುಟ್‌ಬಾಲ್‌ ತಂಡದ ಕೋಚ್‌ ಆಗಿಯೂ ಕಾರ್ಯನಿರ್ವಹಿಸಿದ್ರು. ಆದ್ರೆ 2010ರ ವಿಶ್ವಕಪ್‌ನಲ್ಲಿ ಅರ್ಜೆಂಟಿನಾ ತಂಡ ನೀರಸ ಆಟವನ್ನಾಡಿದ ಕಾರಣ ಕೋಚ್‌ ಹುದ್ದೆಯಿಂದಲೂ ಕೆಳಗಿಳಿದ್ರು. ಈ ನಡುವೆ ಕೆಲವೊಂದು ವಿವಾದಾತ್ಮಕ ಹೇಳಿಕೆಗಳನ್ನ ನೀಡಿ ತನ್ನ ಹೆಸರಿಗೆ ಮತ್ತಷ್ಟು ಕಪ್ಪುಚುಕ್ಕೆಗಳನ್ನ ಸೇರಿಸಿಕೊಂಡ್ರು.
ಇದೀಗ ಮರಡೋನಾ ವಿವಾದವೊಂದಕ್ಕೆ ಸಿಲುಕಿಕೊಂಡಿದ್ದಾರೆ. ದುಬೈನ ಆಲ್‌ ವಾಸ್ಲ್‌ ಕ್ಲಬ್‌ ತಂಡದ ತರಬೇತುದಾರನಾಗಿರುವ ಡಿಗೋ ಅಭಿಮಾನಿಗೆ ಕಿಕ್‌ ನೀಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಇಟಿಸಾಲಾಟ್‌ ಟೂರ್ನಿಯ ವೇಳೆ ಅಭಿಮಾನಿಗಳ ಬ್ಯಾನರ್‌ ಮುಂದೆ ಮರಡೋನಾ ಪೋಟೋ ಶೂಟ್‌ ಮಾಡ್ತಾ ಇದ್ರು. ಆಗ ಹುಚ್ಚು ಅಭಿಮಾನಿಯ ಕಿತಾಪತಿ ಮರಡೋನಾ ಅವ್ರ ಪಿತ್ತ ನೆತ್ತಿಗೇರುವಂತೆ ಮಾಡಿತು. ಅಲ್ಲದೆ ಅಭಿಮಾನಿಗೆ ಕಾಲಿನಿಂದ ಒದ್ದುಬಿಟ್ರು.
ನಂತ್ರ ತಪ್ಪಿನ ಅರಿವಾದ ಮರಡೋನಾ ಕ್ಷಮೆಯಾಚಿಸಿದ್ರು. ನನ್ನ ಸ್ವಭಾವನೇ ಹಾಗೇ ಅಂತ ಹಾರಿಕೆಯ ಹೇಳಿಕೆಯನ್ನು ನೀಡಿದ್ರು. ಒಟ್ಟಿನಲ್ಲಿ ಡಿಗೋ ಮರಡೋನಾ ಮಾತ್ರ ಬದಲಾಗುವುದಿಲ್ಲ. ಯಾಕಂದ್ರೆ ವಿವಾದಗಳಿಗೆ ಸಿಲುಕುವುದು ಮರಡೋನಾ ಅವ್ರ ಹುಟ್ಟುಗುಣ.
ಸನತ್ ರೈ

ವಿದಾಯದ ವೇಳೆಯಲ್ಲಿ.... 1

ರಾಹುಲ್‌ ದ್ರಾವಿಡ್‌ .. ಬೆಂಗಳೂರಿನ ಹೆಮ್ಮೆಯ ಕ್ರಿಕೆಟಿಗ.. ಸುಮಾರು 30 ವರ್ಷಗಳ ಹಿಂದೆ ಚಿನ್ನಸ್ವಾಮಿ ಅಂಗಣದಲ್ಲಿ ಬೆವರು ಸುರಿಸಿದ ಹುಡುಗ... ನೋಡ ನೋಡುತ್ತಲೇ ಟೀಮ್ ಇಂಡಿಯಾದ ಕದ ತಟ್ಟಿದ್ದ ಯುವಕ. ಹಾಗಂತ ರಾಹುಲ್‌ ದ್ರಾವಿಡ್‌ಗೆ ಭಾರತ ತಂಡದ ಬಾಗಿಲು ಅಷ್ಟೊಂದು ಸುಲಭವಾಗಿ ತೆರೆದಿರಲಿಲ್ಲ. ದೇಶಿ ಪಂದ್ಯಗಳಲ್ಲಿ ರನ್‌ಗಳ ಮಳೆ ಸುರಿಸಿ, ಕೊನೆಗೂ ಭಾರತ ತಂಡಕ್ಕೆ ಎಂಟ್ರಿಕೊಟ್ರು.
ಅದು 1996 ಜೂನ್‌ 20. . ಕ್ರಿಕೆಟ್‌ನ ಐತಿಹಾಸಿಕ ಮೈದಾನ ಲಾಡ್ರ್ಸ್‌ ನಲ್ಲಿ ರಾಹುಲ್‌ ದ್ರಾವಿಡ್‌ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಭರ್ಜರಿಯಾಗಿಯೇ ಎಂಟ್ರಿಕೊಟ್ರು. ಮೊದಲ ಪಂದ್ಯದಲ್ಲೇ ಕೇವಲ ಐದು ರನ್‌ಗಳಿಂದ ಶತಕ ವಂಚಿತರಾದ್ರು. ನಂತ್ರ ವಿಶ್ವಕ್ರಿಕೆಟ್‌ನಲ್ಲಿ ಶುರುವಾಗಿದ್ದು ದ್ರಾವಿಡ್‌ ಪರ್ವ.
ತಾಳ್ಮೆಯ ಪ್ರತೀಕದಂತಿದ್ದ ದ್ರಾವಿಡ್‌ ಬೌಲರ್‌ಗಳನ್ನ ಮನಬಂದಂತೆ ಕಾಡುತ್ತಿದ್ರು. ಭಾರತ ತಂಡವನ್ನ ಸೋಲಿನಿಂದಲೂ ಬಚಾವ್‌ ಮಾಡ್ತಾ ಇದ್ರು. ಹಾಗೇ ನಿಧಾನಗತಿಯಾದ್ರೂ ತಂಡದ ರೋಚಕ ಗೆಲುವಿಗೂ ಕಾರಣರಾಗುತ್ತಿದ್ರು. ಅದ್ರಲ್ಲೂ 2001ರಲ್ಲಿ ಆಸ್ಟ್ರೆಲಿಯಾ ವಿರುದ್ಧ ಕೊಲ್ಕತ್ತಾದ ಈಡನ್‌ ಗಾರ್ಡನ್‌ ಮೈದಾನದಲ್ಲಿ ಆಡಿದ ಪರಿಯನ್ನ ಯಾವತ್ತೂ ಮರೆಯೋಕೆ ಆಗೋಲ್ಲ. ಲಕ್ಷ್ಮಣ್‌ ಜತೆಗೂಡಿ ಆಸ್ಟ್ರೇಲಿಯನ್ನರ ಗರ್ವಭಂಗ ಮಾಡಿದ ದ್ರಾವಿಡ್‌ ರ ಬ್ಯಾಟಿಂಗ್‌ ವೈಖರಿ ಇಂದಿಗೂ ಸವಿ ಸವಿ ನೆನಪಾಗಿಯೇ ಉಳಿದಿದೆ.
