Wednesday, September 12, 2012
ಯುವರಾಜನ ಆಗಮನ...ದಾರಿ ಬಿಡಿ....
ನಾನು ಮತ್ತೆ ಬಂದಿದ್ದೇನೆ... ಸಾವನ್ನೇ ಗೆದ್ದು ಬಂದಿದ್ದೇನೆ … ಟೀಮ್ ಇಂಡಿಯಾ ಕೈಬೀಸಿ ಕರೆದಿದೆ... ಚಾಂಪಿಯನ್ ಆಟಗಾರನ ರೀ ಎಂಟ್ರಿಯಾಗಿದೆ... .
ಹೀಗೆ ಹೇಳೋಕೊ ಧಮ್ ಇರಬೇಕು... ಆದ್ರೆ ಅದು ಎಲ್ರಿಗೂ ಸಾಧ್ಯವಿಲ್ಲ. ಅದಕ್ಕೆ ಎಂಟೆದೆ ಬೇಕು...ಅಂತಹ ಮಹಾ ಧೀರನೇ ನಮ್ಮ ಯುವರಾಜ್ ಸಿಂಗ್ .. ಅಸಾಧ್ಯ ಯಾವುದು ಅಂತ ಅಂದುಕೊಂಡಿದ್ರೂ ಅದನ್ನು ಸಾಧ್ಯ ಅಂತ ಸಾಬೀತುಪಡಿಸಿದ ಯುವರಾಜ...
ಹೌದು... ಯುವರಾಜ್ಸಿಂಗ್ ಮತ್ತೆ ಕ್ರಿಕೆಟ್ ಆಡ್ತಾರೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಅದ್ರಲ್ಲೂ ಟೀಮ್ ಇಂಡಿಯಾದೊಳಗೆ ರಿ ಎಂಟ್ರಿ ಪಡೆಯುತ್ತಾರೆ ಎಂಬುದೇ ದೊಡ್ಡ ಕನಸಾಗಿತ್ತು. ಆದ್ರೆ ಯುವಿ ಸುಲಭವಾಗಿಯೇ ಕನಸನ್ನು ನನಾಸಾಗಿಸಿದ್ರು. ಪ್ರತಿಷ್ಠಿತ ಟ್ವೆಂಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಈಗ ಸನ್ನದ್ಧರಾಗಿದ್ದಾರೆ.
ನಿಜ, ಯುವಿ ಸಾವನ್ನ ಗೆದ್ದು ಬಂದಿದ್ದಾರೆ. ಯುವಿಯ ಆತ್ಮಸ್ಥೈರ್ಯದ ಮುಂದೆ ಮಹಾ ಮಾರಿ ಕ್ಯಾನ್ಸರ್ ರೋಗವೇ ತಲ್ಲಣಗೊಂಡಿದೆ. ಸುಮಾರು ಎಂಟು-ಒಂಬತ್ತು ತಿಂಗಳ ಹಿಂದೆ ಯುವರಾಜನ ಬದುಕಿಗೆ ಕ್ಯಾನ್ಸರ್ ಅನ್ನೋ ದಟ್ಟವಾದ ಕಾರ್ಮುಗಿಲು ಆವರಿಸಿಕೊಂಡಿತ್ತು. ಆಗ ಯುವಿಯ ಬದುಕು ಇಷ್ಟೇ ಅಂತ ಎಲ್ರೂ ಅಂದುಕೊಂಡಿದ್ರು.
