Sunday, November 20, 2011

ಕಾಂಬ್ಳಿಯ ಮರ್ಕಟ ಆಟ

ವಿನೋದ್‌ ಕಾಂಬ್ಳಿ...ಮುಂಬೈ ಹುಡುಗ. ಎಲ್ಲವೂ ಅಂದುಕೊಂಡಂತೆ ಆಗ್ತಾ ಇದ್ರೆ ಇವತ್ತು ವಿನೋದ್‌ ಕಾಂಬ್ಳಿಯ ಹೆಸರು ಕೂಡ ವಿಶ್ವ ಕ್ರಿಕೆಟ್‌ನಲ್ಲಿ ರಾರಾಜಿಸುತ್ತಿತ್ತು. ಆದ್ರೆ ಬದುಕು ನಾವು ಅಂದುಕೊಂಡಂತಿಲ್ಲ. ಇದ್ರಿಂದಲೇ ಕಾಂಬ್ಳಿ ದುರಂತ ಕ್ರಿಕೆಟಿನಾಗಿರುವುದು. ಫ್ಲೋ... ಬ್ಯಾಟಿಂಗ್‌ ಮತ್ತು ಕಣ್ಣೀರು...
ಹೌದು, ಪ್ರತಿಭೆ ಯಾರ ಸ್ವತ್ತು ಅಲ್ಲ. ಹಾಗಂತ ಸುಮ್ಮನೆ ಕೂತ್ರೆ ಆಗಲ್ಲ. ನಿಖರ ಗುರಿ, ಶಿಸ್ತಿನಿಂದ ಮುನ್ನಡೆದ್ರೆ ಮಾತ್ರ ಪ್ರತಿಭೆಯನ್ನ ಅನಾವರಣಗೊಳಿಸಬಹುದು. ಆಗ ಮಾತ್ರ ಬದುಕಿಗೆ ನಿಜವಾದ ಅರ್ಥವನ್ನ ಕಲ್ಪಿಸಬಹುದು. ದುರಂತ ಅಂದ್ರೆ ವಿನೋದ್‌ ಕಾಂಬ್ಳಿಗೆ ಪ್ರತಿಭೆ ಇದ್ರೂ ಅದನ್ನ ಸರಿಯಾಗಿ ಬಳಸಿಕೊಳ್ಳಲಿಲ್ಲ. ಪರಿಣಾಮ, ತನ್ನ ವರ್ಣರಂಜಿತ ಕ್ರಿಕೆಟ್‌ ಬದುಕಿಗೆ ಬ್ಯಾಡ್‌ ಬಾಯ್‌ ಅನ್ನೋ ಇಮೇಜ್‌ ಅಂಟಿಕೊಂಡಿತ್ತು. ಜತೆಗೆ ಬಾಲ್ಯದಲ್ಲಿ ಕಟ್ಟಿಕೊಂಡಿದ್ದ ಕನಸು ಕನಸಾಗಿಯೇ ಉಳಿಯಿತ್ತು.
