Sunday, January 1, 2012

ಯಾರಿಗೆ ಭಾರತ ರತ್ನ

ಸಚಿನ್‌ ಮತ್ತು ಧ್ಯಾನ್‌ಚಾಂದ್‌ ... ಯಾರು ಶ್ರೇಷ್ಠರು ಅಂತ ಹೇಳುವುದರಲ್ಲಿ ಅರ್ಥವಿಲ್ಲ. ಕ್ರೀಡಾ ಜಗತ್ತಿನಲ್ಲಿ ಇಬ್ರೂ ಮಹಾನ್‌ ಸಾಧಕರು... ಮಾಡಿರುವ ಸಾಧನೆಗಳಿಗೆ ಬೆಲೆ ಕಟ್ಟಲಂತೂ ಸಾಧ್ಯನೇ ಇಲ್ಲ. ಆದ್ರೂ ಇಬ್ರೂ ಈಗ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ಕ್ರೀಡಾ ಸಾಧಕರ ಲೀಸ್ಟ್‌ ನಲ್ಲಿ ಭಾರತ ರತ್ನ ಪ್ರಶಸ್ತಿ ನೀಡುವುದಾದ್ರೆ ಯಾರಿಗೆ ಮೊದಲು ನೀಡಬೇಕು ಅನ್ನೋದು ದೊಡ್ಡ ಗೊಂದಲಕ್ಕೆ ಕಾರಣವಾಗುತ್ತಿದೆ.


ಹೌದು, ಧ್ಯಾನ್‌ ಚಾಂದ್‌ ಆಟವನ್ನ ನೋಡುವುದೇ ಚಂದ...ಅಂಗಣದಲ್ಲಿ ಮ್ಯಾಜಿಕ್‌ ಮಾಡುತ್ತಿದ್ದ ಧ್ಯಾನ್‌ಚಾಂದ್‌ ಎದುರಾಳಿ ಆಟಗಾರರನ್ನೇ ಬೆರಗುಗೊಳಿಸುತ್ತಿದ್ರು. ಅಂತಹ ಮಾಂತ್ರಿಕ ಶಕ್ತಿ ಧ್ಯಾನ್‌ ಚಾಂದ್‌ಗಿತ್ತು... ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ ಮನ್‌ ರನ್‌ ದಾಖಲಿಸುವ ಹಾಗೇ ಧ್ಯಾನ್‌ ಚಾಂದ್‌ ಹಾಕಿಯಲ್ಲಿ ಸಲೀಸಾಗಿ ಗೋಲು ದಾಖಲಿಸುತ್ತಿದ್ರು. flow…
ಇನ್ನು, ಸಚಿನ್‌ ತೆಂಡುಲ್ಕರ್‌.. ಹೇಳಬೇಕಾದ ಅಗತ್ಯವೇ ಇಲ್ಲ.. ಎಲ್ರಿಗೂ ಗೊತ್ತಿರುವ ಚಿರಪರಿಚಿತ ಹೆಸರು.. ಸೂಜಿಗಲ್ಲಿನಂತೆ ಆಕರ್ಷಿಸುವ ಸಚಿನ್ ಬ್ಯಾಟಿಂಗ್‌ ವಿಶ್ವ ಕ್ರಿಕೆಟನ್ನ ಚಕಿತಗೊಳಿಸಿದೆ. ಸುಮಾರು 23 ವರ್ಷಗಳಿಂದ ಕ್ರಿಕೆಟ್‌ ಜಗತ್ತನ್ನ ಆಳುತ್ತಿರುವ ತೆಂಡುಲ್ಕರ್‌ ಯುವ ಆಟಗಾರರಿಗೆ ಸ್ಪೂರ್ತಿಯ ಚಿಲುಮೆ... ಜಂಟಲ್‌ ಮ್ಯಾನ್‌ ಗೇಮ್‌ನ ಜಂಟಲ್‌ಮ್ಯಾನ್‌ ಆಟಗಾರನೂ ಹೌದು.