ಆದ್ರೆ ಯುವಿ ಮನಸ್ಸು ಮಾತ್ರ ಹಾಗಿರಲಿಲ್ಲ. ಬದುಕು ಇಷ್ಟೆ ಅಲ್ಲ.. ಇನ್ನೂ ಇದೆ.. ತಾನು ಸಾಧಿಸಲು ಇನ್ನಷ್ಟಿದೆ ಅಂತ ಅಂದುಕೊಂಡಿದ್ರು. ಅದಕ್ಕೆ ತಕ್ಕಂತೆ ಕತ್ತಲಿನಲ್ಲೇ ಯುವರಾಜ ಬೆಳಕಿನ ಹೊಂಗಿರಣವನ್ನು ಹುಡುಕಲು ಮುಂದಾದ್ರು. ಅಂದು ದೇಶಕ್ಕಾಗಿ ಹೋರಾಡಿದ ಯುವಿ ತನ್ನ ಉಸಿರಿನ ಆಟಕ್ಕಾಗಿ ಹೋರಾಡಿದ್ರು. ಸದಾ ನಗು ನಗುತ್ತಾ ಗೆಳೆಯರ ಜತೆ ಹರಟೆ ಹೊಡೆಯುತ್ತಿದ್ದ ಯುವಿ, ಸುಮಾರು ನಾಲ್ಕೈದು ತಿಂಗಳುಗಳ ಕಾಲ ಪಟ್ಟ ಯಾತನೆ ಅಷ್ಟಿಷ್ಟಲ್ಲ.
ತನ್ನವರನ್ನೆಲ್ಲಾ ಬಿಟ್ಟು ದೂರದ ಬೊಸ್ಟನ್ನಲ್ಲಿ ಯುವರಾಜ್ ಸಿಂಗ್ ಚಿಕಿತ್ಸೆ ಪಡೆಯುತ್ತಿದ್ದಾಗ ಯುವಿ ಮತ್ತೆ ರಾಜನಂತೆ ಬರ್ತಾರೆ ಅಂತ ಗ್ಯಾರಂಟಿ ಇರಲಿಲ್ಲ. ಯಾಕಂದ್ರೆ ಯುವಿ ಹೋರಾಟ ನಡೆಸುತ್ತಿದ್ದದ್ದು ಎದುರಾಳಿ ತಂಡವನ್ನಲ್ಲ. ಬದಲಾಗಿ ಸಾವನ್ನ ಹೊತ್ತು ನಿಂತಿರುವ ಕ್ಯಾನ್ಸರ್ ರೋಗದ ವಿರುದ್ಧ...
ಮೈದಾನದಲ್ಲಿ ತನ್ನ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನ ರಂಜಿಸಿದ್ರು. ಅಷ್ಟೇ ಅಲ್ಲ, ಅಭಿಮಾನಿಗಳ ಮನ ತಣಿಸಿ ತಾನು ಖುಷಿಪಟ್ರು. ಇನ್ನೂ ಬೌಲರ್ಗಳಿಗಂತೂ ಯುವಿ ದುಸ್ವಪ್ನವಾಗಿದ್ರು. ಆದ್ರೆ ವಿಧಿಯಾಟ ನೋಡಿ... ಹೊರ ಜಗತ್ತಿನ ಪರಿವೇ ಇಲ್ಲದೇ ಆಸ್ಪತ್ರೆಯ ಕೊಠಡಿಯಲ್ಲಿ ಯುವಿ ಕಿಮೊಥೆರಪಿ ಚಿಕಿತ್ಸೆಗೆ ಪಡೆಯುತ್ತಿದ್ದಾಗ ಅನುಭವಿಸಿದ ನೋವು...ವೇದನೆ...ದುಃಖ ದುಮ್ಮಾನ ಅಷ್ಟಿಷ್ಟಲ್ಲ.
ಆದ್ರೆ, ಈ ಎಲ್ಲಾ ಕಷ್ಟಗಳು ಯುವಿಯ ಆತ್ಮವಿಶ್ವಾದದ ಮುಂದೆ ಮಂಕಾದವು. ಕೋಟಿ ಕೋಟಿ ಅಭಿಮಾನಿಗಳ ಹಾರೈಕೆ, ಒಡನಾಡಿಗಳ ಪ್ರೇರಣೆ, ಅಪ್ಪನ ಕಲಿಸಿದ ಕಿಚ್ಚು, ಅಮ್ಮನ ಪ್ರೀತಿ, ಕ್ಯಾನ್ಸರ್ ರೋಗದಿಂದ ಮುಕ್ತನಾಗಿರುವ ಸ್ಲೈಕ್ಲಿಂಗ್ ಪಟು ಆರ್ಮ್ಸ್ಟ್ರಾಂಗ್ ಅವ್ರ ಸ್ಪೂರ್ತಿಯಿಂದ ಯುವರಾಜ್ ಸಿಂಗ್ ಬಲುಬೇಗನೇ ಚೇತರಿಸಿಕೊಂಡ್ರು. ಜತೆಗೆ ಫೇಸ್ ಬುಕ್ ಮತ್ತು ಟ್ವಿಟರ್ನಲ್ಲಿ ತನ್ನ ಆರೋಗ್ಯದ ಬಗ್ಗೆ ಪ್ರತಿ ದಿನ ಅಭಿಮಾನಿಗಳಿಗೆ ತಿಳಿಸುತ್ತ ತನ್ನ ನೋವು –ಬೇಸರಗಳನ್ನು ಮರೆ ಮಾಚುತ್ತಿದ್ರು.