ಹೌದು, ಡಿಟರ್ಮಿನೇಷನ್‌, ಡೆಡಿಕೇಷನ್‌ ಆಂಡ್‌ ಡಿಸಿಪ್ಲೀನ್‌ಗೆ ಇನ್ನೊಂದು ಹೆಸರು ರಾಹುಲ್‌ ದ್ರಾವಿಡ್‌. ಹೊಸತನವನ್ನ ಕಲಿಯುವ ಹಂಬಲಕ್ಕಾಗಿ ಎಲ್ಲವನ್ನೂ ತ್ಯಾಗಮಾಡುವ ಶ್ರಮಜೀವಿ. ನೆಟ್ಸ್ ನಲ್ಲಿ ಸುಸ್ತಾಗುವಷ್ಟು ಬ್ಯಾಟಿಂಗ್‌ ಅಭ್ಯಾಸ ನಡೆಸಿದ್ರೂ ದ್ರಾವಿಡ್‌ಗೆ ಮಾತ್ರ ಸಮಾಧಾನವಿರುತ್ತಿರಲಿಲ್ಲ. ತನ್ನ ಬ್ಯಾಟಿಂಗ್‌ನಲ್ಲಿ ಕಲಾತ್ಮಕತೆಯನ್ನ ಮೈಗೂಡಿಸಿಕೊಂಡ ರಾಹುಲ್‌ ಬ್ಯಾಟಿಂಗ್‌ ಅನ್ನು ನೋಡುವುದೇ ಒಂದು ಸೊಗಸು.
ನಿಜ, ಬೆಂಗಳೂರಿನ ಇಂದಿರಾ ನಗರದ ಹುಡುಗ ಮುಂದೊಂದು ದಿನ ವಿಶ್ವದ ಶ್ರೇಷ್ಠ ಕ್ರಿಕೆಟಿನಾಗುತ್ತಾನೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಯಾವುದೇ ಕ್ರೀಡೆಯ ಹಿನ್ನಲೆ ಇಲ್ಲದ ಕುಟುಂಬದಿಂದ ಬಂದಿರುವ ದ್ರಾವಿಡ್‌ ಅದೇಗೇ ಕ್ರಿಕೆಟ್‌ ಮೇಲೆ ಆಸಕ್ತಿ ಬೆಳೆಯಿತ್ತೊ ಗೊತ್ತಿಲ್ಲ. ಮೊದ ಮೊದಲು ಹಾಕಿ ಆಡುತ್ತಿದ್ದ ದ್ರಾವಿಡ್ ಬಳಿಕ ಕ್ರಿಕೆಟ್‌ ಆಗಾಧವಾಗಿ ಪ್ರೀತಿಸಿದ್ರು .ಇಂದಿರಾ ನಗರದಿಂದ ಚಿನ್ನಸ್ವಾಮಿ ಕ್ರೀಡಾಂಣ, ಚಿನ್ನಸ್ವಾಮಿಯಿಂದ ಸೇಂಟ್‌ ಜೊಸೇಫ್‌ ಸ್ಕೂಲ್‌ ಹೀಗೆ ಬಿಟಿಎಸ್‌ ಬಸ್‌ನಲ್ಲೇ ಓಡಾಡುತ್ತಿದ್ದ ದ್ರಾವಿಡ್‌ ಅದ್ಭುತ ಕ್ರಿಕೆಟಿಗನಾಗಿ ರೂಪುಗೊಂಡಿದ್ದು ಎಂಥವರನ್ನ ಬೆರಗುಗೊಳಿಸುತ್ತೆ.
ಇನ್ನು, ಕ್ಲಾಸ್‌, ಕಮೀಟ್‌ಮೆಂಟ್‌ ಆಂಡ್‌ ಕನ್ಷಿಸ್ಟೆನ್ಸಿ ಈ ಮೂರು ಪದಗಳು ಸೇರಿಕೊಂಡಾಗ ದ್ರಾವಿಡ್‌ ಹೆಸರಿನ ಮುಂದೆ ದಿ ಗ್ರೇಟ್‌ ವಾಲ್‌ ಅನ್ನೋ ಬಿರುದು ಅಂಟಿಕೊಳ್ಳುತ್ತೆ. ಯಾಕಂದ್ರೆ ಕ್ರಿಕೆಟ್‌ನ ಎಲ್ಲಾ ಪಾಠಗಳನ್ನ ರಾಹುಲ್‌ ದ್ರಾವಿಡ್‌ ಅವ್ರ ಬ್ಯಾಟಿಂಗ್‌ ಮತ್ತು ವ್ಯಕ್ತಿತ್ವದಲ್ಲಿ ಕಾಣಬಹುದು. ದ್ರಾವಿಡ್‌ ಬ್ಯಾಟ್‌ನಿಂದ ಚಿಮ್ಮುವ ಚೆಂಡು ನೂಲಿನಿಂದ ಗೆರೆ ಎಳೆಯುವಂತೆ ಬೌಂಡರಿ ಗೆರೆ ದಾಟುತ್ತೆ. ಆಗ ಎದುರಾಳಿ ತಂಡದ ಆಟಗಾರರಿಗೆ ದ್ರಾವಿಡ್‌ ರ ಬ್ಯಾಟಿಂಗ್‌ ಕಲಾತ್ಮಕತೆಯನ್ನ ಕಣ್ಣುತುಂಬಿಕೊಳ್ಳುವ ಬಯಕೆ ಬಂದ್ರೂ ಅಚ್ಚರಿ ಏನಿಲ್ಲ.
ನಿಜ, ದ್ರಾವಿಡ್‌ ತಂಡಕ್ಕಾಗಿ ಎಲ್ಲವನ್ನೂ ಸಮರ್ಪನೆ ಮಾಡಿಕೊಳ್ಳುವ ಸಹ ಹೃದಯಿ. 2003ರ ವಿಶ್ವಕಪ್‌ನಲ್ಲಿ ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನೂ ನಿಭಾಯಿಸಿದ್ರು. ಬಳಿಕ ನಾಯಕನಾಗಿಯೂ ತಂಡವನ್ನ ಸಮರ್ಥವಾಗಿ ಮುನ್ನಡೆಸಿದ್ರು. ಆದ್ರೆ 2007ರ ವಿಶ್ವಕಪ್‌ನ ಹೀನಾಯ ಸೋಲನ್ನ ಮಾತ್ರ ದ್ರಾವಿಡ್‌ ಮರೆಯೋದು ತುಂಬಾನೇ ಕಷ್ಟ, ಇದ್ರಿಂದ ದ್ರಾವಿಡ್ ನಾಯಕತ್ವಕ್ಕೂ ರಾಜಿನಾಮೆ ನೀಡಿದ್ರು.
ನಂತ್ರ ಆಸ್ಟ್ರೇಲಿಯಾ ವಿರುದ್ಧ ಕಳಪೆ ಪ್ರದರ್ಶನ ನೀಡಿದಾಗ ದ್ರಾವಿಡ್‌ ಗೆ ಟೀಮ್ ಇಂಡಿಯಾದ ಏಕದಿನ ತಂಡ ಬಾಗಿಲು ಮುಚ್ಚಿತ್ತು. ಇದೀಗ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾದಾಗ ಎಲ್ರೂ ಅಚ್ಚರಿಗೊಂಡ್ರು. ಆದ್ರೆ ದ್ರಾವಿಡ್‌ಗೆ ಮಾತ್ರ ಆಶ್ಚರ್ಯವಾಗಲಿಲ್ಲ. ಯಾಕಂದ್ರೆ ಬಿಸಿಸಿಐ ತನಗೆ ಕೊನೆಯ ಏಕದಿನ ಪಂದ್ಯವನ್ನ ಆಡುವ ಅವಕಾಶ ಕಲ್ಪಿಸಿದೆ ಎಂಬುದು ದ್ರಾವಿಡ್‌ಗೆ ಚೆನ್ನಾಗಿ ಗೊತ್ತು.
ಅದೇನೇ ಇದ್ರೂ ಟೀಮ್ ಇಂಡಿಯಾದ ಟೆಸ್ಟ್‌ ತಂಡಕ್ಕೆ ಮಾತ್ರ ದ್ರಾವಿಡ್‌ ಇವತ್ತಿಗೂ ಅಪತ್ಭಾಂದವ. ಈಗಾಗಲೇ ಕ್ರಿಕೆಟ್‌ ಬದುಕಿನ ಮುಸ್ಸಂಜೆಯಲ್ಲಿರುವಾಗಲೂ ದ್ರಾವಿಡ್‌ರ ರನ್‌ ದಾಹ ಬತ್ತಿಲ್ಲ. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲೂ ಟೀಮ್ ಇಂಡಿಯಾದ ಮರ್ಯಾದೆ ಉಳಿಸಿದ್ದು ದಿ ಗ್ರೇಟ್‌ ವಾಲ್‌.
