Thursday, August 19, 2010

ಕನಸುಗಾರನ ಕನಸು...

ಸಚಿನ್‌ ರಮೇಶ್‌ ತೆಂಡುಲ್ಕರ್‌...ಕನಸುಗಾರ...ಅಂದುಕೊಂಡಿದ್ದನ್ನು ಸಾಧಿಸುವ ಛಲಗಾರ...ಮುಂಬೈನ ಶಿವಾಜಿ ಪಾರ್ಕ್‌ ಅಂಗಣದಲ್ಲಿ ಸುಸ್ತಾಗುವಷ್ಟು ಅಭ್ಯಾಸ ಮಾಡುತ್ತಿದ್ದ ಹುಡುಗ.. ಬಹುಶಃ ಪಕ್ಕದಲ್ಲೇ ನೆಲಯೂರಿದ್ದ ವಿಘ್ನೇಶನೂ ಈ ಹುಡುಗನ ಪರಿಶ್ರಮಕ್ಕೆ ತಥಾಸ್ತು ಅಂದಿದ್ದ. ಗುರು ರಮಕಾಂತ್‌ ಅಚ್ರೆಕರ್‌ ಗರಡಿಯಲ್ಲಿ ಪಳಗಿದ ಈ ಚೊಟುದ್ದ ಹುಡುಗ ಕ್ರಿಕೆಟ್‌ ಜಗತ್ತಿನ ಅನಭಿಷಕ್ತ ದೊರೆಯಾಗಿದ್ದು ಒಂದು ರೋಚಕ ಅಧ್ಯಾಯ...
ಹೌದು, ಮೀಸೆ ಚಿಗುರುವ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟಿಗೆ ರಣಕಹಳೆ ಮೊಳಗಿದ ವಾಮನಮೂರ್ತಿ. ಮಾರಕ ಪಾಕ್‌ ಬೌಲರ್‌ಗಳಿಂದ ಮುಖಕ್ಕೆ ಏಟು ಮಾಡ್ಕೊಂಡ್ರೂ ಎದೆಗುಂದದ ವೀರ ಸೇನಾನಿ. . ರಕ್ತದ ಹನಿಗಳು ನೆಲಕ್ಕುರುಳಿದ್ರೂ ಅಂಜದ ಗಂಡು. ಕ್ರಿಕೆಟ್‌ ಆಟವನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುವ ಹಠವಾದಿ. ತನ್ನ ಮಾಸ್ಟರ್‌ ಬ್ಲಾಸ್ಟರ್ ಆಟದಿಂದ ಅಭಿಮಾನಿಗಳನ್ನ ರಂಜಿಸುವ ಕಲಾಕಾರ. ರನ್‌ಗಳನ್ನ ಗುಡ್ಡೆ ಹಾಕಿದ ದಾಖಲೆವೀರ...
ಆದ್ರೂ , ಸಚಿನ್‌ ದಾಹ ಮಾತ್ರ ನೀಗಿಲ್ಲ. ಅದು ತಪ್ತ ಮನಸ್ಸಿನ ತಪ್ಪಸ್ಸಿನಂತೆ... ಸದಾ ಮಿಡಿಯುತ್ತಿರುವ ತುಮುಲ. ಇಂತಹ ಮನೋಭಾವನೆ ಸಚಿನ್‌ಗಿರಲು ಮಾತ್ರ ಸಾಧ್ಯ. ಯಾಕಂದ್ರೆ ಅಲ್ಲಿ ಮಾತಿಲ್ಲ.. ಬ್ಯಾಟ್‌ ಮೌನವಾಗಿಯೇ ಉತ್ತರ ನೀಡುತ್ತೆ. ಹಾಗೇ, ಅಹಂ ಇಲ್ಲ. ಬದ್ಧತೆ ಇದೆ. ಗಡಿಬಿಡಿ ಇಲ್ಲ.... ಏಕಾಗ್ರತೆ ಇದೆ. ಕ್ರಿಕೆಟ್‌ ಅಂದ್ರೆ ಇಷ್ಟೇನಾ ಅನ್ನೋ ಅಸಡ್ಡೆ ಇಲ್ಲ... ಕಲಿಯುವುದಕ್ಕೆ ಇನ್ನೂ ಇದೆ ಅನ್ನೋ ಪರಿಶ್ರಮವಿದೆ. ಇದು ಜೀನಿಯಸ್‌ ಆಟಗಾರನ ಸ್ಪೆಷಾಲಿಟಿ.
ಕಳೆದ 21 ವರ್ಷಗಳಿಂದ ಸಚಿನ್‌ ಕ್ರಿಕೆಟ್‌ ಜಗತ್ತನ್ನ ಆಳುತ್ತಿದ್ದಾರೆ. ಸುಮಾರು 75ಕ್ಕೂ ಅಧಿಕ ದಾಖಲೆಗಳು ಸದ್ದಿಲ್ಲದೆ ಸಚಿನ್‌ ಹೆಸರಿನಲ್ಲಿ ಅಂಟಿಕೊಂಡಿವೆ. ಅಲ್ಲದೆ, ಐದು ವಿಶ್ವಕಪ್‌ ಆಡಿದ ಹೆಗ್ಗಳಿಕೆಯೂ ತೆಂಡುಲ್ಕರ್‌ಗಿದೆ. ಈ ಬಗ್ಗೆ ಸಚಿನ್‌ಗೂ ಹೆಮ್ಮೆ ಇದೆ. ಅದಕ್ಕಾಗಿ ಸಚಿನ್‌ ಅದೃಷ್ಟವಂತ ಅಂತಲೂ ಹೇಳಿಕೊಳ್ಳುತ್ತಾರೆ. ಹಾಗಂತ ಸಾಧನೆ, ದಾಖಲೆ, ರನ್‌ಗಳು ಸುಮ್ಮನೆ ಹರಿದುಬಂದಿಲ್ಲ. ಪ್ರತಿಯೊಂದರ ಹಿಂದೆಯೂ ಶ್ರಮವಿದೆ. ಜತೆಗೆ ಇದಕ್ಕೆಲ್ಲಾ ಕಾರಣ ಸರ್ವಶಕ್ತನಾದ ದೇವರು ಅನ್ನಲು ಕ್ರಿಕೆಟ್‌ ದೇವರು ಮರೆಯುವುದಿಲ್ಲ.
ಇಷ್ಟೆಲ್ಲಾ ಆದ್ರೂ ಸಚಿನ್‌ ಮನಸ್ಸು ಮಾತ್ರ ಕೊರಗ್ತಾನೇ ಇದೆ. ತನ್ನ ಕ್ರಿಕೆಟ್‌ ಬದುಕಿನಲ್ಲಿ ವಿಶ್ವಕಪ್‌ ಗೆಲ್ಲಲು ಆಗಿಲ್ಲ ಅನ್ನೋ ನೋವು ಅವ್ರನ್ನ ಕಾಡ್ತಾ ಇದೆ. ಆ ನೋವನ್ನ ಮರೆ ಮಾಚಲು ಸಚಿನ್‌ ಈಗೀನಿಂದಲೇ ಸಿದ್ಧತೆ ಮಾಡಿಕೊಳ್ತಾ ಇದ್ದಾರೆ. ತವರಿನಲ್ಲಿ ಅದೂ ಕೂಡ ಮುಂಬೈನಲ್ಲಿ 2011ರ ವಿಶ್ವಕಪ್‌ ಗೆಲ್ಲುವುದು ಈ ಕನಸುಗಾರನ ಕನಸು. ಒಂದು ವೇಳೆ ಆ ಕನಸು ನನಸಾದ್ರೆ ಕ್ರಿಕೆಟ್‌ ದೇವ್ರ ವರ್ಣರಂಜಿತ ಬದುಕಿಗೆ ಸಾರ್ಥಕತೆಯ ಅಭಿಷೇಕವಾಗುತ್ತೆ...
ಸನತ್ ರೈ

No comments:

Post a Comment