ಕೊನೆಗೂ ಆಸ್ಪತ್ರೆ ಎಂಬ ಪಂಜರದಿಂದ ಯುವಿ ಹೊರಬಂದ್ರು. ಆಗ ಯುವಿಗೆ ಹೊಸ ಬದುಕು ಶುರುವಾದಂತೆ ಭಾಸವಾಯ್ತು. ತವರಿನ ಕದ ಗೊತ್ತಿಲ್ಲದ ಹಾಗೇ ತೆರೆದುಕೊಂಡಿತ್ತು. ಚಿಕ್ಕ ಮಗು ನೆಲದ ಮೇಲೆ ಹಜ್ಜೆ ಯನ್ನಿಂಟಂತೆ ಹುಟ್ಟಿ ಬೆಳೆದ ನೆಲವನ್ನ ಸ್ಪರ್ಶಿಸಿದ್ರು. ಅಭಿಮಾನಿಗಳ ಅಭಿಮಾನದ ಹಾರೈಕೆಗೆ ಕೃತಜ್ಞತೆ ಸಲ್ಲಿಸಿದ್ರು. ತಾನು ನಂಬಿಕೊಂಡಿದ್ದ ಗುರೂಜಿಯ ದರ್ಶನ ಪಡೆದ್ರು.
ಹೀಗೆ, ಯುವರಾಜ್ ಸಿಂಗ್ ಕ್ಯಾನ್ಸರ್ ರೋಗದಿಂದ ಮುಕ್ತಿ ಪಡೆದು ಹೊಸ ಇನಿಂಗ್ಸ್ ಅನ್ನು ಆರಂಭಿಸಿದ್ದಾರೆ. ಆದ್ರೆ ಯುವಿ ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನ ಕಂಡಿದ್ದಾರೆ. ಅದೇನೆ ಇರಲಿ... ಇವತ್ತು ಯುವರಾಜ್ ಸಿಂಗ್ ನಮ್ಮ ಎದುರು ನಗು ನಗುತ್ತಾ ಇದ್ದಾರೆ. ಗೆಳೆಯರೊಂದಿದೆ ಹರಟೆ ಹೊಡೆಯುತ್ತಿದ್ದಾರೆ. ಎದುರಾಳಿ ತಂಡವನ್ನ ಚಿಂದಿ ಉಡಾಯಿಸಲು ಸನ್ನದ್ಧರಾಗುತ್ತಿದ್ದಾರೆ. ಅಭಿಮಾನಿಗಳನ್ನ ರಂಜಿಸಲು ರೆಡಿಯಾಗುತ್ತಿದ್ದಾರೆ.
ಆದ್ರೆ ಯುವರಾಜ್ ಸಿಂಗ್ ಈ ರೀತಿ ನಮ್ಮ ಕಣ್ಣದೆರು ಓಡಾಡ್ಕೊಂಡು ಇರೋದಕ್ಕೆ ಒಬ್ರೂ ಕಾರಣೀಕರ್ತರಿದ್ದಾರೆ. ಹಾಗಾದ್ರೆ ಯಾರು ಅವ್ರು. ಯುವರಾಜನ ಹಿಂದಿರುವ ಶಕ್ತಿ ಯಾವುದು… ಯುವರಾಜನ ಬದುಕಿಗೆ ಅರ್ಥ ಕಲ್ಪಿಸಿದ ದೇವತೆ ಯಾರು... ಯುವಿ ಯಶಸ್ಸಿನ ಹಿಂದಿನ ರೂವಾರಿ ಯಾರು.. ಹುಂ, ಇದಕ್ಕೆಲ್ಲಾ ಒಂದೇ ಉತ್ತರ ಅಮ್ಮಾ..