ನಿಜ, ಸಚಿನ್‌ ಸಾಧನೆಗೆ ಬಹುತೇಕ ಪ್ರಶಸ್ತಿಗಳು ಅವ್ರ ಹೆಸರಿನಲ್ಲಿ ಅಂಟಿಕೊಂಡಿವೆ. ಆದ್ರೆ ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿ ಭಾರತ ರತ್ನ ಗರಿ ಮಾತ್ರ ಇನ್ನೂ ಸೇರಿಕೊಂಡಿಲ್ಲ. ಇದಕ್ಕಾಗಿ ಕೆಲವೊಂದು ಅಡಚಣೆಗಳಿದ್ದವು. ಅದು ಈಗ ನಿವಾರಣೆಯಾಗಿದೆ. ಅಲ್ಲದೆ, ಸಚಿನ್‌ಗೆ ಭಾರತ ರತ್ನ ಪ್ರಶಸ್ತಿ ನೀಡಲೇಬೇಕು ಅನ್ನೊ ಕೂಗು ಜೋರಾಗಿ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿಯ ನೀತಿ ನಿಯಮಗಳನ್ನ ಬದಲಾವಣೆ ಮಾಡಲು ಸಮ್ಮತಿ ಕೂಡ ನೀಡಿದೆ.

ಇದ್ರ ಬೆನ್ನಲ್ಲೇ ಸಚಿನ್‌ ಗೆ ಭಾರತ ರತ್ನ ಪ್ರಶಸ್ತಿ ಇಷ್ಟು ಬೇಗ ನೀಡಬಾರದು ಅಂತ ಅಪಸ್ವರದ ಮಾತುಗಳು ಕೇಳಿಬರ್ತಿವೆ. ಸಚಿನ್‌ಗಿಂತ ಮೊದಲು ಧ್ಯಾನ್‌ ಚಾಂದ್‌ಗೆ ಭಾರತ ರತ್ನ ನೀಡಬೇಕು.. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತ್ರದ ದಿನಗಳಲ್ಲಿ ಧ್ಯಾನ್‌ ಚಾಂದ್‌‌ ಹಾಕಿ ಕ್ರೀಡೆಯಲ್ಲಿ ಭಾರತಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್‌ ಪ್ರತಿಭೆ ಇಂದು ನಮ್ಮ ಜತೆ ಇಲ್ಲದಿದ್ರೂ ಅವ್ರ ಆಟದ ನೆನಪು, ಮಾಡಿರುವ ಸಾಧನೆಗಳನ್ನ ಇತಿಹಾಸ ಪುಟಗಳು ಸಾರಿ ಸಾರಿ ಹೇಳ್ತಾವೆ.
ಹಾಗಂತ ಸಚಿನ್‌ಗಿಂತ ಧ್ಯಾನ್‌ಚಾಂದ್‌ ಶ್ರೇಷ್ಠ,.. ಧ್ಯಾನ್‌ಚಾಂದ್‌ಗಿಂತ ಸಚಿನ್‌ ಶ್ರೇಷ್ಠ ಅನ್ನೋದು ಚರ್ಚೆಯ ವಿಷ್ಯವಲ್ಲ. ಸಚಿನ್‌ಗೆ ಇನ್ನೂ 38ರ ಹರೆಯ... ಕ್ರಿಕೆಟ್‌ನಲ್ಲಿ ಸಚಿನ್‌ ಸಾಧಿಸಲು ಇನ್ನೂ ಬೇಕಾದಷ್ಟಿದೆ. ಈ ನಿಟ್ಟಿನಲ್ಲಿ ಧ್ಯಾನ್‌ಚಾಂದ್‌ ನಂತ್ರ ಸಚಿನ್‌ಗೆ ಭಾರತ ರತ್ನ ಪ್ರಶಸ್ತಿ ನೀಡಬಹುದು ಎಂಬುದು ಕೆಲವು ಕ್ರೀಡಾಭಿಮಾನಿಗಳ ವಾದ.. ಆದ್ರೂ ಮತ್ತೆ ಕೆಲವರು ಸಚಿನ್‌ಗೆ ಭಾರತ ರತ್ನನೀಡಬೇಕು ಅನ್ನೋ ಮಾತನ್ನ ಹೇಳುತ್ತಾರೆ.

