Thursday, November 17, 2011

ವಿದಾಯದ ವೇಳೆಯಲ್ಲಿ.... 1

ರಾಹುಲ್‌ ದ್ರಾವಿಡ್‌ .. ಬೆಂಗಳೂರಿನ ಹೆಮ್ಮೆಯ ಕ್ರಿಕೆಟಿಗ.. ಸುಮಾರು 30 ವರ್ಷಗಳ ಹಿಂದೆ ಚಿನ್ನಸ್ವಾಮಿ ಅಂಗಣದಲ್ಲಿ ಬೆವರು ಸುರಿಸಿದ ಹುಡುಗ... ನೋಡ ನೋಡುತ್ತಲೇ ಟೀಮ್ ಇಂಡಿಯಾದ ಕದ ತಟ್ಟಿದ್ದ ಯುವಕ. ಹಾಗಂತ ರಾಹುಲ್‌ ದ್ರಾವಿಡ್‌ಗೆ ಭಾರತ ತಂಡದ ಬಾಗಿಲು ಅಷ್ಟೊಂದು ಸುಲಭವಾಗಿ ತೆರೆದಿರಲಿಲ್ಲ. ದೇಶಿ ಪಂದ್ಯಗಳಲ್ಲಿ ರನ್‌ಗಳ ಮಳೆ ಸುರಿಸಿ, ಕೊನೆಗೂ ಭಾರತ ತಂಡಕ್ಕೆ ಎಂಟ್ರಿಕೊಟ್ರು.
ಅದು 1996 ಜೂನ್‌ 20. . ಕ್ರಿಕೆಟ್‌ನ ಐತಿಹಾಸಿಕ ಮೈದಾನ ಲಾಡ್ರ್ಸ್‌ ನಲ್ಲಿ ರಾಹುಲ್‌ ದ್ರಾವಿಡ್‌ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಭರ್ಜರಿಯಾಗಿಯೇ ಎಂಟ್ರಿಕೊಟ್ರು. ಮೊದಲ ಪಂದ್ಯದಲ್ಲೇ ಕೇವಲ ಐದು ರನ್‌ಗಳಿಂದ ಶತಕ ವಂಚಿತರಾದ್ರು. ನಂತ್ರ ವಿಶ್ವಕ್ರಿಕೆಟ್‌ನಲ್ಲಿ ಶುರುವಾಗಿದ್ದು ದ್ರಾವಿಡ್‌ ಪರ್ವ.
ತಾಳ್ಮೆಯ ಪ್ರತೀಕದಂತಿದ್ದ ದ್ರಾವಿಡ್‌ ಬೌಲರ್‌ಗಳನ್ನ ಮನಬಂದಂತೆ ಕಾಡುತ್ತಿದ್ರು. ಭಾರತ ತಂಡವನ್ನ ಸೋಲಿನಿಂದಲೂ ಬಚಾವ್‌ ಮಾಡ್ತಾ ಇದ್ರು. ಹಾಗೇ ನಿಧಾನಗತಿಯಾದ್ರೂ ತಂಡದ ರೋಚಕ ಗೆಲುವಿಗೂ ಕಾರಣರಾಗುತ್ತಿದ್ರು. ಅದ್ರಲ್ಲೂ 2001ರಲ್ಲಿ ಆಸ್ಟ್ರೆಲಿಯಾ ವಿರುದ್ಧ ಕೊಲ್ಕತ್ತಾದ ಈಡನ್‌ ಗಾರ್ಡನ್‌ ಮೈದಾನದಲ್ಲಿ ಆಡಿದ ಪರಿಯನ್ನ ಯಾವತ್ತೂ ಮರೆಯೋಕೆ ಆಗೋಲ್ಲ. ಲಕ್ಷ್ಮಣ್‌ ಜತೆಗೂಡಿ ಆಸ್ಟ್ರೇಲಿಯನ್ನರ ಗರ್ವಭಂಗ ಮಾಡಿದ ದ್ರಾವಿಡ್‌ ರ ಬ್ಯಾಟಿಂಗ್‌ ವೈಖರಿ ಇಂದಿಗೂ ಸವಿ ಸವಿ ನೆನಪಾಗಿಯೇ ಉಳಿದಿದೆ.