ಹಾಗಂತ ವಿನೋದ್‌ ಕಾಂಬ್ಳಿ ಕೆಟ್ಟವರಲ್ಲ.. ಆದ್ರೆ ದುಡ್ಡು ಅವ್ರ ವ್ಯಕ್ತಿತ್ವವನ್ನೇ ಹಾಳು ಮಾಡಿಬಿಟ್ಟಿತ್ತು. ಅದೇನೋ ಅಂತಾರಲ್ಲ. ಅಲ್ಪನಿಗೆ ಐಶ್ವರ್ಯ ಬಂದ್ರೆ ನಡು ರಾತ್ರಿಯಲ್ಲಿಎದ್ದು ಕೊಡೆ ಹಿಡಿದ ಅಂತ, ಹಾಗೇ ಆಗಿದೆ ಕಾಂಬ್ಳಿಯ ಜೀವನ ಚಕ್ರ. ಅಲ್ಪ ಅವಧಿಯಲ್ಲಿ ಕಂಡ ಯಶಸ್ಸು ಕಾಂಬ್ಳಿಯ ಕ್ರಿಕೆಟ್‌ ಬದುಕನ್ನೇ ಸರ್ವನಾಶ ಮಾಡಿತ್ತು. ಹುಂಬುತನ, ಅತೀಯಾದ ಆತ್ಮವಿಶ್ವಾಸ, ದುಡ್ಡು, ಮೋಜು, ಮಸ್ತಿ, ಹೆಣ್ಣಿನ ಸಂಗದಿಂದ ಕ್ರಿಕೆಟ್‌ ಮೇಲಿನ ಆಸಕ್ತಿ ಕಮ್ಮಿಯಾಯ್ತು. ಇದ್ರಿಂದ ಭಾರತ ಕ್ರಿಕೆಟ್‌ ತಂಡಕ್ಕೆ ವಿನೋದ್‌ ಕಾಂಬ್ಳಿ ಬಂದು ಹೋಗುವ ಅತಿಥಿಯಾದ್ರು.
ಆದ್ರೆ ಕಾಂಬ್ಳಿಯ ಬಾಲ್ಯದ ದಿನಗಳನ್ನ ನೆನಪಿಸಿಕೊಂಡಾಗ ಎಂಥವರ ಮನ ಕೂಡ ಕರಗಬಹುದು. ಯಾಕಂದ್ರೆ ಕಾಂಬ್ಳಿಯ ಕ್ರಿಕೆಟ್‌ ಬದುಕು ಅರಳಿದ್ದು ಬಡತನದ ಬೇಗೆಯಲ್ಲಿ. ಮಾಯಾ ನಗರಿಯ ವಠಾರದಲ್ಲಿ ಆಡಿ ಬೆಳೆದ ಹುಡುಗ ಮುಂದೊಂದು ದಿನ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗುತ್ತಾನೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ವಠಾರದ ಮುಂದಿರುವ ದೊಡ್ಡ ದೊಡ್ಡ ಕಟ್ಟಡಗಳನ್ನ ನೋಡ್ಕೊಂಡು ಅದಕ್ಕಿಂತಲೂ ಎತ್ತರವಾಗಿ ಚೆಂಡನ್ನ ಹೊಡೆಯುತ್ತಿದ್ದ ವಿನೋದ್‌ ಕಾಂಬ್ಳಿಯ ಕ್ರಿಕೆಟ್‌ ಆಸಕ್ತಿಗೆ ಅಪ್ಪ ಗಣಪತಿ ಕಾಂಬ್ಳಿ ಪ್ರೊತ್ಸಾಹ ನೀಡಿದ್ರು.
ತಿಂಗಳಿಗೆ 600 ರೂಪಾಯಿ ಸಂಪಾದನೆ ಮಾಡ್ತಾ ಇದ್ದ ಗಣಪತಿ ಕಾಂಬ್ಳಿಗೆ ಸಂಸಾರವನ್ನ ಮುನ್ನಡೆಸುವುದೇ ದೊಡ್ಡ ಕಷ್ಟವಾಗುತ್ತಿತ್ತು. 18 ಸದಸ್ಯರನ್ನೊಳಗೊಂಡ ಅವಿಭಕ್ತ ಕುಟುಂಬದಲ್ಲಿ ಬೆಳೆದ ಕಾಂಬ್ಳಿಗೆ ಕ್ರಿಕೆಟ್‌ ಪ್ರತಿಭೆ ಮಾತ್ರ ಬಡತನವಾಗಿ ಕಾಡಲಿಲ್ಲ. ಗುರು ರಮಕಾಂತ್‌ ಅಚ್ರೆಕರ್‌ ಮಾರ್ಗದರ್ಶನ, ಶಿಕ್ಷಕರ ಆರ್ಥಿಕ ಬೆಂಬಲ, ಅದಕ್ಕಿಂತಲೂ ಹೆಚ್ಚಾಗಿ ಆಪ್ತ ಗೆಳೆಯ ಸಚಿನ್‌ ತೆಂಡುಲ್ಕರ್‌ ಒಡನಾಟ, ವಿನೋದ್‌ ಕಾಂಬ್ಳಿಗೆ ಬಡತನದ ನೋವನ್ನ ಮರೆಯುವಂತೆ ಮಾಡಿತ್ತು.
