Wednesday, November 17, 2010

ಪಟೇಲರ ಮುಸಿ ಮುಸಿ ನಗು

ಕೆಎಸ್‌ಸಿಎ ಸರ್ವಾಧಿಕಾರಿಯಾಗಿದ್ದ ಬ್ರಿಜೇಶ್‌ ಪಟೇಲ್‌ ಈ ಬಾರಿಯ ಕೆಎಸ್‌ಸಿಎ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಆದ್ರೆ, ಚುನಾವಣಾ ಅಖಾಡದಲ್ಲಿ ಶಕುನಿ ಥರಾ ಪಟೇಲರು ದಾಳ ಉದುರಿಸಿದ್ದಾರೆ. ಜಾಣ್ಮೆಯಿಂದ ಅನಿಲ್‌ ಕುಂಬ್ಳೆ ಬಣವನ್ನ ತಮ್ಮತ್ತ ಸೆಳೆದುಕೊಂಡ ಬ್ರಿಜೇಶ್‌ ಪಟೇಲ್‌ ಮಹಾರಾಜ ಬಣಕ್ಕೆ ಸಡ್ಡು ಹೊಡೆಯುವ ಪ್ಲಾನ್‌ ಮಾಡ್ಕೊಂಡಿದ್ರು. ಬಹಿರಂಗವಾಗಿ ಅನಿಲ್‌ಕುಂಬ್ಳೆ ಬಳಗಕ್ಕೆ ನೋವಿನಿಂದಲೇ ಬೆಂಬಲ ವ್ಯಕ್ತ ಪಡಿಸಿದ್ದ ಪಟೇಲರು ಮುಸಿಮುಸಿ ನಗುತ್ತಿದ್ರು. ಅದ್ರಲ್ಲೂ ತಮ್ಮ ಬಣದ ಬೆಂಬಲಿಗರನ್ನ ಕುಂಬ್ಳೆ ಬಳಗಕ್ಕೆ ಸೇರಿಸಿಕೊಂಡ ಪಟೇಲರು ಕೆಎಸ್‌ಸಿಎ ಆಡಳಿತದಲ್ಲಿ ಸುಲಭವಾಗಿ ಮೂಗು ತೂರಿಸುವ ಲೆಕ್ಕಾಚಾರ ಹಾಕಿಕೊಂಡಿದ್ರು. ಆದ್ರೆ ಪಟೇಲರ ಗೇಮ್‌ ಪ್ಲಾನ್‌ ಇದೀಗ ವರ್ಕ್ ಔಟ್‌ ಆಗುತ್ತಿಲ್ಲ. ಬ್ರಿಜೇಶ್‌ ಪಟೇಲ್‌ ಅಂದುಕೊಂಡಷ್ಟು ಸುಲಭವಾಗಿ ಕುಂಬ್ಳೆ ಬಳಗ ಮಣೆ ಹಾಕ್ತಾ ಇಲ್ಲ. ಇದ್ರಿಂದ ಪಟೇಲ್‌ ಬೆಂಬಲಿಗರು ಸಹ ಕುಂಬ್ಳೆ ಬಣಕ್ಕೆ ಸರ್ಪೋರ್ಟ್ ಮಾಡ್ತಾ ಇಲ್ಲ ಅನ್ನೋ ಹೊಸ ಸುದ್ದಿ ಕೆಎಸ್‌ಸಿಎ ಚಾವಡಿಯಿಂದ ಹೊರಬಿದ್ದಿದೆ.
ಹಾಗೇ ನೋಡಿದ್ರೆ ,ಮಹಾರಾಜ ಮತ್ತು ಕುಂಬ್ಳೆ ಬಳಗದ ಉದ್ದೇಶ ಒಂದೇ ಆಗಿತ್ತು. ಕೆಎಸ್‌ಸಿಎ ಆಡಳಿತ ಚುಕ್ಕಾಣಿಯಿಂದ ಬ್ರಿಜೇಶ್‌ಪಟೇಲ್‌ ಕೆಳಗಿಳಿಯಬೇಕು. ಇದಕ್ಕಾಗಿ ಮಹಾರಾಜ ಬಣ ಕಳೆದ ಚುನಾವಣೆಯಲ್ಲಿ ಸಾಕಷ್ಟು ಪ್ರಯತ್ನ ನಡೆಸಿತ್ತು. ಆದ್ರೂ ಅದೂ ಸಂಪೂರ್ಣವಾಗಿ ಸಫಲವಾಗಲಿಲ್ಲ. ಆದ್ರೆ ಈ ಬಾರಿ ಶ್ರೀನಾಥ್‌ ಮತ್ತು ಕುಂಬ್ಳೆ ಬಳಗದ ಎಂಟ್ರಿಯಿಂದ ಬ್ರಿಜೇಶ್‌ಪಟೇಲ್‌ ಕೆಎಸ್‌ಸಿಎ ಚಾವಡಿಯಿಂದ ಅನಿವಾರ್ಯವಾಗಿ ಹೊರನಡೆಯುವ ತೀರ್ಮಾನ ತೆಗೆದುಕೊಂಡ್ರು.