ಹೌದು, ಡಿಟರ್ಮಿನೇಷನ್‌, ಡೆಡಿಕೇಷನ್‌ ಆಂಡ್‌ ಡಿಸಿಪ್ಲೀನ್‌ಗೆ ಇನ್ನೊಂದು ಹೆಸರು ರಾಹುಲ್‌ ದ್ರಾವಿಡ್‌. ಹೊಸತನವನ್ನ ಕಲಿಯುವ ಹಂಬಲಕ್ಕಾಗಿ ಎಲ್ಲವನ್ನೂ ತ್ಯಾಗಮಾಡುವ ಶ್ರಮಜೀವಿ. ನೆಟ್ಸ್ ನಲ್ಲಿ ಸುಸ್ತಾಗುವಷ್ಟು ಬ್ಯಾಟಿಂಗ್‌ ಅಭ್ಯಾಸ ನಡೆಸಿದ್ರೂ ದ್ರಾವಿಡ್‌ಗೆ ಮಾತ್ರ ಸಮಾಧಾನವಿರುತ್ತಿರಲಿಲ್ಲ. ತನ್ನ ಬ್ಯಾಟಿಂಗ್‌ನಲ್ಲಿ ಕಲಾತ್ಮಕತೆಯನ್ನ ಮೈಗೂಡಿಸಿಕೊಂಡ ರಾಹುಲ್‌ ಬ್ಯಾಟಿಂಗ್‌ ಅನ್ನು ನೋಡುವುದೇ ಒಂದು ಸೊಗಸು.
ನಿಜ, ಬೆಂಗಳೂರಿನ ಇಂದಿರಾ ನಗರದ ಹುಡುಗ ಮುಂದೊಂದು ದಿನ ವಿಶ್ವದ ಶ್ರೇಷ್ಠ ಕ್ರಿಕೆಟಿನಾಗುತ್ತಾನೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಯಾವುದೇ ಕ್ರೀಡೆಯ ಹಿನ್ನಲೆ ಇಲ್ಲದ ಕುಟುಂಬದಿಂದ ಬಂದಿರುವ ದ್ರಾವಿಡ್‌ ಅದೇಗೇ ಕ್ರಿಕೆಟ್‌ ಮೇಲೆ ಆಸಕ್ತಿ ಬೆಳೆಯಿತ್ತೊ ಗೊತ್ತಿಲ್ಲ. ಮೊದ ಮೊದಲು ಹಾಕಿ ಆಡುತ್ತಿದ್ದ ದ್ರಾವಿಡ್ ಬಳಿಕ ಕ್ರಿಕೆಟ್‌ ಆಗಾಧವಾಗಿ ಪ್ರೀತಿಸಿದ್ರು .ಇಂದಿರಾ ನಗರದಿಂದ ಚಿನ್ನಸ್ವಾಮಿ ಕ್ರೀಡಾಂಣ, ಚಿನ್ನಸ್ವಾಮಿಯಿಂದ ಸೇಂಟ್‌ ಜೊಸೇಫ್‌ ಸ್ಕೂಲ್‌ ಹೀಗೆ ಬಿಟಿಎಸ್‌ ಬಸ್‌ನಲ್ಲೇ ಓಡಾಡುತ್ತಿದ್ದ ದ್ರಾವಿಡ್‌ ಅದ್ಭುತ ಕ್ರಿಕೆಟಿಗನಾಗಿ ರೂಪುಗೊಂಡಿದ್ದು ಎಂಥವರನ್ನ ಬೆರಗುಗೊಳಿಸುತ್ತೆ.
ಇನ್ನು, ಕ್ಲಾಸ್‌, ಕಮೀಟ್‌ಮೆಂಟ್‌ ಆಂಡ್‌ ಕನ್ಷಿಸ್ಟೆನ್ಸಿ ಈ ಮೂರು ಪದಗಳು ಸೇರಿಕೊಂಡಾಗ ದ್ರಾವಿಡ್‌ ಹೆಸರಿನ ಮುಂದೆ ದಿ ಗ್ರೇಟ್‌ ವಾಲ್‌ ಅನ್ನೋ ಬಿರುದು ಅಂಟಿಕೊಳ್ಳುತ್ತೆ. ಯಾಕಂದ್ರೆ ಕ್ರಿಕೆಟ್‌ನ ಎಲ್ಲಾ ಪಾಠಗಳನ್ನ ರಾಹುಲ್‌ ದ್ರಾವಿಡ್‌ ಅವ್ರ ಬ್ಯಾಟಿಂಗ್‌ ಮತ್ತು ವ್ಯಕ್ತಿತ್ವದಲ್ಲಿ ಕಾಣಬಹುದು. ದ್ರಾವಿಡ್‌ ಬ್ಯಾಟ್‌ನಿಂದ ಚಿಮ್ಮುವ ಚೆಂಡು ನೂಲಿನಿಂದ ಗೆರೆ ಎಳೆಯುವಂತೆ ಬೌಂಡರಿ ಗೆರೆ ದಾಟುತ್ತೆ. ಆಗ ಎದುರಾಳಿ ತಂಡದ ಆಟಗಾರರಿಗೆ ದ್ರಾವಿಡ್‌ ರ ಬ್ಯಾಟಿಂಗ್‌ ಕಲಾತ್ಮಕತೆಯನ್ನ ಕಣ್ಣುತುಂಬಿಕೊಳ್ಳುವ ಬಯಕೆ ಬಂದ್ರೂ ಅಚ್ಚರಿ ಏನಿಲ್ಲ.