ಇನ್ನೊಂದೆಡೆ, ಭಾರತದಲ್ಲಿ ಸಚಿನ್‌ಗೆ ಇರುವಷ್ಟು ನೇಮ್‌ - ಫೇಮ್‌ ಧ್ಯಾನ್‌ಚಾಂದ್‌ಗೆ ಖಂಡಿತಾ ಇಲ್ಲ.. ಇದು ನಮ್ಮ ದುರಂತವೋ ಏನೋ.. ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ... ಎಂಟು ಬಾರಿ ಒಲಿಂಪಿಕ್‌ ಗೆದ್ದಿರುವ ಹೆಗ್ಗಳಿಕೆ.. ವಿಪರ್ಯಾಸ ಅಂದ್ರೆ ಇಂತಹ ಕ್ರೀಡೆ ಭಾರತದಲ್ಲಿ ಇಂದು ನಶಿಸಿ ಹೋಗ್ತಾ ಇದೆ. ಕಿಂಗ್ ಆಗಿದ್ದ ಭಾರತೀಯ ಹಾಕಿ ಇದೀಗ ಒಲಿಂಪಿಕ್ಸ್‌ ನಲ್ಲಿ ಅರ್ಹತೆ ಪಡೆಯಲು ಪರದಾಡುತ್ತಿದೆ.

ಅಂದ ಹಾಗೇ, ಧ್ಯಾನ್‌ಚಾಂದ್‌ ನಮಗೆಲ್ಲಾ ನೆನಪಾಗೊದು ಆಗಸ್ಟ್‌ 29 ರಂದು ಮಾತ್ರ. ಯಾಕಂದ್ರೆ ಅವತ್ತು ಧ್ಯಾನ್ ಚಾಂದ್‌ ಅವ್ರ ಹುಟ್ಟುಹಬ್ಬ.. ಆ ದಿನವನ್ನ ರಾಷ್ಟ್ರೀಯ ಕ್ರೀಡಾ ದಿನ ಅಂತ ಭಾರತದಲ್ಲಿ ಆಚರಿಸಲಾಗುತ್ತೆ.. ಆದ್ರೆ ಹೆಚ್ಚಿನವರಿಗೆ ಧ್ಯಾನ್‌ಚಾಂದ್‌ ಯಾರು ಅಂತಲೇ ಗೊತ್ತಿಲ್ಲ.. ಕೇವಲ ಹಾಕಿ ಆಡುವವರಿಗೆ ಮಾತ್ರ ಧ್ಯಾನ್‌ಚಾಂದ್‌ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ಇದೆ. ಇದಕ್ಕಾಗಿ ನಾವು ಇಲ್ಲಿ ಯಾರನ್ನ ದೂಷಣೆ ಮಾಡುವಂತಿಲ್ಲ..ಯಾಕಂದ್ರೆ ನಮ್ಮ ವ್ಯವಸ್ಥೆಯೇ ಅಂತಹ ಮಟ್ಟದಲ್ಲಿದೆ. ಆದ್ರೂ ಒಂದು ದಿನವಾದ್ರೂ ಭಾರತೀಯ ಹಾಕಿ ದೇವ್ರನ್ನ ನೆನಪಿಸಿಕೊಳ್ಳುತ್ತೇವೆ ಅನ್ನೋದಷ್ಟೇ ಸಮಾಧಾನ..