ಈಗಾಗಲೇ ಟೆಸ್ಟ್‌ ಮತ್ತು ಏಕದಿನ ಪಂದ್ಯಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ರನ್‌ ಪೂರೈಸಿದ ಹೆಗ್ಗಳಿಕೆ ದ್ರಾವಿಡ್‌ ಅವ್ರದ್ದು. ಸದ್ಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ದಾಖಲಿಸಿದ ವಿಶ್ವದ ನಾಲ್ಕನೇ ಆಟಗಾರ ಹಾಗೂ ಟೆಸ್ಟ್‌ ಕ್ರಿಕೆಟ್‌ ನಲ್ಲಿ ಗರಿಷ್ಠ ರನ್‌ ಕಲೆ ಹಾಕಿದ ವಿಶ್ವದ ಎರಡನೇ ಆಟಗಾರನೂ ಹೌದು. ಜತೆಗೆ ಗರಿಷ್ಠ ಕ್ಯಾಚ್‌ ಹಿಡಿದ ಹಿರಿಮೆ ಸಹ ದ್ರಾವಿಡ್‌ಗೆ ಸಲ್ಲುತ್ತೆ.
ಈ ನಡುವೆ, ದ್ರಾವಿಡ್‌ ಟ್ವೆಂಟಿ ಟ್ವೆಂಟಿ ಕ್ರಿಕೆಟ್‌ ಯುವಕರ ಆಟ ಅಂತ ದೂರ ಸರಿದ್ರು. ಆದ್ರೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮಿಂಚು ಹರಿಸಿದ ದ್ರಾವಿಡ್‌ ಟ್ವೆಂಟಿ ಟ್ವೆಂಟಿ ಪಂದ್ಯ ಕೇವಲ ಹೊಡಿ ಬಡಿ ಆಟವಲ್ಲ. ಅನುಭವ ಮತ್ತು ತಾಂತ್ರಿಕತೆಯೂ ಬೇಕಾಗುತ್ತೆ ಎಂಬುದನ್ನ ಸಾಬೀತುಪಡಿಸಿದ್ರು. ಅಷ್ಟೇ ಅಲ್ಲ, ಇಂಗ್ಲೆಂಡ್‌ ವಿರುದ್ಧ ಚೊಚ್ಚಲ ಹಾಗೂ ಕೊನೆಯ ಟ್ವೆಂಟಿ ಟ್ವೆಂಟಿ ಪಂದ್ಯವನ್ನೂ ಆಡಿದ್ರು. ಜತೆಗೆ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿ ತನ್ನ ಬ್ಯಾಟಿಂಗ್‌ ಝಲಕನ್ನು ಕ್ರಿಕೆಟ್‌ ಜಗತ್ತಿಗೆ ಪರಿಚಯಿಸಿದ್ರು.
ಹಾಗಂತ ರಾಹುಲ್‌ ದ್ರಾವಿಡ್‌ ಏಕದಿನ ಪಂದ್ಯಗಳಲ್ಲಿ ಮಾತ್ರ ಮಿಂಚಲಿಲ್ಲ. ಮೂರು ವರ್ಷಗಳ ನಂತ್ರ ಬ್ಲ್ಯೂ ಜೆರ್ಸಿಯಲ್ಲಿ ಕಾಣಿಸಿಕೊಂಡ್ರೂ ದ್ರಾವಿಡ್‌ ಬ್ಯಾಟಿಂಗ್‌ನಲ್ಲಿ ಮಾತ್ರ ಅದೇ ಕಲಾತ್ಮಕತೆ ಕಾಣುತ್ತಿತ್ತು. ಆದ್ರೆದೊಡ್ಡಪೇರಿಸಲುಮಾತ್ರ ಜಾಮಿಗೆಸಾಧ್ಯವಾಗಲಿಲ್ಲ. ಹಾಗೇ ಸರಣಿ ಸೋಲಿನೊಂದಿಗೆ ರಾಹುಲ್‌ ತನ್ನ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಬೇಕಾಗಿದೆ.
ಒಟ್ಟಿನಲ್ಲಿ ರಾಹು ಲ್‌ ದ್ರಾವಿಡ್‌ ಅನ್ನೋ ಬ್ಯಾಟಿಂಗ್‌ ಕಲಾವಿದನನ್ನು ಇನ್ನು ಮುಂದೆ ಅಂಗಣದಲ್ಲಿ ಬ್ಲ್ಯೂ ಜೆರ್ಸಿಯಲ್ಲಿ ನೋಡಲು ಸಾಧ್ಯವಿಲ್ಲ. ಆದ್ರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇನ್ನೂ ಎರಡು ವರ್ಷಗಳ ಕಾಲ ಆಡುವ ಸಾಮರ್ಥ್ಯ ಹೊಂದಿದ್ರೂ ಬಿಸಿಸಿಐ ಇದಕ್ಕೆ ಅವಕಾಶ ಕಲ್ಪಿಸುತ್ತಾ ಅನ್ನೋದು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.
ಏನೇ ಆದ್ರೂ ಸಹ ಆಟಗಾರರ ನೆಚ್ಚಿನ ಜಾಮಿಯಾಗಿರುವ ರಾಹುಲ್‌ ದ್ರಾವಿಡ್‌ ತನ್ನ ವರ್ಣ ರಂಜಿತ ಏಕದಿನ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳುತ್ತಿದ್ದಾರೆ. ಕಳೆದ 15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿನಲ್ಲಿ ದ್ರಾವಿಡ್‌ ಹೆಸರಿಗೆ ಎಲ್ಲೂ ಕಪ್ಪುಚುಕ್ಕೆ ಅಂಟಿಕೊಂಡಿಲ್ಲ. ಅಷ್ಟರ ಮಟ್ಟಿಗೆ ರಾಹುಲ್‌ ದ್ರಾವಿಡ್‌ ಫರ್ಪೆಕ್ಟ್‌. ತನ್ನ 38ರ ಹರೆಯದಲ್ಲೂ ಕ್ಲಾಸ್‌ಗೂ ಸೈ, ಮಾಸ್‌ಗೂ ಜೈ ಅನ್ನೋ ದ್ರಾವಿಡ್‌ ರಂತಹ ಆಟಗಾರನನ್ನು ವಿಶ್ವ ಕ್ರಿಕೆಟ್‌ಗೆ ಕೊಡುಗೆಯಾಗಿ ನೀಡಿದ ಹೆಮ್ಮೆ ಕರ್ನಾಟಕದ್ದು.
ಸನತ್ ರೈ

ಎಲ್ಲವೂ ದೇವರ ಆಟ...!

ಇದು ಕ್ರಿಕೆಟ್‌ ಲೋಕದ ಮಹಾ ಕಾವ್ಯ...ಹಾಗಂತ ಕಲ್ಪನೆಯಲ್ಲ.. ಆದ್ರೆ ಕಲ್ಪನೆಗೂ ಸ್ಪಂದಿಸುವ ಜೊತೆಗೆ ಅದನ್ನೂ ಮೀರಿಸುವ ಆಟದ ಚಿತ್ತಾರ.. ಇದಕ್ಕೆ ಅಪಾರ ನಿರೀಕ್ಷೆಗಳನ್ನ ಗರಿಗೆದರುವಂತೆ ಮಾಡುವ ತಾಕತ್‌ ಇದೆ... ಟೀಕೆಗಳಿಗೆ ಉತ್ತರ ನೀಡುವ ಧಮ್‌ ಇದೆ… ಧುಮ್ಮಿಕ್ಕುವ ಜಲಪಾತದ ಭೋರ್ಗರೆತವೂ ಇದೆ... ಒಂದೇ ಏಟಿಗೆ ಅಪೋಶನ ತೆಗೆದುಕೊಳ್ಳುವ ಸುನಾಮಿಯ ಅಬ್ಬರವೂ ಇದೆ.. ಹಾಗೇ, ನೀಲ ಸಮುದ್ರದ ನಡುವಿನ ಶಾಂತಿಯೂ ಇದೆ. ಹೌದು..ಇದು ದೇವ್ರ ಆಟ.. ವಾಮನ ಮೂರ್ತಿಯ ತ್ರಿವಿಕ್ರಮವತಾರ...