ಬಳಿಕ ಕಾಂಬ್ಳಿಯ ಪ್ರತಿಭೆಗೆ ಮನ್ನಣೆ ನೀಡಿದ್ದು ಶಾರದಾಶ್ರಮ ಸ್ಕೂಲ್‌. ಸೇಂಟ್‌ ಕ್ಸೆವಿಯರ್‌ ಸ್ಕೂಲ್‌ ವಿರುದ್ಧ ಸಚಿನ್‌ ಜತೆಗೂಡಿ ಅಜೇಯ 664 ರನ್‌ ಕಲೆ ಹಾಕಿದ್ದು ಈಗ ಇತಿಹಾಸ. ಇಲ್ಲಿ ಕಾಂಬ್ಳಿ ಅಜೇಯ 349 ರನ್‌ ಸಿಡಿಸಿದ್ದು, ಅಲ್ಲದೆ, ಸಚಿನ್‌ಗಿಂತ ಅಧಿಕ ರನ್‌ ಸಹ ದಾಖಲಿಸಿದ್ರು. ಆದ್ರೆ ಸಚಿನ್‌ಗಿರುವಷ್ಟು ಅದೃಷ್ಟ ಕಾಂಬ್ಳಿಗೆ ಇರಲಿಲ್ಲ. ರಣಜಿ ಮತ್ತು ಭಾರತ ತಂಡಕ್ಕೆ ಕಾಂಬ್ಳಿಗಿಂತ ಮುನ್ನವೇ ಸಚಿನ್‌ ಎಂಟ್ರಿಕೊಟ್ರು. ಆದ್ರೂ ಕಾಂಬ್ಳಿ ಅಸೂಯೆ ಪಡಲಿಲ್ಲ. ಬದಲಾಗಿ ತನ್ನ ಗೆಳೆಯನ ಹಾದಿಯಲ್ಲೇ ತನಗೂ ಅವಕಾಶ ಸಿಕ್ಕೇ ಸಿಗುತ್ತೆ ಅಂತ ನಂಬಿಕೊಂಡಿದ್ರು.
ಅಂದ ಹಾಗೇ ಕಾಂಬ್ಳಿಯ ನಂಬಿಕೆ ಹುಸಿಯಾಗಲಿಲ್ಲ. 17ನೇ ಹರೆಯದಲ್ಲೇ ಮುಂಬೈ ರಣಜಿ ತಂಡವನ್ನ ಸೇರಿಕೊಂಡ್ರು.ಅಲ್ಲದೆ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ ಗಟ್ಟಿ ಎಲ್ರನ್ನ ಚಕಿತಗೊಳಿಸಿದ್ರು. ನಂತ್ರ ಹಿಂತಿರುಗಿ ನೋಡಲಿಲ್ಲ. ಆಕರ್ಷಕ ಎಡಗೈ ಬ್ಯಾಟಿಂಗ್‌ನಿಂದ ಮಿಂಚುಹರಿಸಿದ ಕಾಂಬ್ಳಿ 19ನೇ ವಯಸ್ಸಿನಲ್ಲಿ ಭಾರತದ ಏಕದಿನ ತಂಡದಲ್ಲಿ ಕಾಣಿಸಿಕೊಂಡ್ರು. ಹಾಗೇ, 1993ರಲ್ಲಿ ಇಂಗ್ಲೆಂಡ್‌ ವಿರುದ್ಧ ಚೊಚ್ಚಲ ಟೆಸ್ಟ್‌ವನ್ನಾಡಿದ ಕಾಂಬ್ಳಿ ಅಲ್ಲೂ ಸೈ ಅನ್ನಿಸಿಕೊಂಡ್ರು. ಅಲ್ಲದೆ ಮೂರು ಪಂದ್ಯಗಳಲ್ಲಿ ಎರಡು ದ್ವಿಶತಕ ದಾಖಲಿಸಿ ಗಮನ ಸೆಳೆದ್ರು.