ಆದ್ರೆ ಕ್ರಿಕೆಟ್‌ ದೇವ್ರು ಹಾಗಲ್ಲ.. ಪ್ರತಿಯೊಬ್ಬರಿಗೂ ಗೊತ್ತು... ಯಾಕಂದ್ರೆ ಸಚಿನ್‌ ಮಾಡಿರುವ ಮೋಡಿಯೇ ಅಂತಹುದ್ದು. ಜತೆಗೆ ಸಚಿನ್‌ ಸಾಧನೆಗೆ ಕಮರ್ಷಿಯಲ್‌ ಟಚ್‌ ಕೂಡ ಸಿಕ್ತ್‌.. ಗ್ಲಾಮರ್‌ - ಸೆಲೆಬ್ರಿಟಿ, ಕಮರ್ಷಿಯಲ್‌, ಹೀಗೆ ಎಲ್ಲವೂ ಸಚಿನ್ ಆಟಕ್ಕೆ ಮೆರಗನ್ನ ನೀಡಿತ್ತು. ಆದ್ರೆ ಧ್ಯಾನ್‌ಚಾಂದ್‌ ಈ ಎಲ್ಲ ಅವಕಾಶಗಳಿಂದಲೂ ಮರಿಚೀಕೆಯಾಗಿಬಿಟ್ರು...

ಒಟ್ಟಿನಲ್ಲಿ ಭಾರತ ರತ್ನ ಯಾರಿಗೆ ನೀಡಬೇಕು ಅನ್ನೋದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಸಚಿನ್‌ಗೆ ಮೊದಲು ನೀಡಿದ್ರೆ, ಧ್ಯಾನ್‌ಚಾಂದ್‌ಗೆ ಅವಮಾನ ಮಾಡಿದಂತಾಗುತ್ತೆ.. ಅದೇ ಧ್ಯಾನ್‌ಚಾಂದ್‌ಗೆ ನೀಡಿದ್ರೆ ಸಚಿನ್‌ ಅಭಿಮಾನಿಗಳಿಗೆ ಬೇಸರವಾಗುತ್ತೆ. ಇದ್ರಿಂದ ಪ್ರಶಸ್ತಿಗೆ ಆಯ್ಕೆಮಾಡುವಾಗ ಕೇಂದ್ರ ಸರ್ಕಾರ ಕೂಡ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗುತ್ತೆ.
ಅದೇನೇ ಇರಲಿ...ಧ್ಯಾನ್‌ಚಾಂದ್‌ ಮತ್ತು ಸಚಿನ್ ತೆಂಡುಲ್ಕರ್‌ ಭಾರತೀಯ ಕ್ರೀಡಾಲೋಕದ ಅನರ್ಘ್ಯ ರತ್ನಗಳು... ಕ್ರೀಡಾ ಜಗತ್ತಿನಲ್ಲಿ ಇವರಿಬ್ರು ಎಲ್ಲವನ್ನೂ ಪ್ರೂವ್‌ ಮಾಡಿದ್ದಾರೆ... ಇನ್ನೂ ಯಾರಿಗೂ ಪ್ರೂವ್‌ ಮಾಡುವಂತಹ ಅಗತ್ಯವೂ ಇಲ್ಲ...ಭಾರತ ರತ್ನ ಪ್ರಶಸ್ತಿ ಇವ್ರ ಸಾಧನೆಗೆ ಹೆಮ್ಮೆ ಗೌರವ ಮೂಡಿಸುತ್ತೆ..
ಸನತ್ ರೈ

ಸಾಕಾರಗೊಂಡ ಕನಸು... 2011..

ಇದು ಚಂದಮಾಮ ಕಥೆಯಲ್ಲ. ಬದುಕಿನಲ್ಲಿ ಅಂದುಕೊಂಡಿರುವುದನ್ನ ಸಾಧಿಸಿದವನ ಕಥೆ.