ಹೌದು, ಯುವಿಯ ಪ್ರತಿ ಹೆಜ್ಜೆಯಲ್ಲೂ ಕೈಹಿಡಿದವರು ಅಮ್ಮ ಶಬ್ನಮ್ ಸಿಂಗ್.. ..ಇವತ್ತು ಯುವರಾಜ್ ಸಿಂಗ್ ಕೋಟಿ ಕೋಟಿ ಅಭಿಮಾನಿಗಳ ನೆಚ್ಚಿನ ಹೀರೋ ಆಗಲು ಕಾರಣ ಈ ತಾಯಿ.. ಗಂಡ ಯೋಗರಾಜ್ ಸಿಂಗ್ ದೂರವಾದ್ರೂ ಮಗನ ಭವಿಷ್ಯವನ್ನ ರೂಪಿಸಿದ ಮಹಾನ್ ತಾಯಿ. ಅಷ್ಟೇ ಅಲ್ಲ, ಯುವಿ ಪಾಲಿಗೆ ಶಬ್ನಮ್ ಅಮ್ಮನು ಹೌದು, ಅಪ್ಪನೂ ಹೌದು.. ಅಕ್ಕನೂ ಹೌದು... ಅಷ್ಟೇ ಯಾಕೆ ಆತ್ಮೀಯ ಗೆಳೆಯ ಗೆಳತಿಯೂ ಹೌದು..
ಅಂದ ಹಾಗೇ, ಯುವಿಗೆ ಅಪ್ಪನ ಪ್ರೀತಿ ಸಿಗಲಿಲ್ಲ. ಮಮಕಾರವಂತೂ ಇಲ್ಲವೇ ಇಲ್ಲ. ಇದ್ರಿಂದ ಶಬ್ನಮ್ ಅಪ್ಪನ ಸ್ಥಾನದಲ್ಲಿ ನಿಂತು ಮಗನನ್ನ ಬೆಳೆಸಿದ್ರು. ಕ್ರಿಕೆಟ್ ಬದುಕಿನಲ್ಲಿ ಯುವಿ ಹಿನ್ನಡೆ ಅನುಭವಿಸಿದಾಗ ಅಮ್ಮ ಶಬ್ನಮ್ ಪ್ರೇರಣೆ ನೀಡಿದ್ರು. ತಪ್ಪು ಮಾಡಿದಾಗ ತಿದ್ದಿ ಮುನ್ನಡೆಸಿದ್ರು. ತನ್ನ ಮಗ ಸೆಲೆಬ್ರಿಟಿಯಾಗಿರುವುದರಿಂದ ಗಾಸಿಪ್ಗಳು ಸಹಜ ಎಂಬುದನ್ನ ಅರ್ಥ ಮಾಡ್ಕೊಂಡಿದ್ರು. ಅಷ್ಟರ ಮಟ್ಟಿಗೆ ಯುವರಾಜ್ ಸಿಂಗ್ ಅಮ್ಮ ಶಬ್ನಮ್ ಸಿಂಗ್ ಗ್ರೇಟ್ ಮದರ್.