ಸಚಿನ್‌ ರಮೇಶ್‌ ತೆಂಡುಲ್ಕರ್‌

ಈ ಆಟವನ್ನ ಬಣ್ಣಿಸಲು ಪದಪುಂಜಗಳು ಸಾಕಾಗೋದಿಲ್ಲ...ನಿಜ, ಈ ಜೀನಿಯಸ್ ಆಟಗಾರನ ಆಟದಲ್ಲಿ ಅಂತಹುದೊಂದು ಮಾಂತ್ರಿಕ ಸ್ಪರ್ಶವಿದೆ. ಇಲ್ಲಿ ಕೈಗೆಟುಕದ ಭಾವನೆಗಳ ಆಕರ್ಷಣೆ ಇದೆ...ಸಚಿನ್ ಅವ್ರ ಬ್ಯಾಟಿಂಗ್‌ ವೈಭವದ ಎದುರು ಭವಿಷ್ಯವೆಲ್ಲಾ ಮಸುಕು.. ಕ್ರಿಕೆಟ್‌ ದಾಖಲೆಗಳೆಲ್ಲಾ ಸದ್ಯ ವರ್ತಮಾನ.. ಮುಂದೆ ಅದೆಲ್ಲಾ ಭೂತಕಾಲದ ಗತ ವೈಭವ..
ಕ್ರಿಕೆಟ್‌.. ತನ್ನ ಬದುಕು ಅಂತ ಸಚಿನ್‌ ನಂಬಿಕೊಂಡಿದ್ದಾರೆ. ಆದ್ರೆ ಅಭಿಮಾನಿ ದೇವ್ರುಗಳು ಸಚಿನ್ ತಮ್ಮ ಉಸಿರು ಅಂತ ಭಾವಿಸಿಕೊಂಡೇ ಪೂಜೆ ಮಾಡ್ತಿದ್ದಾರೆ. ಹಾಗಂತ ತೆಂಡುಲ್ಕರ್‌ ಪವಾಡ ಪುರುಷ ಅಲ್ಲ.. ಆದ್ರೂ ಕ್ರಿಕೆಟ್‌ನಲ್ಲಿ ಪವಾಡ ಮಾಡಿದ್ದಾರೆ... ಮಾಡ್ತಾ ಇದ್ದಾರೆ. ಇದ್ರಿಂದ ಪ್ರತಿ ಪಂದ್ಯದಲ್ಲೂ ಸಚಿನ್ ಮೇಲೆ ಅಭಿಮಾನಿಗಳ ಆಪೇಕ್ಷೆ ಜಾಸ್ತಿಯಾಗಿರುತ್ತೆ. ಹಾಗೇ, ಅಭಿಮಾನಿಗಳ ಆಪೇಕ್ಷೆಗಳನ್ನ ಈಡೇರಿಸಲು ಸಚಿನ್ ಪಡುವ ಕಷ್ಟ ಅಷ್ಟಿಷ್ಟಲ್ಲ..ಅದಕ್ಕಾಗಿ ಲೆಕ್ಕವಿಲ್ಲದಷ್ಟು ಬೆವರು ಸುರಿಸ್ತಾರೆ.....
ಆದ್ರೂ ತೆಂಡುಲ್ಕರ್‌ ಈಗ ನೂರನೇ ಮಹಾಶತಕಕ್ಕಾಗಿ ಒದ್ದಾಡುತ್ತಿದ್ದಾರೆ. ಆದ್ರೆ, ತಾನು ಅಂದುಕೊಂಡಿದ್ದನ್ನ ಸಾಧಿಸಿ ತೋರಿಸುವುದು ಸಚಿನ್‌ ಜಾಯಮಾನ. ಇದ್ರಿಂದ ನೂರನೇ ಶತಕ ತಡವಾದ್ರೂ ಇತಿಹಾಸ ಪುಟ ಸೇರುತ್ತೆ ಅನ್ನೋದರಲ್ಲಿ ಅನುಮಾನ ಬೇಡ.
ಇನ್ನು, 2011ರ ವಿಶ್ವಕಪ್‌ ಗೆದ್ದಾಗಂತೂ ತೆಂಡುಲ್ಕರ್‌ ಅವ್ರ ಸಡಗರಕ್ಕೆ ಪಾರವೇ ಇರಲಿಲ್ಲ.. ಪುಟ್ಟ ಮಗುವಿನಂತೆ ಓಡೋಡಿ ಬಂದು, ಸಹ ಆಟಗಾರರನ್ನ ಬಿಗಿದಪ್ಪಿಕೊಂಡ ದೃಶ್ಯಗಳನ್ನ ನೋಡಿದಾಗ ನಮಗೆ ಗೊತ್ತಿಲ್ಲದೆ ಕಣ್ಣಂಚಿನಲ್ಲಿ ನೀರು ಬರುತ್ತೆ.
ನಿಜ, ಈ ಅಮೃತಗಳಿಗೆಗೆ ಸಚಿನ್‌ 22 ವರ್ಷ ಕಾಯಬೇಕಾಯ್ತು. ಶಬರಿ ಶ್ರೀರಾಮನಿಗೆ ಕಾದಂತೆ ವಿಶ್ವಕಪ್‌ ಟ್ರೋಫಿಗೆ ಮುತ್ತಿಡಲು ಸಚಿನ್‌ ತೆಂಡುಲ್ಕರ್ ಆರನೇ ಬಾರಿ ವಿಶ್ವಕಪ್‌ ಆಡಬೇಕಾಯ್ತು. ಗೆದ್ದೆ ಗೆಲ್ಲಬೇಕು ಎಂಬ ಆಸೆ, ಹಠದಲ್ಲಿದ್ದ ಸಚಿನ್‌ಗೆ ಧೋನಿ ಹುಡುಗರು ನಿರಾಸೆಗೊಳಿಸಲಿಲ್ಲ. ಕೊಟ್ಟ ಮಾತಿನಂತೆ ಕ್ರಿಕೆಟ್‌ ದೇವ್ರ ಮುಕುಟಕ್ಕೆ ವಿಶ್ವಕಪ್‌ ಗರಿಯನ್ನ ಮುಡಿಸಿದ್ರು. ಮಿನುಗುವ ಟ್ರೋಫಿಗೆ ಮನ ಬಂದಂತೆ ಚುಂಬಿಸಿದ ಮಾಸ್ಟರ್‌ ತಮ್ಮ ವರ್ಣ ರಂಜಿತ ಕ್ರಿಕೆಟ್‌ ಬದುಕನ್ನ ಸಾರ್ಥಕವನ್ನಾಗಿಸಿಕೊಂಡ್ರು.