ಎಲ್ಲಾ ಸಾಧನೆಗಳನ್ನ ಒಂದು ಕ್ಷಣ ನೆನಪಿಸಿಕೊಂಡಾಗ ಅಬ್ಬಾ ಅನ್ಸುತ್ತೆ... ಆದ್ರೂ ಸಮಾಧಾನವಿಲ್ಲ. ತೃಪ್ತಿನೂ ಇಲ್ಲ. ಯಾಕಂದ್ರೆ ಇನ್ನೂ ಸಾಧಿಸಬೇಕು ಅನ್ನೋ ದಾಹ. ಜತೆಗೆ ತಾನು ಏನೋ ಮಿಸ್ ಮಾಡ್ಕೊಂಡಿದ್ದೇನೆ ಅನ್ನೋ ವೇದನೆ...ಹೀಗೆ ಬಹು ದಿನಗಳಿಂದ ಯೋಚನಾ ಲಯರಿಯಲ್ಲಿ ಮುಳುಗಿದ್ದ ಮಹಾನ್‌ ಸಾಧಕ
ಸಚಿನ್ ರಮೇಶ್‌ ತೆಂಡುಲ್ಕರ್‌.
ಕಳೆದ 22 ವರ್ಷಗಳಿಂದ ವಿಶ್ವ ಕ್ರಿಕೆಟ್‌ನಲ್ಲಿ ಸಾಮ್ರಾಟನಾಗಿ ಮೆರೆಯುತ್ತಿರುವ ಈ ವಾಮನ ಮೂರ್ತಿಯ ಕಿರೀಟದಲ್ಲಿ ವಿಶ್ವಕಪ್‌ ಗರಿಯೊಂದು ಇರಲಿಲ್ಲ. ಐದು ಬಾರಿ ವಿಶ್ವಕಪ್‌ ಅಶ್ವಮೇಧದಲ್ಲಿ ಹೋರಾಟ ನಡೆಸಿದ್ರೂ ಪ್ರತಿಫಲ ಮಾತ್ರ ಸಿಗಲಿಲ್ಲ. ಅದ್ರಲ್ಲೂ ಮೂರು ಬಾರಿ ವಿಶ್ವಕಪ್‌ ಹೋರಾಟವಂತೂ ಬಲು ದೂರದ ಬಾ ನೀಲಿಯ ಚೆಲುವೆಯಾಗಿ ಮರೆಯಾಗಿಬಿಟ್ಟಿತ್ತು. ಇನ್ನೂ ಎರಡು ಬಾರಿಯಂತೂ ಮಿನುಗುವ ವಿಶ್ವಕಪ್‌ ಟ್ರೋಫಿ ಕಣ್ಣಂಚಿನಲ್ಲೇ ಹೊಳೆದು ಮಾಯವಾಗಿತ್ತು.
ಆದ್ರೂ ಸಚಿನ್‌ ಧೃತಿಗೆಡಲಿಲ್ಲ. ವಿಶ್ವಕಪ್‌ ಮರೀಚಿಕೆಯೂ ಅಲ್ಲ.. ಗಗನ ಕುಸುಮವೂ ಅಲ್ಲ. ಗೆಲ್ಲಬೇಕು ಅಷ್ಟೆ.. 2011ರಲ್ಲಿ ತನ್ನ ವರ್ಣ ರಂಜಿತ ಕ್ರಿಕೆಟ್‌ ಬದುಕನ್ನ ಅರ್ಥಪೂರ್ಣವಾಗಿಸಿಕೊಳ್ಳಬೇಕು. ಒಂದು ವೇಳೆ ಈ ಅವಕಾಶವನ್ನ ಕೈಚೆಲ್ಲಿಕೊಂಡ್ರೆ ತನ್ನ ಸಾಧನೆ, ದಾಖಲೆ, ಯಶಸ್ಸಿಗೆ ಅರ್ಥನೇ ಇರೋಲ್ಲ ಅಂತ ಸಚಿನ್‌ ಕೂಡ ಭಾವಿಸಿದ್ರು. ಏನೇ ಆದ್ರೂ 2011ರ ವಿಶ್ವಕಪ್‌ ಗೆಲ್ಲೋದು ತೆಂಡುಲ್ಕರ್‌ ಅವ್ರ ಸಿಂಗಲ್‌ ಲೈನ್‌ ಅಜೆಂಡವಾಗಿತ್ತು.