ಆದ್ರೆ ಯುವರಾಜ್ ಸಿಂಗ್ನಲ್ಲಿ ಆಕ್ರಮಣಕಾರಿ ಪ್ರವೃತ್ತಿಯನ್ನ ಮೈಗೂಡಿಸಿರುವುದು ಅಪ್ಪ ಯೋಗರಾಜ್ಸಿಂಗ್.. ತನಗೆ ಆಗಿರುವ ಅವಮಾನಕ್ಕೆ ಮಗನ ಮೂಲಕ ಪ್ರತಿಕಾರ ತೀರಿಸಿಕೊಳ್ಳಲು ಯೋಗರಾಜ್ ಸಿಂಗ್ ಪಣ ತೊಟ್ರು. ಅದಕ್ಕೆ ತಕ್ಕಂತೆ ಮಗನಿಗೆ ಪ್ರೀತಿಯ ಬದಲು ಸೇಡಿನ ಕಿಚ್ಚು ಹುಟ್ಟಿಕೊಳ್ಳುವಂತೆ ಮಾಡಿದ್ರು. ಭಾರತ ತಂಡದಲ್ಲಿ ತನಗೆ ಆಗಿರುವ ಅವಮಾನವನ್ನ ಪ್ರತಿ ದಿನ ಹೇಳ್ತಾ ಯುವಿ ಮನಸ್ಸನ್ನ ಕ್ರಿಕೆಟ್ ಮೇಲೆ ಹೆಚ್ಚು ಆಸಕ್ತಿ ಮೂಡುವಂತೆ ಮಾಡಿದ್ರು.
ಇನ್ನು, ಎಳವೆಯಲ್ಲಿ ವಿವಿಧ ವಯೋಮಿತಿಯ ಪಂದ್ಯಗಳು ಸೇರಿದಂತೆ ರಣಜಿ ಪಂದ್ಯದ ವೇಳೆಯಲ್ಲೂ ಮಗನ ಆಟವನ್ನ ನೋಡಲು ಯೋಗರಾಜ್ ಬರ್ತಿದ್ರು. ಆದ್ರೆ ಯುವಿಗೆ ಅಲ್ಲಿಯೂ ಅಪ್ಪನ ಪ್ರೀತಿಯ ಹಾರೈಕೆ ಇರಲಿಲ್ಲ. ಬರೀ ಬೈಗುಳ ಅಷ್ಟೇ... ಅಲ್ಪ ಮೊತ್ತಕ್ಕೆ ಔಟಾದ್ರೆ ರೌದ್ರನರ್ತನವೇ ನಡೀತಾ ಇತ್ತು. ಇದು ಯುವರಾಜನಲ್ಲಿ ಹೋರಾಟದ ಮನೋಭಾವನೆಯನ್ನ ಬೆಳೆಯುವಂತೆ ಮಾಡಿತ್ತು. ಅಷ್ಟೇ ಅಲ್ಲ, ಛಲ, ಹಠಮಾರಿತನ, ಆಕ್ರಮಣಕಾರಿ ಪ್ರವೃತ್ತಿಯಿಂದ ಮಾತಿಗೆ ಮಾತು, ಏಟಿಗೆ ಎದುರೇಟು ನೀಡುವ ಗುಣ ಬೆಳೆಯುವಂತೆ ಮಾಡಿತ್ತು.
ಇದೆಲ್ಲದ್ರ ನಡುವೆ, ಯುವಿ ದೇವರನ್ನ ತುಂಬಾನೇ ನಂಬುತ್ತಾರೆ. ಕ್ರಿಕೆಟ್ನ ಬಿಡುವಿನ ವೇಳೆಯಲ್ಲಿ ದೇವಸ್ಥಾನಕ್ಕೂ ಭೇಟಿ ನೀಡ್ತಾರೆ. ಅದ್ರಲ್ಲೂ ಯುವಿ ಧಾರ್ಮಿಕ ಗುರೂಜಿಯೊಬ್ಬರ ಮೇಲೆ ತುಂಬಾನೇ ನಂಬಿಕೆಯನ್ನಿಟ್ಟಿದ್ದಾರೆ. ಪಂಜಾಬ್ನ ಪಟೇಗರ್ ಶಾಹೀಬ್ ಜಿಲ್ಲೆಯ ಹನ್ಸೆಲಿ ಗ್ರಾಮದ ಧಾರ್ಮಿಕ ಗುರು ಸಂತ ಅಜೀತ್ಸಿಂಗ್ ಯುವರಾಜ ಸಿಂಗ್ನ ಗುರು.