ಅಂದ ಹಾಗೇ, ಇದು, ಸುಮಾರು 32 ವರ್ಷಗಳ ಹಿಂದಿನ ಸತ್ಯ ಕಥೆ. .. ಬ್ಯಾಟ್‌ಗಿಂತ ಸ್ವಲ್ಪ ಉದ್ದಗಿದ್ದ ಪೋರ ಸಚಿನ್‌, ಶಿವಾಜಿ ಪಾರ್ಕ್‌ ಅಂಗಣದಲ್ಲಿ ಕ್ರಿಕೆಟ್‌ ಅಭ್ಯಾಸ ಮಾಡುತ್ತಿದ್ರು.. ಗುರು ರಮಕಾಂತ್‌ ಅಚ್ರೇಕರ್‌ ಹೇಳಿಕೊಡುವ ಒಂದೊಂದು ಟಿಪ್ಸ್‌‌ ಗಳಿಂದ ಪ್ರೇರಿತನಾದ ಸಚಿನ್‌ ತನ್ನ ಬದುಕಿನ ಬಗ್ಗೆ ಸುಂದರ ಕನಸುಗಳನ್ನ ಕಾಣತೊಡಗಿದ್ರು. ಅದನ್ನು ನನಸಾಗಿಸಲು ಬಾಲಕ ಸಚಿನ್‌ ಹಲವು ಸವಾಲುಗಳನ್ನ ಎದುರಿಸಬೇಕಾಯ್ತು. ಒಂದೊಂದು ಸವಾಲುಗಳನ್ನ ದಾಟಿ ಬರುವಾಗ ಸಾಕಷ್ಟು ನಿರಾಸೆ ಅನುಭವಿಸಿದ್ರೂ ಛಲ ಮತ್ತು ಹಠವನ್ನ ಬಿಡಲಿಲ್ಲ.
ನಂತ್ರ ನಡೆದದ್ದು ಇತಿಹಾಸ.. ಸಿಂಹಾವಲೋಕನ ಮಾಡಿದಾಗ ಅಬ್ಬಾ ಅನ್ಸುತ್ತೆ..ಚೊಚ್ಚಲ ರಣಜಿ ಟ್ರೋಫಿ, ದುಲೀಪ್‌ ಟ್ರೋಫಿ, ಇರಾನಿ ಟ್ರೋಫಿಯಲ್ಲಿ ಶತಕ ಸಿಡಿಸಿದ ಬಾಲಕ ಸಚಿನ್‌ ಭಾರತ ಕ್ರಿಕೆಟ್‌ ತಂಡದ ಕದ ತಟ್ಟಿದ್ರು. ಫ್ಲೋ..
1989 ನವೆಂಬರ್‌ 15 .. ಮರೆತರೂ ಮರೆಯಲಾಗದ ದಿನ. ಮತ್ತೆ ಮತ್ತೆ ನೆನಪಿಗೆ ಬರುವ ದಿನ.. ಯಾಕಂದ್ರೆ, ಅದು, ವಿಶ್ವ ಕ್ರಿಕೆಟ್‌ ಸ್ಕೂಲ್‌ಗೆ ಮುನ್ನುಡಿ ಬರೆದ ದಿನ. ಕರಾಚಿಯಲ್ಲಿ ನಡೆದ ಇಂಡೋ-ಪಾಕ್‌ ಟೆಸ್ಟ್‌ ಪಂದ್ಯದಲ್ಲಿ 16ರ ಹರೆಯದ ಶಾಲಾ ಬಾಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿಕೊಟ್ಟ ದಿನ.
ಹೌದು, ಪಾಕ್‌ನ ವೇಗಿಗಳು ಸಚಿನ್‌ನ ಧೈರ್ಯವನ್ನ ಟೆಸ್ಟ್‌ ಮಾಡಲು ಶುರು ಮಾಡಿದ್ರು. ಬೌನ್ಸರ್‌, ಯಾರ್ಕರ್‌ ಎಸೆತಗಳಿಂದ ಎದೆಗುಂದುವಂತೆ ಮಾಡಿದ್ರು. ಆದ್ರೂ ಸಚಿನ್‌ ಹೆದರಲಿಲ್ಲ. ಬದಲಾಗಿ ಇದು ವಿಶ್ವ ಕ್ರಿಕೆಟ್‌ಗೆ ಸುಸ್ವಾಗತ ಅಂತ ಮನದಲ್ಲೇ ಅಂದುಕೊಂಡ್ರು.
ನಿಜ, ಮುಖಕ್ಕೆ ಏಟು ಮಾಡ್ಕೊಂಡ್ರೂ ಎದೆಗುಂದದ ವೀರ ಸೇನಾನಿ. . ರಕ್ತದ ಹನಿಗಳು ನೆಲಕ್ಕುರುಳಿದ್ರೂ ಅಂಜದ ಗಂಡು. ಕ್ರಿಕೆಟ್‌ ಆಟವನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುವ ಹಠವಾದಿ. ತನ್ನ ಮಾಸ್ಟರ್‌ ಬ್ಲಾಸ್ಟರ್ ಆಟದಿಂದ ಅಭಿಮಾನಿಗಳನ್ನ ರಂಜಿಸುವ ಕಲಾಕಾರ. ರನ್‌ಗಳನ್ನ ಗುಡ್ಡೆ ಹಾಕಿದ ದಾಖಲೆವೀರ..
ಇಲ್ಲಿಯವರೆಗೆ 183 ಟೆಸ್ಟ್‌ ಪಂದ್ಯಗಳನ್ನ ಆಡಿರುವ ಸಚಿನ್‌ 57ರ ಸರಾಸರಿಯಲ್ಲಿ 15,086 ರನ್‌ ದಾಖಲಿಸಿದ್ದಾರೆ. ಇದ್ರಲ್ಲಿ ವಿಶ್ವದಾಖಲೆಯ 51 ಶತಕ ಹಾಗೂ 62 ಅರ್ಧಶತಗಳಿದ್ದು, 45 ವಿಕೆಟ್‌ಗಳನ್ನೂ ಕಬಳಿಸಿದ್ದಾರೆ.
ಹಾಗೇ, 453 ಏಕದಿನ ಪಂದ್ಯಗಳನ್ನ ಆಡಿರುವ ದಾಖಲೆ ವೀರ 45ರ ಸರಾಸರಿಯಲ್ಲಿ 18,111 ರನ್‌ ಗಳಿಸಿದ್ದಾರೆ. ಇದ್ರಲ್ಲಿ 48 ಶತಕ ಹಾಗೂ 95 ಅರ್ಧಶತಕಗಳಿವೆ. ಹಾಗೇ 154 ವಿಕೆಟ್‌ಗಳನ್ನ ಕಬಳಿಸಿದ್ದಾರೆ. ಇದೀಗ ಸಚಿನ್‌ ದಾಖಲೆಗೆ ಶತಕಗಳ ಶತಕ ದಾಖಲಿಸುವೊದೊಂದು ಮಾತ್ರ ಬಾಕಿ ಇದೆ. ಹಾಗೇ ಐಪಿಎಲ್‌ ನಲ್ಲೂ ಶತಕ ದಾಖಲಿಸುವ ಮೂಲಕ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಶತಕ ದಾಖಲಿಸಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಆದ್ರೂ , ಸಚಿನ್‌ ರನ್‌ ದಾಹ ಮಾತ್ರ ಇನ್ನೂ ನೀಗಿಲ್ಲ. ಅದು ತಪ್ತ ಮನಸ್ಸಿನ ತಪ್ಪಸ್ಸಿನಂತೆ... ಸದಾ ಮಿಡಿಯುತ್ತಿರುವ ತುಮುಲ. ಇಂತಹ ಮನೋಭಾವನೆ ಸಚಿನ್‌ಗಿರಲು ಮಾತ್ರ ಸಾಧ್ಯ. ಯಾಕಂದ್ರೆ ಅಲ್ಲಿ ಮಾತಿಲ್ಲ.. ಬ್ಯಾಟ್‌ ಮೌನವಾಗಿಯೇ ಉತ್ತರ ನೀಡುತ್ತೆ. ಹಾಗೇ, ಅಹಂ ಇಲ್ಲ. ಬದ್ಧತೆ ಇದೆ. ಗಡಿಬಿಡಿ ಇಲ್ಲ.... ಏಕಾಗ್ರತೆ ಇದೆ. ಕ್ರಿಕೆಟ್‌ ಅಂದ್ರೆ ಇಷ್ಟೇನಾ ಅನ್ನೋ ಅಸಡ್ಡೆ ಇಲ್ಲ... ಕಲಿಯುವುದಕ್ಕೆ ಇನ್ನೂ ಇದೆ ಅನ್ನೋ ಪರಿಶ್ರಮವಿದೆ. ಇದು ಜೀನಿಯಸ್‌ ಆಟಗಾರನ ಸ್ಪೆಷಾಲಿಟಿ.