ಹಾಗಂತ ವಿಶ್ವಕಪ್‌ ಗೆಲ್ಲುವುದು ಟೀಮ್ ಇಂಡಿಯಾಗೆ ಸುಲಭವೇನೂ ಇರಲಿಲ್ಲ. ಟೂರ್ನಿಯಲ್ಲಿ ಫೆವರೀಟ್‌ ಆಗಿದ್ರೂ ಕ್ರಿಕೆಟ್‌ ಆಟದಲ್ಲಿ ಏನೂ ಬೇಕಾದ್ರೂ ಆಗಬಹುದು. ಇದನ್ನೆಲ್ಲಾ ಅರಿತುಕೊಂಡಿರುವ ಮಾಸ್ಟರ್‌ ವಿಶ್ವಕಪ್‌ಗಾಗಿ ಮಾಸ್ಟರ್‌ ಪ್ಲಾನ್‌ ಮಾಡ್ಕೊಂಡಿದ್ರು. ಕಠಿಣ ಅಭ್ಯಾಸ ನಡೆಸಿದ್ರು. ವಿಶ್ರಾಂತಿ ಪಡೆದ್ರು. ದೈಹಿಕವಾಗಿ ಹಾಗೂ ಮಾನಸಿಕವಾಗಿಯೂ ರೆಡಿಯಾದ್ರು. ಆದ್ರೂ ಸಿಕ್ಕಾಪಟ್ಟೇ ಟೆನ್ಷನ್‌ ಇತ್ತು. ಯಾಕಂದ್ರೆ ಟೀಮ್‌ ಇಂಡಿಯಾ ವಿಶ್ವಕಪ್‌ ಗೆಲ್ಲಬೇಕು ಅನ್ನೋದು ದೇಶದ ಹೃದಯಬಡಿತವಾಗಿತ್ತು.
ಇನ್ನು, ಟೀಮ್ ಇಂಡಿಯಾದ ವಿಶ್ವಕಪ್‌ ಅಭಿಯಾನಕ್ಕೆ ಎಮ್‌. ಎಸ್‌. ಧೋನಿ ದಂಡನಾಯಕನಾದ್ರು. ತಂಡದ ಸಾರಥಿಯಾಗಿ, ಸೂತ್ರಧಾರಿಯಾದ ಸಚಿನ್ ಆರನೇ ವಿಶ್ವಕಪ್‌ ಅಶ್ವಮೇಧದಲ್ಲೂ ರನ್‌ ಮಳೆಯನ್ನೇ ಸುರಿಸಿದ್ರು. ಆದ್ರೆ ಫೈನಲ್‌ ಪಂದ್ಯದಲ್ಲಿ ಸಚಿನ್‌ ಬ್ಯಾಟ್‌ನಿಂದ ರನ್‌ಗಳು ಹರಿದು ಬರಲಿಲ್ಲ. ತವರು ಅಭಿಮಾನಿಗಳ ಎದುರು ನಿರಾಸೆಯಿಂದಲೇ ಪೆವಿಲಿಯನತ್ತ ಹೆಜ್ಜೆ ಹಾಕಿದ ಸಚಿನ್‌ ಮುಖದಲ್ಲಿ ಬೇಸರವಿತ್ತು. ಮತ್ತೆ ವಿಶ್ವಕಪ್‌ ಟ್ರೋಫಿ ಹೊಳೆಯುತ್ತಿರುವ ಗಿರಿವಜ್ರವಾಗುತ್ತಾ ಅನ್ನೋ ಭಾವನೆ ಮೂಡಿತ್ತು..