ವಿಶ್ವಕಪ್ನಲ್ಲಿ ಯುವಿ ಅದ್ಭುತ ಪ್ರದರ್ಶನ ನೀಡಲು ಈ ಗುರುವಿನ ಆರ್ಶಿವಾದವೇ ಕಾರಣ ಅನ್ನೋದು ಯುವಿ ಕುಟುಂಬದ ನಂಬಿಕೆ. ಹಾಗೇ ಕ್ಯಾನ್ಸರ್ ರೋಗದಿಂದ ಮುಕ್ತಿ ಹೊಂದಲು ಕೂಡ ಈ ಗುರುವೇ ಕಾರಣ. ಆದ್ರಿಂದಲೇ ಯುವಿ ಚಿಕಿತ್ಸೆಗೆ ಮುನ್ನ ಹಾಗೂ ನಂತ್ರ ಧಾರ್ಮಿಕ ಗುರುವನ್ನ ಭೇಟಿ ಮಾಡಿದ್ರು.
ಹೀಗೆ ಯುವಿ ತನ್ನ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನ ಕಂಡಿದ್ದಾರೆ. ಅಪ್ಪ- ಅಮ್ಮನ ವಿರಸ ಯುವಿ ಮನಸನ್ನ ಘಾಸಿಗೊಳಿಸಿದ್ರೂ ಅದನ್ನ ಎಲ್ಲೂ ತೋರಿಸಿಕೊಂಡಿಲ್ಲ. ಬದುಕಿನ ಕಷ್ಟಗಳನ್ನ ನಗು ನಗುತ್ತಲೇ ಎದುರಿಸಿಕೊಂಡು ಮುನ್ನಡೆಯುತ್ತಿದ್ದಾರೆ.
ಯುವರಾಜ್ ಸಿಂಗ್ ಹುಟ್ಟು ಹೋರಾಟಗಾರ.. ಮಾತಿಗೆ ಮಾತು ಏಟಿಗೆ ಏಟು ಇದು ಯುವರಾಜನ ಸಿದ್ದಾಂತ ಕೂಡ ಹೌದು. ಅದ್ರಲ್ಲೂ 2007ರ ವಿಶ್ವಕಪ್ನಲ್ಲಿ ಬಾರಿಸಿದ ಆರು ಸಿಕ್ಸರ್ಗಳನ್ನ ಮರೆಯೋಕೆ ಆಗುತ್ತಾ...
ಒಂದು... ಎರಡು... ಮೂರು.. ನಾಲ್ಕು.. ಐದು... ಆರು..... ಅರೇ ಇದು ಬರೀ ಅಂಕೆ- ಸಂಖ್ಯೆಗಳಲ್ಲ.. ಕ್ರಿಕೆಟ್ ಪುಸ್ತಕದಲ್ಲಿ ಯುವರಾಜ್ ಸಿಂಗ್ ಬಾರಿಸಿದ ಸತತ ಆರು ಸಿಕ್ಸರ್ಗಳು... ಹೌದು, ಇದು 2007ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಘರ್ಜಿಸಿದ ಪರಿ.. ಫ್ಲಿಂಟಾಫ್ ಮೇಲಿನ ಸಿಟ್ಟನ್ನ ಸ್ಟುವರ್ಟ್ ಬ್ರಾಡ್ ಮೇಲೆ ತೀರಿಸಿಕೊಂಡ ರೀತಿ...
ಈ ಬ್ಯಾಟಿಂಗ್ ನಲ್ಲಿ ಜೋಶ್ ಇತ್ತು. .. ಸೇಡಿನ ಮನೋಭಾವನೆ ಇತ್ತು... ಪ್ರತಿಕಾರವಿತ್ತು. ಏಟಿಗೆ ಏಟು ಮಾತಿಗೆ ಮಾತು ಅನ್ನೋ ಸಿದ್ಧಾಂತವಿತ್ತು. ಅಭಿಮಾನಿಗಳಿಗೆ ಮನ ತಣಿಸುವ ಮನರಂಜನೆ ಇತ್ತು. ಅಷ್ಟೊಂದು ಸೊಗಸು... ವೈಭವ ... ಆರ್ಭಟ ಈ ಬ್ಯಾಟಿಂಗ್ನಲ್ಲಿತ್ತು. ಆದ್ರೆ ಇಂಗ್ಲೆಂಡ್ನ ಪ್ರಮುಖ ವೇಗಿಯೊಬ್ಬನ ಆರು ಎಸೆತಗಳನ್ನ ಸಿಕ್ಸರ್ ಬಾರಿಸೋಕೆ ಧಮ್—ತಾಕತ್ತು ಇರಬೇಕು... ಅಂತಹ ಕೆಚ್ಚೆದೆ ಯುವರಾಜನಗಿತ್ತು...