ಆದ್ರೂ ಪಟೇಲರು ಸುಮ್ಮನೆ ಕೂತಿಲ್ಲ. ಮಹಾರಾಜ ಮತ್ತು ಅನಿಲ್‌ ಬಣದ ಸಂಬಂಧವನ್ನು ಚಾಣಕ್ಯ ತಂತ್ರದಿಂದ ಹದಗೆಡುವಂತೆ ಮಾಡಿದ್ರು. ಈ ಹಿಂದೆ ಮಹಾರಾಜ ಬಣ ಮತ್ತು ಕುಂಬ್ಳೆ ಬಳಗ ಜತೆಯಾಗಿಯೇ ಚುನಾವಣಾ ಕಣಕ್ಕೆ ಧುಮುಕುವ ಪ್ಲಾನ್‌ ಮಾಡ್ಕೊಂಡಿತ್ತು. ಆದ್ರೆ ಕ್ರಿಕೆಟರ್‌ಗಳೇ ಕೆಎಸ್‌ಸಿಎ ಆಡಳಿತ ನಡೆಸಬೇಕು ಎಂಬ ಪಟೇಲರ ಹೊಸ ರಾಗ ಯಾಕೋ ಜಂಬೋ ಬಳಗದ ಕಿವಿಯನ್ನ ಇಂಪು ಮಾಡಿತ್ತು. ಪರಿಣಾಮ, ಕುಂಬ್ಳೆ ಬಳಗ ಪಟೇಲರ ಮಾತಿಗೆ ಕುಣಿದು ಮಹಾರಾಜ ಬಣವನ್ನ ಎದುರು ಹಾಕೊಂಡು ಈಗ ಚುನಾವಣಾ ಕಣಕ್ಕೆ ಧುಮುಕಿದೆ.
ಹಾಗೇ ಕುಂಬ್ಳೆ ಬಣಕ್ಕೆ ತಿರುಗೇಟು ನೀಡಲು ಮಹಾರಾಜ ಬಣ ಕೂಡ ರಣತಂತ್ರಗಳನ್ನ ರೂಪಿಸಿಕೊಂಡಿದೆ. ಡಾ. ಕೃಷ್ಣಮೂರ್ತಿ, ದೊರೈಸ್ವಾಮಿ, ಕಸ್ತೂರಿ ರಂಗನ್‌, ಮೊದಲಾದವರ ಬೆಂಬಲ ಪಡೆದಿರುವ ಮಹಾರಾಜರು ಅನಿಲ್‌ಬಳಗಕ್ಕೆ ಕ್ರೀಡಾ ಮನೋಭಾವದ ಸ್ಪರ್ಧೆಯನ್ನ ಒಡ್ಡಲು ಸಿದ್ಧತೆಗಳನ್ನ ಮಾಡ್ಕೊಂಡಿದ್ದಾರೆ .
ಒಟ್ಟಿನಲ್ಲಿ ಪಟೇಲರ ಕುಮ್ಮಕ್ಕಿನಿಂದ ಕೆಎಸ್‌ಸಿಎ ಚುನಾವಣೆ ನಡೆಯುತ್ತಿದೆ. ಹಾಗಂತ ಇನ್ನೂ ಕಾಲ ಮಿಂಚಿಲ್ಲ, ರಾಜ್ಯ ಕ್ರಿಕೆಟ್‌ನ ಹಿತದೃಷ್ಟಿಯಿಂದ ಎಲ್ಲವನ್ನ ಮರೆತು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ನಡೆಸುವ ಚಿನ್ನದಂತಹ ಅವಕಾಶ ಅನಿಲ್‌ ಬಳಗಕ್ಕಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವ ಜಾಣ್ಮೆ ಮಾತ್ರ ಜಂಬೋ ಕೈಯಲ್ಲಿದೆ.
ಸನತ್ ರೈ

No comments:

Post a Comment