ಈ ನಡುವೆ, ಸಚಿನ್‌ ಆಸೆಯನ್ನು ಈಡೇರಿಸಲು ಧೋನಿ ಪಡೆಯ ಯುವಕರು ಟೊಂಕ ಕಟ್ಟಿನಿಂತಿದ್ರು. ಅದ್ರಲ್ಲೂ ಗಂಭೀರ್‌ ಮತ್ತು ಧೋನಿ ಕ್ರೀಸ್‌ಗೆ ಅಂಟಿಕೊಂಡು ಆಡ್ತಾ ಇದ್ರು. ಜತೆಗೆ ತಂಡವನ್ನ ಗೆಲುವಿನತ್ತಲೂ ಕೊಂಡೊಯ್ದರು. ಆದ್ರೂ ಇವ್ರ ಆಟವನ್ನ ನೋಡುವ ಮನಸ್ಸು ಸಚಿನ್‌ಗಿರಲಿಲ್ಲ. ಅಷ್ಟೇ ಯಾಕೆ ಗೆಲುವಿನ ರನ್‌ಗಾಗಿ ಸಿಕ್ಸ್‌ ಬಾರಿಸಿದಾಗಲೇ ಧೋನಿ ಕಣ್ಣಲ್ಲಿ ವಿಶ್ವಕಪ್ ಟ್ರೋಫಿ ಮಿನುಗಿತ್ತು. ವಿಜಯದ ಬಳಿಕ ಧೋನಿ ಬ್ಯಾಟ್‌ ಅನ್ನು ಗದೆಯಂತೆ ತಿರುಗಿಸುತ್ತಿದ್ರೆ, ಕ್ರಿಕೆಟ್‌ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ರು. ಅಂಗಣದಲ್ಲಿ ಟೀಮ್ ಇಂಡಿಯಾ ಆಟಗಾರರು ಗೆಲುವಿನ ಸಂಭ್ರಮದಲ್ಲಿ ತೇಲಾಡುತ್ತಿದ್ರು.
ಆದ್ರೂ ಸಚಿನ್‌ಗೆ ಇದ್ರ ಪರಿವೇ ಇರಲಿಲ್ಲ. ಯಾಕಂದ್ರೆ ಸಚಿನ್ ಡ್ರೆಸಿಂಗ್‌ ರೂಮ್‌ನ ಮೂಲೆಯೊಂದರಲ್ಲಿ ಧ್ಯಾನಕ್ಕೆ ಕುಳಿತಿದ್ರು. ನಂತ್ರ ಎಚ್ಚೆತ್ತುಕೊಂಡ ಮಾಸ್ಟರ್‌, ಪುಟ್ಟ ಮಗುವಿನಂತೆ ಓಡೋಡಿ ಅಂಗಣಕ್ಕೆ ಬಂದ್ರು. ತನ್ನ ಒಡನಾಡಿಗಳನ್ನ ಬಿಗಿದಪ್ಪಿಕೊಂಡ ಮಾಸ್ಟರ್‌ನ ಕಣ್ಣಲ್ಲಿ ಆನಂದಬಾಸ್ಪ ಸುರಿಯುತ್ತಿತ್ತು. ಹಿರಿಯಣ್ಣನನ್ನು ಹೆಗಲ ಮೇಲೆ ಕೂರಿಸಿಕೊಂಡು ಸಂಭ್ರಮಿಸಿದ ಟೀಮ್ ಇಂಡಿಯಾ ಹುಡುಗರ ಆ ಸಂತಸದ ಕ್ಷಣವನ್ನ ಬಣ್ಣಿಸಲು ಸಾಧ್ಯವಿಲ್ಲ.
ವಿಶ್ವಕಪ್‌ ಟ್ರೋಫಿಗೆ ಮನಬಂದಂತೆ ಚುಂಬಿಸಿದ ತೆಂಡುಲ್ಕರ್‌ ತನ್ನ ಕನಸನ್ನ ಸಾಕಾರಗೊಳಿಸಿಕೊಂಡ್ರು. ಹಾಗೇ ಕನಸಿನ ಮನೆಯ ಗೃಹ ಪ್ರವೇಶವನ್ನ ಈ ವರ್ಷವೇ ಮಾಡ್ಕೊಂಡ್ರು. ಮತ್ತೊಂದೆಡೆ ಐಪಿಎಲ್‌ನಲ್ಲಿ ನಿರಾಸೆ ಅನುಭವಿಸಿದ್ರೂ ಚಾಂಪಿಯನ್ಸ್‌ ಲೀಗ್‌ ಟಿ -ಟ್ವೆಂಟಿಯಲ್ಲಿ ಸಂಭ್ರಮಿಸಿದ್ರು. ಟೂರ್ನಿಯಲ್ಲಿ ಆಡದಿದ್ರೂ ಮುಂಬೈ ಇಂಡಿಯನ್ಸ್‌ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ರು.