ಅಂದ ಹಾಗೇ ಇದು ಪ್ರತಿಕಾರವಾಗಿತ್ತು. ಏಟಿಗೆ ಯಾವ ರೀತಿ ತಿರುಗೇಟು ನೀಡುತ್ತಾರೆ ಅನ್ನೋದಕ್ಕೆ ಇದು ನಿದರ್ಶನ ಅಷ್ಟೇ ಯಾಕಂದ್ರೆ, 2007ರ ಟಿ-ಟ್ವೆಂಟಿ ವಿಶ್ವಕಪ್ಗೆ ಮುನ್ನ ಇಂಗ್ಲೆಂಡ್ ನ ಡಿಮಿಟ್ರಿ ಮಸ್ಕರೀನಸ್ ಯುವರಾಜ್ ಸಿಂಗ್ನ ಐದು ಎಸೆತಗಳನ್ನ ಸಿಕ್ಸರ್ಗಟ್ಟಿದ್ರು. ಆಗ ಇದೇ ಯುವಿ ಮೈದಾನದಲ್ಲಿ ಚಡಪಡಿಸುತ್ತಿದ್ರು.
ಇನ್ನು, ಯುವರಾಜ್ ಸಿಂಗ್ ತನ್ನಲ್ಲಿ ಪ್ರತಿಭೆ ಇದೆ ಎಂಬುದನ್ನ ಎಳವೆಯಲ್ಲೇ ತೋರಿಸಿಕೊಟ್ಟಿದ್ರು. 19 ವಯೋಮಿತಿ ವಿಶ್ವಕಪ್ ಟೂರ್ನಿ ಗೆದ್ದ ನಂತ್ರ ಯುವಿ ಟೀಮ್ಇಂಡಿಯಾದ ನಾಯಕ ಗಂಗೂಲಿಯ ಕಣ್ಣಿಗೆ ಬಿದ್ರು. ಯುವಿಯ ಹೋರಾಟದ ಗುಣವನ್ನ ದಾದಾ ಆಗಲೇ ಅರ್ಥ ಮಾಡ್ಕೊಂಡಿದ್ರು. ಹಾಗೇ ದಾದಾನ ನಂಬಿಕೆಯನ್ನ ಯುವಿ ಹುಸಿಗೊಳಿಸಲಿಲ್ಲ. ಕ್ರಿಕೆಟ್ನ ಕಾಶಿ ಲಾಡ್ರ್ಸ್ ಮೈದಾನದಲ್ಲಿ ನಾಯಕ ಶರ್ಟ್ ಬಿಚ್ಚಿ ಕುಣಿಯುವಂತೆ ಮಾಡಿದ್ದು ಇದೇ ಪಂಜಾಬ್ನ ರಣಧೀರ...
ಆದ್ರೆ, ಗಾಯ, ಕೆಟ್ಟಫಾರ್ಮ್ ಯುವರಾಜ್ ಸಿಂಗ್ಗೆ ಬೇತಾಳನಂತೆ ಕಾಡ್ತಾ ಇತ್ತು. ಜತೆಗೆ ತಂಡದಿಂದಲೂ ಸ್ವಲ್ಪ ದಿನ ಹೊರಗುಳಿದಿದ್ರು. ಇನ್ನೇನೂ ಕ್ರಿಕೆಟ್ ಬದುಕು ಮುಗಿಯಿತ್ತು ಅನ್ನುವಷ್ಟರಲ್ಲೇ ಸಿಕ್ಸರ್ ಕಿಂಗ್ ಫಿನಿಕ್ಸ್ ನಂತೆ ಮತ್ತೆ ಎದ್ದು ಬಂದ್ರು. 2011ರ ವಿಶ್ವಕಪ್ಗೂ ರೆಡಿಯಾದ್ರು.