ಈಗಾಗಲೇ ಸುಮಾರು 75ಕ್ಕೂ ಅಧಿಕ ದಾಖಲೆಗಳು ಸದ್ದಿಲ್ಲದೆ ಸಚಿನ್‌ ಹೆಸರಿನಲ್ಲಿ ಅಂಟಿಕೊಂಡಿವೆ. ಹಾಗೇ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಸಚಿನ್‌ ಮುಡಿಗೇರಿವೆ. ಅದ್ರಲ್ಲೂ ಈಗ ಪ್ರತಿಷ್ಠಿತ ಭಾರತರತ್ನ ಪ್ರಶಸ್ತಿ ನೀಡಬೇಕು ಅನ್ನೋಕೂಗೂ ಜೋರಾಗಿಯೇ ಕೇಳಿಬರ್ತಿದೆ. ಕೇಂದ್ರ ಸರ್ಕಾರಕ್ಕೆ ಕಾನೂನಿನ ತೊಡಕು ಇರೋದರಿಂದ ಸಚಿನ್‌ಗೆ ಪ್ರಶಸ್ತಿನೀಡಲು ಸಾಧ್ಯವಾಗುತ್ತಿಲ್ಲ. ಆದ್ರೂ ಸಚಿನ್‌ ಭಾರತದ ಅನರ್ಘ್ಯ ರತ್ನ.
ಸಚಿನ್ ಗಳಿಸುವ ಪ್ರತಿಯೊಂದು ರನ್‌ನಲ್ಲೂ ಹೊಸತನವಿರುತ್ತೆ. ಕ್ರಿಕೆಟ್‌ ಕಲಿಯುವ ಚಿಣ್ಣರಿಗೆ ಸಚಿನ್‌ ಪಾಠಶಾಲೆಯಾದ್ರೆ, ಯುವ ಆಟಗಾರರಿಗೆ ಫ್ರೊಫೆಸರ್‌. ಹಾಗೇ,ವಿಶ್ವಕ್ರಿಕೆಟ್‌ಗೆ ಯೂನಿವರ್ಸಿಟಿ. ಅಷ್ಟರ ಮಟ್ಟಿಗೆ ಸಚಿನ್‌ ಕ್ರಿಕೆಟ್‌ನ ಪರಿಪೂರ್ಣ ಕಲಾವಿದರಾಗಿದ್ದಾರೆ. ಅದು ಏಕದಿನ ಪಂದ್ಯವೇ ಆಗಿರಲಿ, ಟೆಸ್ಟ್‌ ಪಂದ್ಯವೇ ಆಗಿರಲಿ.. ಅಥವಾ ಚುಟುಕು ಕ್ರಿಕೆಟ್ಟೆ ಆಗಿರಲಿ.. ಅಲ್ಲಿ ಸಚಿನ್ ಇದ್ರೆನೇ ಅಂದ... ಅವ್ರ ಆಟವನ್ನ ನೋಡೋದೆ ಚೆಂದ. ಯಾಕಂದ್ರೆ ಸಚಿನ್ ಅಭಿಮಾನಿಗಳ ಪಾಲಿಗೆ ಯಾವತ್ತಿಗೂ ಕ್ಲಾಸ್‌ ಆಂಡ್‌ ಮಾಸ್‌ ಹೀರೋ.
ಸನತ್ ರೈ
.

.

Thursday, March 10, 2011

ಎಲ್ಲವೂ ದೇವ್ರ ಆಟ...!

ಅದೊಂದು ಸುಂದರ ದೃಶ್ಯ ಕಾವ್ಯ...ಹಾಗಂತ ಕಲ್ಪನೆಯಲ್ಲ.. ಇದು ಕಲ್ಪನೆಗಳಿಗೂ ಸ್ಪಂದಿಸುವ ಜೊತೆಗೆ ಅದನ್ನೂ ಮೀರಿಸುವ ಆಟದ ಚಿತ್ತಾರ.. ಇದಕ್ಕೆ ಅಪಾರ ನಿರೀಕ್ಷೆಗಳನ್ನ ಗರಿಗೆದರುವಂತೆ ಮಾಡುವ ತಾಕತ್‌ ಇದೆ... ಟೀಕೆಗಳಿಗೆ ಉತ್ತರ ನೀಡುವ ಧಮ್‌ ಇದೆ… ಧುಮ್ಮಿಕ್ಕುವ ಜಲಪಾತದ ಭೋರ್ಗರೆತವೂ ಇದೆ... ಒಂದೇ ಏಟಿಗೆ ಅಪೋಶನ ತೆಗೆದುಕೊಳ್ಳುವ ಸುನಾಮಿಯ ಅಬ್ಬರವೂ ಇದೆ.. ಹಾಗೇ, ನೀಲ ಸಮುದ್ರದ ನಡುವಿನ ಶಾಂತಿಯೂ ಇದೆ. ಹೌದು..ಇದು ದೇವ್ರ ಆಟ.. ವಾಮನ ಮೂರ್ತಿಯ ತ್ರಿವಿಕ್ರಮವತಾರ...
ಈ ಆಟವನ್ನ ಬಣ್ಣಿಸಲು ಪದಪುಂಜಗಳು ಸಾಕಾಗೋದಿಲ್ಲ...ನಿಜ, ಈ ಜೀನಿಯಸ್ ಆಟಗಾರನ ಆಟದಲ್ಲಿ ಅಂತಹುದೊಂದು ಮಾಂತ್ರಿಕ ಸ್ಪರ್ಶವಿದೆ. ಇಲ್ಲಿ ಕೈಗೆಟುಕದ ಭಾವನೆಗಳ ಆಕರ್ಷಣೆ ಇದೆ... ಸಚಿನ್ ಅವ್ರ ಬ್ಯಾಟಿಂಗ್‌ ವೈಭವದ ಎದುರು ಭವಿಷ್ಯವೆಲ್ಲಾ ಮಸುಕು.. ಕ್ರಿಕೆಟ್‌ ದಾಖಲೆಗಳೆಲ್ಲಾ ಸದ್ಯ ವರ್ತಮಾನ.. ಮುಂದೆ ಅದೆಲ್ಲಾ ಭೂತಕಾಲದ ಗತ ವೈಭವ.. ಯಾಕಂದ್ರೆ ಮತ್ತೊಬ್ಬ ಸಚಿನ್‌ ತೆಂಡುಲ್ಕರ್‌ನ ಅವತಾರ ಅಸಾಧ್ಯ.
ಕ್ರಿಕೆಟ್‌.. ತನ್ನ ಬದುಕು ಅಂತ ಸಚಿನ್‌ ನಂಬಿಕೊಂಡಿದ್ದಾರೆ. ಆದ್ರೆ ಅಭಿಮಾನಿ ದೇವ್ರುಗಳು ಸಚಿನ್ ತಮ್ಮ ಉಸಿರು ಅಂತ ಭಾವಿಸಿಕೊಂಡೇ ಪೂಜೆ ಮಾಡ್ತಿದ್ದಾರೆ. ಹಾಗಂತ ತೆಂಡುಲ್ಕರ್‌ ಪವಾಡ ಪುರುಷ ಅಲ್ಲ.. ಆದ್ರೆ ಕ್ರಿಕೆಟ್‌ನಲ್ಲಿ ನಿಜವಾಗಿಯೂ ಪವಾಡ ಮಾಡಿದ್ದಾರೆ... ಮಾಡ್ತಾ ಇದ್ದಾರೆ. ಇದ್ರಿಂದ ಪ್ರತಿ ಪಂದ್ಯದಲ್ಲೂ ಸಚಿನ್ ಮೇಲೆ ಅಭಿಮಾನಿಗಳ ಆಪೇಕ್ಷೆ ಜಾಸ್ತಿಯಾಗಿರುತ್ತೆ. ಹಾಗೇ, ಅಭಿಮಾನಿಗಳ ಆಪೇಕ್ಷೆಗಳನ್ನ ಈಡೇರಿಸಲು ಸಚಿನ್ ಪಡುವ ಕಷ್ಟ ಅಷ್ಟಿಷ್ಟಲ್ಲ..ಅದಕ್ಕಾಗಿ ಲೆಕ್ಕವಿಲ್ಲದಷ್ಟು ಬೆವರ ಮಹಾಪೂರವನ್ನೇ ಸುರಿಸಿದ್ದಾರೆ. ಅದಕ್ಕಾಗಿಯೇ ಸಚಿನ್‌.. ಗಾಡ್‌ ಆಫ್‌ ಕ್ರಿಕೆಟ್‌.