ಆದ್ರೆ ವಿಶ್ವಕಪ್‌ ನಂತ್ರ ಸಚಿನ್‌ ಶತಕ ದಾಖಲಿಸಲು ಒದ್ದಾಟ ನಡೆಸ್ತಾ ಇದ್ದಾರೆ. ಉತ್ತಮ ಫಾರ್ಮ್‌ನಲ್ಲಿದ್ರೂ ಶತಕದ ಸನೀಹದಲ್ಲಿ ಜಾರಿಬೀಳ್ತಾ ಇದ್ದಾರೆ. ಐತಿಹಾಸಿಕ ನೂರನೇ ಶತಕ ದಾಖಲಿಸುವ ಕ್ಷಣವನ್ನ ಅಭಿಮಾನಿಗಳು ಕಳೆದ ಎಂಟು ತಿಂಗಳಿನಿಂದ ಎದುರು ನೋಡ್ತಾ ಇದ್ದಾರೆ. ಇದೀಗ ವರ್ಷಾಂತ್ಯದಲ್ಲಿ ಮತ್ತೊಂದು ಅವಕಾಶ ಸಿಕ್ಕಿದೆ. ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್‌ ಡೇ ಟೆಸ್ಟ್‌ ನಲ್ಲಿ ಮಹಾ ಶತಕ ಸಿಡಿಸಿದ್ರೆ ಅದಕ್ಕಿಂತ ಮಿಗಿಲಾದ ಸಾಧನೆ ಮತ್ತೊಂದಿಲ್ಲ.
ಒಟ್ಟಿನಲ್ಲಿ ಸಚಿನ್‌ಗೆ ಸರಿಸಾಟಿ ಯಾರು ಇಲ್ಲ. ಆದ್ರೂ ಸಚಿನ್‌ ಕೇವಲ ಪಾತ್ರಧಾರಿಯಷ್ಟೇ. ಅಣ್ಣ ಅಜಿತ್‌ ತೆಂಡುಲ್ಕರ್‌ ಈ ಕನಸುಗಾರನ ಸೂತ್ರಧಾರಿಯಾದ್ರು. ಗುರು ರಮಕಾಂತ್‌ ಆಚ್ರೇಕರ್‌ ಮಾರ್ಗದರ್ಶನದಿಂದ ತೆಂಡುಲ್ಕರ್‌ ಕ್ರಿಕೆಟ್‌ ಜಗತ್ತಿನ ಕಲಾವಿದರಾದ್ರು. ಅಪ್ಪ ರಮೇಶ್‌ ತೆಂಡುಲ್ಕರ್‌ ಲೇಖನಿಯಿಂದ ಬರೆದ ಅಕ್ಷರಮಾಲೆಗಳಂತೆ ಸಚಿನ್ ವಿಶ್ವ ಕ್ರಿಕೆಟ್‌ನಲ್ಲಿ ರನ್‌ಗಳ ಸುರಿಮಳೆಗೈದ್ರು. ಅಮ್ಮನ ಪ್ರೀತಿ ದೇಶ ಪ್ರೇಮಕ್ಕೆ ಸ್ಪೂರ್ತಿಯಾಯ್ತು. ಪತ್ನಿ ಅಂಜಲಿ ಯಶಸ್ಸಿಗೆ ಪ್ರೇರಣೆಯಾದ್ರು. ಇನ್ನು ಕೋಟಿ ಕೋಟಿ ಅಭಿಮಾನಿಗಳ ಅಭಿಮಾನದಿಂದ ವಿಶ್ವಕ್ರಿಕೆಟ್‌ನ ದೇವ್ರುರಾದ್ರು.
ಸನತ್ ರೈ