ಇಲ್ಲಿಯವರೆಗೆ ಎಲ್ಲವೂ ಸರಿಯಾಗೇ ಇತ್ತು. ನಂತ್ರ ಕಾಂಬ್ಳಿ ಅಡ್ಡ ದಾರಿ ಹಿಡಿದ್ರು. ಕ್ರಿಕೆಟ್‌ ಬದುಕು ಅಂತ ನಂಬಿಕೊಂಡಿದ್ದ ಕಾಂಬ್ಳಿ, ಯಾಕೋ ಕ್ರಿಕೆಟ್‌ ಶೋಕಿ ಅಂತನೇ ಭಾವಿಸಿದ್ರು. ಕ್ರಿಕೆಟ್ ಇಷ್ಟೇ ಅನ್ನೋ ಅಸಡ್ಡೆ ಭಾವನೆ ಮೂಡಿತ್ತು. ಅಂಗಣದಲ್ಲಿ ಚೆಲ್ಲಾಟವಾಡ್ತಾ ಇದ್ರು. ಹೇರ್‌ ಸ್ಟೈಲ್‌, ಗಾಗಲ್‌ ಜತೆಗೆ ಫೀಲ್ಡಿಂಗ್ ಮಾಡುವಾಗ ಚಿತ್ರ ವಿಚಿತ್ರ ಹಾವಭಾವಗಳಿಂದ ಅಭಿಮಾನಿಗಳನ್ನ ರಂಜಿಸ್ತಾ ಇದ್ರು. ಆದ್ರೆ ಇದೆಲ್ಲಾ ಅಶಿಸ್ತು ಅನ್ನೋ ಮನೋಭಾವನೆ ಮಾತ್ರ ಕಾಂಬ್ಳಿಯ ಮನಸ್ಸಿಗೆ ಅರ್ಥನೇ ಆಗಲಿಲ್ಲ.
ಬರ್ತಾ ಬರ್ತಾ ಕಾಂಬ್ಳಿ ವಿನೋದವಾದ್ರು. ಚಂಚಲೆಯಾದ ಮನಸ್ಸನ್ನ ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಎಲ್ಲವೂ ಪರ್ಫೆಕ್ಟ್‌ ಅಂತ ನಂಬಿಕೊಂಡಿದ್ದ ಕಾಂಬ್ಳಿಗೆ ತನ್ನ ವೀಕ್‌ನೆಸ್‌ ಏನೂ ಎಂಬುದರ ಪರಿವೇ ಇರಲಿಲ್ಲ. ಆದ್ರೂ ಸ್ಪಿನ್ನ ರ್‌ಗಳ ಎದುರು ಕಾಂಬ್ಳಿ ಅಬ್ಬರಿಸ್ತಾ ಇದ್ರು. ಅದ್ರಲ್ಲೂ ಟೆಸ್ಟ್‌ ಪಂದ್ಯವೊಂದರಲ್ಲಿ ಶೇನ್‌ ವಾರ್ನ್‌ ಅವ್ರ ಒಂದೇ ಓವರ್‌ನಲ್ಲಿ 22 ರನ್‌ ಸಿಡಿಸಿರುವುದನ್ನ ಅಷ್ಟೊಂದು ಸುಲಭವಾಗಿ ಮರೆಯೋಕೆ ಆಗಲ್ಲ.