ಇನ್ನೂ ವಿಶ್ವಕಪ್ಗೆ ಮುನ್ನವೇ ಗೆಲ್ಲುವುದು ನಾವೇ ಅಂತ ಎದುರಾಳಿ ತಂಡಗಳಿಗೆ ಎಚ್ಚರಿಕೆ ನೀಡಿದ್ರು. ಜತೆಗೆ ವಿಶೇಷ ವ್ಯಕ್ತಿಗಾಗಿ ವಿಶ್ವಕಪ್ ಗೆಲ್ಲಬೇಕು ಅಂತ ಬಹಿರಂಗವಾಗಿ ಹೇಳಿಕೆ ನೀಡಿದ್ರು. ಇದಕ್ಕೆ ತಕ್ಕಂತೆ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ರು.. ಬ್ಯಾಟಿಂಗ್ನಲ್ಲಿ ಘರ್ಜಿಸಿದ್ರೆ, ಬೌಲಿಂಗ್ನಲ್ಲಿ ಮ್ಯಾಜಿಕ್ ಮಾಡಿದ್ರು. ನೋಡ ನೋಡುತ್ತಲೇ 28 ವರ್ಷಗಳ ಬಳಿಕ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದಿತ್ತು. ಕೊಟ್ಟ ಮಾತಿನಂತೆ ಸಚಿನ್ ಮುಡಿಗೆ ವಿಶ್ವಕಪ್ ಗರಿ ಮುಡಿಸಿದ ಯುವಿ ಕೋಟಿ ಕೋಟಿ ಅಭಿಮಾನಿಗಳ ಕಣ್ಮನಿಯಾದ್ರು. ಮೈದಾನದಲ್ಲಿ ಯುವಿ, ಚಿಕ್ಕ ಮಗುವಿನಂತೆ ಗೆಲುವಿನ ಖುಷಿಯನ್ನ ಹಂಚಿಕೊಂಡ ಕ್ಷಣ ಈಗಲೂ ಕಣ್ಣಮುಂದೆ ಹಾದು ಹೋಗುತ್ತೆ. .
ಆದ್ರೆ ಈ ಗೆಲುವಿನ ಹಿಂದೆ ನೋವಿತ್ತು. ನೋವಿನ ಹಿಂದೆ ಗೆಲುವಿನ ಹಂಬಲವಿತ್ತು... .... ದಣಿವಿತ್ತು.... ಆಯಾಸವಿತ್ತು.... ಆದ್ರೂ ಅದು ಯಾರಿಗೂ ಗೊತ್ತಿರಲಿಲ್ಲ. ಮೈದಾನದಲ್ಲೇ ಯುವಿ ಸುಸ್ತಾಗುತ್ತಿದ್ರು.. ಕೆಮ್ಮುತ್ತಿದ್ರು. ವಾಂತಿ ಮಾಡ್ತಾ ಇದ್ರು. ಅಷ್ಟೇ ಯಾಕೆ ಉಸಿರಾಡಲು ಕೂಡ ಕಷ್ಟ ಪಡುತ್ತಿದ್ರು. ಇಷ್ಟೆಲ್ಲಾ ನೋವು ವೇದನೆ ಇದ್ರೂ ಯುವಿಗೆ ವಿಶ್ವಕಪ್ ಗೆದ್ದ ಸಮಾಧಾನ ನೆಮ್ಮದಿ ವೃತ್ತಿ ಬದುಕನ್ನ ಸಾರ್ಥಕಗೊಳಿಸುವಂತೆ ಮಾಡಿತ್ತು.
ಇದೀಗ ಟಿ-ಟ್ವೆಂಟಿ ವಿಶ್ವಕಪ್ ದೂರದಿಂದಲೇ ಹೊಳೆಯುತ್ತಿದೆ. ಅದನ್ನ ಪಡೆಯಲು ಯುವಿ ಮನಸ್ಸು ಹಾತುರೆಯುತ್ತಿದೆ.
ಆಲ್ ದಿ ಬೆಸ್ಟ್ ಯುವಿ...
ಸನತ್ ರೈ
Subscribe to:
Post Comments (Atom)
No comments:
Post a Comment