ಆದ್ರೆ ಕ್ರಿಕೆಟ್ ದೇವ್ರ ಕಿರೀಟದಲ್ಲಿ ಒಂದು ಗರಿ ಮಾತ್ರ ಇನ್ನೂ ಸೇರ್ಕೊಂಡಿಲ್ಲ. ತನ್ನ ವರ್ಣ ರಂಜಿತ ಕ್ರಿಕೆಟ್‌ ಬದುಕಿನಲ್ಲಿ ವಿಶ್ವಕಪ್‌ ಗೆಲ್ಲಲು ಆಗಲಿಲ್ಲ ಅನ್ನೋ ವಿಷಾದವಿದೆ. ವಿಶ್ವಕಪ್‌ ಟ್ರೋಫಿ ತನಗೆ ಮರೀಚಿಕೆಯಾಗಿದೆ ಎಂಬ ನೋವಿದೆ. ಐದು ಬಾರಿ ವಿಶ್ವಕಪ್‌ ತನ್ನ ಕೈಯಿಂದ ಶರವೇಗದಲ್ಲೇ ಮಾಯವಾಗಿದೆ ಅನ್ನೋ ನಿರಾಸೆ ಇದೆ. ಇದೀಗ ಬಲೂ ದೂರದಿಂದಲೇ ವಿಶ್ವಕಪ್‌ ಟ್ರೋಫಿ ಮತ್ತೆ ಮಿನುಗುತ್ತಿದೆ. ಆರನೇ ಬಾರಿ ಮತ್ತೊಮ್ಮೆ ತೆಂಡುಲ್ಕರ್‌ ಅವ್ರ ಕಣ್ಣಂಚಿನಲ್ಲಿ ವಿಶ್ವಕಪ್‌ ಟ್ರೋಫಿ ಹೊಳೆಯುತ್ತಿದೆ. ಅದೂಗಿರಿ ವಜ್ರದ ಹಾಗೇ....
ಇದೀಗ ಧೋನಿಯ ದಂಡನಾಯಕತ್ವಕ್ಕೆ ಸಚಿನ್ ಸಾರಥಿಯಾಗಿದ್ದಾರೆ. ವಿಶ್ವಕಪ್‌ ಆಶ್ವಮೇಧಕ್ಕೆ ಧೋನಿ ಪಾತ್ರಧಾರಿಯಾದ್ರೆ, ಸಚಿನ್‌ ಸೂತ್ರಧಾರಿ.. ಧೋನಿ ಹುಡುಗರು ಈಗಾಗಲೇ ಸಚಿನ್‌ಗೋಸ್ಕರ ವಿಶ್ವಕಪ್‌ ಗೆದ್ದೇ ಗೆಲ್ತಿವಿ ಅಂತ ಪಣ ತೊಟ್ಟಿದ್ದಾರೆ. ಆದ್ರೆ ಸಚಿನ್‌ ಮನ ದೇಶಕ್ಕಾಗಿ ತುಡಿಯುತ್ತಿದೆ. ಧೋನಿ ಹುಡುಗರು ತನಗಾಗಿ ಟ್ರೋಫಿ ಗೆದ್ರೆ ಅದು ಕೋಟಿ ಕೋಟಿ ಭಾರತೀಯರಿಗೆ ಗೆದ್ದಂತೆ ಎಂಬುದು ತೆಂಡುಲ್ಕರಿಗೂ ಗೊತ್ತು. ಯಾಕಂದ್ರೆ ಇಡೀ ಕ್ರಿಕೆಟ್‌ ಜಗತ್ತೆ ಮಾಸ್ಟರ್‌ನ ಆಟಕ್ಕೆ ಸಲಾಂ ಅನ್ನುತ್ತಿದೆ.
ಹೌದು, ವಿಶ್ವಕಪ್‌ನಲ್ಲಿ ಸಚಿನ್ ಆಟವನ್ನ ಯಾವತ್ತೂ ಮರೆಯೋಕೆ ಆಗೊಲ್ಲ. ಪ್ರತಿ ಇನಿಂಗ್ಸ್‌ ಕೂಡ ಕಣ್ಣಿಗೆ ಕಟ್ಟುವಂತಿದೆ. 1992ರ ವಿಶ್ವಕಪ್‌ನಲ್ಲೇ ಗಮನ ಸೆಳೆದ ಮುಂಬೈಕರ್‌, 1996ರ ವಿಶ್ವಕಪ್‌ ಅನ್ನು ಪೂರ್ತಿಯಾಗಿ ಕೈವಶ ಮಾಡ್ಕೊಂಡ್ರು. ಆದ್ರೂ ಪ್ರಶಸ್ತಿ ಹಂತ ತಲುಪಲು ಸಾಧ್ಯವಾಗಲಿಲ್ಲ. ಹಾಗೇ 1999ರ ವಿಶ್ವಕಪ್‌... ತೆಂಡುಲ್ಕರ್‌ ಅವ್ರ ದೇಶ ಪ್ರೇಮಕ್ಕೆ ಸಾಕ್ಷಿಯಾದ ಟೂರ್ನಿ. ತಂದೆಯ ಸಾವಿನ ನೋವಿನಲ್ಲೂ ತಂಡವನ್ನ ಸೇರ್ಕೊಂಡ್ರು. ಅಲ್ಲದೆ ಶತಕದ ಸಿಂಚನದೊಂದಿಗೆ ಆಕಾಶವನ್ನ ಒಂದು ಕ್ಷಣ ದಿಟ್ಟಿಸಿ ತಂದೆಗೆ ಅರ್ಪಣೆ ಮಾಡಿದ ಕ್ಷಣವನ್ನ ಎಂದಾದ್ರೂ ಮರೆಯುವುದುಂಟೆ...
ಇನ್ನು, 2003ರ ವಿಶ್ವಕಪ್‌.. ನೋವಿನಲ್ಲೂ ತಂಡಕ್ಕಾಗಿ ಆಡಿದ ವೀರ ಸೇನಾನಿ . ಆದ್ರೆ ಫೈನಲ್‌ ಪಂದ್ಯದಲ್ಲಿ ಮಿಂಚಲು ವಿಫಲರಾದಾಗ ಭಾರತದ ಗೆಲುವಿನ ಕನಸುಕೂಡ ಭಗ್ನಗೊಂಡಿತ್ತು. ಪ್ರಶಸ್ತಿ ಗೆಲ್ಲುವ ಕನಸು ಕನಸಾಗಿಯೇ ಉಳಿಯಿತ್ತು. ಮತ್ತೊಂದೆಡೆ, 2007ರ ಕೆರೆಬಿಯನ್‌ ವಿಶ್ವಕಪ್‌ನ ಹೀನಾಯ ಸೋಲನ್ನ ಸಚಿನ್‌ ಇವತ್ತಿಗೂ ಮರೆತಿಲ್ಲ.