ಆದ್ರೆ ಕಾಂಬ್ಳಿ ಶಾರ್ಟ್‌ ಬೌಲ್‌ ಎಸೆತಗಳಿಗೆ ಮಾತ್ರ ನಿರುತ್ತರಾಗುತ್ತಿದ್ರು. ಹಾಗಂತ ಇದನ್ನ ಸರಿಪಡಿಸಿಕೊಳ್ಳುವ ಮನಸ್ಸು ಮಾಡಲಿಲ್ಲ. 1994ರಲ್ಲಿ ಕೆರೆಬಿಯನ್ನರು ಶಾರ್ಟ್‌ ಬೌಲ್‌ ಎಸೆತಗಳನ್ನ ಎಸೆಯುವ ಮೂಲಕ ಕಾಂಬ್ಳಿಯ ವಿಕ್‌ನೆಸ್ ಅನ್ನು ಬಹಿರಂಗಗೊಳಿಸಿದ್ರು.
ನಂತ್ರ ಭಾರತ ತಂಡದಲ್ಲಿ ಕಾಂಬ್ಳಿಗೆ ಅಭದ್ರತೆ ಕಾಡಿತ್ತು. ಕೇವಲ ಎರಡು ಮೂರು ವರ್ಷಗಳಲ್ಲಿ ಪೌರುಷ ತೋರಿದ್ದ ವಿನೋದ್‌ ಕಾಂಬ್ಳಿ ಕ್ರಮೇಣ ವಿಶ್ವ ಕ್ರಿಕೆಟ್‌ಗೆ ಅಪರಿಚಿತರಾದ್ರು. 9 ಬಾರಿ ಭಾರತ ಕ್ರಿಕೆಟ್‌ ತಂಡಕ್ಕೆ ಬಂದು ಹೋಗಿರುವ ವಿನೋದ್‌ ಕಾಂಬ್ಳಿ ತನ್ನ ಕ್ರಿಕೆಟ್‌ ಬದುಕನ್ನು ತಾವಾಗಿಯೇ ಹಾಳು ಮಾಡ್ಕೊಂಡ್ರು.
ಇದೀಗ ಕಾಂಬ್ಳಿ ಕಣ್ಣೀರು ಹಾಕ್ತಾ ಇದ್ದಾರೆ. ಯಾವತ್ತೋ ಹೇಳಬೇಕಾಗಿದ್ದ ಸತ್ಯಸಂಗತಿಗಳನ್ನ ಈಗ ಹೇಳ್ತಾ ಇದ್ದಾರೆ. ಆದ್ರೆ ಅದನ್ನ ಯಾರು ನಂಬುತ್ತಿಲ್ಲ. ಯಾಕಂದ್ರೆ ಕಾಂಬ್ಳಿ ಅಂತಹ ವರ್ಚಸ್ಸು ಹಾಗೂ ವ್ಯಕ್ತಿತ್ವವನ್ನ ಮೈಗೂಡಿಸಿಕೊಂಡಿಲ್ಲ. ತನ್ನ ಬದುಕನ್ನ ತನಗೆ ರೂಪಿಸಿಕೊಳ್ಳಲು ಸಾಧ್ಯವಾಗಿಲ್ಲ ಅನ್ನೋ ನೋವು ಅವ್ರ ಮುಖದಲ್ಲಿದೆ. ಆದ್ರೆ ಅದನ್ನ ಹೇಳಿಕೊಳ್ಳಲು ಆಗ್ತಾ ಇಲ್ಲ. ಹಾಗಂತ ತನ್ನ ಬದುಕು ಇನ್ನೊಬ್ಬನಿಂದ ಹಾಳಾಯ್ತು ಅನ್ನೋದ್ರಲ್ಲಿ ಅರ್ಥವಿಲ್ಲ.
ಸನತ್ ರೈ

No comments:

Post a Comment