ಇದೀಗ ಎಲ್ಲಾ ಕಹಿ ನೆನಪುಗಳಿಗೆ ಉತ್ತರ ನೀಡಲು ಸಚಿನ್ ಸನ್ನದ್ಧರಾಗಿದ್ದಾರೆ. ವಿಶ್ವಕಪ್‌ ಗೆಲ್ಲಲೇಬೇಕು ಅಂತ ಮಾಸ್ಟರ್‌ , ಮಾಸ್ಟ ರ್‌ ಪ್ಲಾನ್‌ ಹಾಕೊಂಡಿದ್ದಾರೆ. ಹಾಗಂತ ಧೋನಿ ಬಾಯ್ಸ್‌ ಸಚಿನ್‌ ಆಸೆಯನ್ನ ಈಡೇರಿಸುತ್ತಾರಾ... ವಿಶ್ವಕಪ್‌ ಟ್ರೋಫಿಗೂ ಸಚಿನ್‌ ಅವ್ರ ಮುತ್ತಿನ ಸಿಹಿಮಳೆಯಾಗುತ್ತಾ... ಯಾವುದಕ್ಕೂ ಕಾಲವೇ ಉತ್ತರನೀಡಲಿದೆ.
ಅಂದ ಹಾಗೇ, ಇದು, ಸುಮಾರು 32 ವರ್ಷಗಳ ಹಿಂದಿನ ಸತ್ಯ ಕಥೆ. .. ಬ್ಯಾಟ್‌ಗಿಂತ ಸ್ವಲ್ಪ ಉದ್ದಗಿದ್ದ ಪೋರ ಸಚಿನ್‌, ಶಿವಾಜಿ ಪಾರ್ಕ್‌ ಅಂಗಣದಲ್ಲಿ ಕ್ರಿಕೆಟ್‌ ಅಭ್ಯಾಸ ಮಾಡುತ್ತಿದ್ರು.. ಗುರು ರಮಕಾಂತ್‌ ಅಚ್ರೇಕರ್‌ ಹೇಳಿಕೊಡುವ ಒಂದೊಂದು ಟಿಪ್ಸ್‌‌ ಗಳಿಂದ ಪ್ರೇರಿತನಾದ ಸಚಿನ್‌ ಬದುಕಿನ ಬಗ್ಗೆ ಸುಂದರ ಕನಸುಗಳನ್ನ ಕಾಣತೊಡಗಿದ್ರು. ಅದನ್ನು ನನಸಾಗಿಸಲು ಬಾಲಕ ಸಚಿನ್‌ ಹಲವು ಸವಾಲುಗಳನ್ನ ಎದುರಿಸಬೇಕಾಯ್ತು. ಒಂದೊಂದು ಸವಾಲುಗಳನ್ನ ದಾಟಿ ಬರುವಾಗ ಸಾಕಷ್ಟು ನಿರಾಸೆ ಅನುಭವಿಸಿದ್ರೂ ಛಲ ಮತ್ತು ಹಠವನ್ನ ಬಿಡಲಿಲ್ಲ.
ಗುರುವಿನ ಪಾಠದ ಬಳಿಕ, ಸಚಿನ್ ನದ್ದು ಏಕಲವ್ಯನ ರೀತಿಯ ಅಭ್ಯಾಸ. ರಾತ್ರಿಯಾದ ಮೇಲೆ ಮನೆ ಸೇರಬೇಕಾದ್ರೆ ಎರಡೆರಡು ಬಸ್‌ಗಳಲ್ಲಿ ಸಂಚಾರ ಮಾಡಬೇಕಾಗಿತ್ತು. ಇನ್ನು, ಮುಂಬೈನ ಬೆಸ್ಟ್‌ ಬಸ್‌ನಲ್ಲಿ ಸಂಚಾರ ಮಾಡುವುದೆಂದರೆ ಅದು ತಮಾಷೆಯ ಸಂಗತಿಯಲ್ಲ. ತನಗಿಂತ ದೊಡ್ಡದಾಗಿದ್ದ ಕ್ರಿಕೆಟ್‌ ಕಿಟ್‌ ಅನ್ನ ಹೊತ್ಕೊಂಡು, ನೂಕು ನುಗ್ಗಲುಗಳನ್ನ ತಪ್ಪಿಸಿಕೊಳ್ಳಲು ಸಚಿನ್‌ ಬೆಸ್ಟ್‌ ಬಸ್‌ನ ಡ್ರೈವರ್‌ಗಳನ್ನ ದೊಸ್ತ್‌ ಮಾಡ್ಕೊಂಡಿದ್ರು..
ಆದ್ರೆ ಇವೆಲ್ಲಾ ಹೆಚ್ಚು ದಿನ ಇರಲಿಲ್ಲ. ಮನೆ, ಪಾಠಕ್ಕಿಂತ ಸಚಿನ್ ಹೆಚ್ಚು ಕ್ರಿಕೆಟ್‌ನತ್ತ ಆಸಕ್ತಿ ಹೊಂದಿರುವುದರಿಂದ ಅಣ್ಣ ಅಜಿತ್‌ ತೆಂಡುಲ್ಕರ್‌ ಸಚಿನ್‌ಗೆ ಸ್ಪೂರ್ತಿಯ ಚಿಲುಮೆಯಾದ್ರು. ಇದ್ರಿಂದ ಸಚಿನ್‌ ಕ್ರಿಕೆಟ್‌ ಅಭ್ಯಾಸಕ್ಕಾಗಿಯೇ ಶಿವಾಜಿ ಪಾರ್ಕ್‌ ಬಳಿ ಇರುವ ತಮ್ಮ ಚಿಕ್ಕಮ್ಮನ ಮನೆಯನ್ನ ಆಯ್ಕೆ ಮಾಡ್ಕೊಂಡ್ರು. ಅಭ್ಯಾಸ ಮಾಡಿ ಸುಸ್ತಾಗಿದ್ದ ಸಚಿನ್ ಒಂದೊಂದು ದಿನ ಊಟವನ್ನೂ ಬಿಟ್ಟು ಮಲಗ್ತಾ ಇದ್ರು. ಕೆಲವೊಂದು ಸಲ ಕ್ರಿಕೆಟ್‌ ಆಟದ ಬಗ್ಗೆನೇ ರಾತ್ರಿ ಇಡೀ ಯೋಚನೆ ಮಾಡ್ತಾ ಇದ್ರು.
ನಂತ್ರ ನಡೆದದ್ದು ಈಗ ಇತಿಹಾಸ.. ಸಿಂಹಾವಲೋಕನ ಮಾಡಿದಾಗ ಅಬ್ಬಾ ಅನ್ಸುತ್ತೆ.. ರಣಜಿ ಟ್ರೋಫಿ ದುಲೀಪ್‌ ಟ್ರೋಫಿ, ಇರಾನಿ ಟ್ರೋಫಿಯಲ್ಲಿ ಶತಕ ಸಿಡಿಸಿದ ಬಾಲಕ ಸಚಿನ್‌ ತನ್ನ 16ರ ಹರೆಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರಣಕಹಳೆ ಊದಿದ್ರು. ಅಲ್ಲಿಂದ ಶುರುವಾಯ್ತು ಸಚಿನ್ ತೆಂಡುಲ್ಕರ್‌ ಅವ್ರ ದರ್ಬಾರು..
.ಕಳೆದ 22 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚಕ್ರವರ್ತಿಯಾಗಿ ಮೆರೆಯುತ್ತಿರುವ ತೆಂಡುಲ್ಕರ್‌ ಅವ್ರ ಸಾಧನೆ, ದಾಖಲೆಗಳ ಪ್ರತಿ ಹೆಜ್ಜೆಯೂ ಯುವ ಆಟಗಾರರಿಗೆ ದಾರಿದೀಪ. ಒಬ್ಬ ಸಾಮಾನ್ಯ ಬಾಲಕ ಅಸಾಮಾನ್ಯನಾಗಿ ಬೆಳೆದುಬಂದ ಪರಿಯನ್ನ ನೋಡಿದಾಗ ಒಂದು ಕ್ಷಣ ಅಚ್ಚರಿಯಾಗುತ್ತೆ. ಏನೇ ಅದ್ರೂ ಸಚಿನ್ ಯುಗಪುರುಷ.. .
ಸನತ್‌ ರೈ