ನಿಜ, ದ್ರಾವಿಡ್‌ ತಂಡಕ್ಕಾಗಿ ಎಲ್ಲವನ್ನೂ ಸಮರ್ಪನೆ ಮಾಡಿಕೊಳ್ಳುವ ಸಹ ಹೃದಯಿ. 2003ರ ವಿಶ್ವಕಪ್‌ನಲ್ಲಿ ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನೂ ನಿಭಾಯಿಸಿದ್ರು. ಬಳಿಕ ನಾಯಕನಾಗಿಯೂ ತಂಡವನ್ನ ಸಮರ್ಥವಾಗಿ ಮುನ್ನಡೆಸಿದ್ರು. ಆದ್ರೆ 2007ರ ವಿಶ್ವಕಪ್‌ನ ಹೀನಾಯ ಸೋಲನ್ನ ಮಾತ್ರ ದ್ರಾವಿಡ್‌ ಮರೆಯೋದು ತುಂಬಾನೇ ಕಷ್ಟ, ಇದ್ರಿಂದ ದ್ರಾವಿಡ್ ನಾಯಕತ್ವಕ್ಕೂ ರಾಜಿನಾಮೆ ನೀಡಿದ್ರು.
ನಂತ್ರ ಆಸ್ಟ್ರೇಲಿಯಾ ವಿರುದ್ಧ ಕಳಪೆ ಪ್ರದರ್ಶನ ನೀಡಿದಾಗ ದ್ರಾವಿಡ್‌ ಗೆ ಟೀಮ್ ಇಂಡಿಯಾದ ಏಕದಿನ ತಂಡ ಬಾಗಿಲು ಮುಚ್ಚಿತ್ತು. ಇದೀಗ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾದಾಗ ಎಲ್ರೂ ಅಚ್ಚರಿಗೊಂಡ್ರು. ಆದ್ರೆ ದ್ರಾವಿಡ್‌ಗೆ ಮಾತ್ರ ಆಶ್ಚರ್ಯವಾಗಲಿಲ್ಲ. ಯಾಕಂದ್ರೆ ಬಿಸಿಸಿಐ ತನಗೆ ಕೊನೆಯ ಏಕದಿನ ಪಂದ್ಯವನ್ನ ಆಡುವ ಅವಕಾಶ ಕಲ್ಪಿಸಿದೆ ಎಂಬುದು ದ್ರಾವಿಡ್‌ಗೆ ಚೆನ್ನಾಗಿ ಗೊತ್ತು.
ಅದೇನೇ ಇದ್ರೂ ಟೀಮ್ ಇಂಡಿಯಾದ ಟೆಸ್ಟ್‌ ತಂಡಕ್ಕೆ ಮಾತ್ರ ದ್ರಾವಿಡ್‌ ಇವತ್ತಿಗೂ ಅಪತ್ಭಾಂದವ. ಈಗಾಗಲೇ ಕ್ರಿಕೆಟ್‌ ಬದುಕಿನ ಮುಸ್ಸಂಜೆಯಲ್ಲಿರುವಾಗಲೂ ದ್ರಾವಿಡ್‌ರ ರನ್‌ ದಾಹ ಬತ್ತಿಲ್ಲ. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲೂ ಟೀಮ್ ಇಂಡಿಯಾದ ಮರ್ಯಾದೆ ಉಳಿಸಿದ್ದು ದಿ ಗ್ರೇಟ್‌ ವಾಲ್‌.
ಈಗಾಗಲೇ ಟೆಸ್ಟ್‌ ಮತ್ತು ಏಕದಿನ ಪಂದ್ಯಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ರನ್‌ ಪೂರೈಸಿದ ಹೆಗ್ಗಳಿಕೆ ದ್ರಾವಿಡ್‌ ಅವ್ರದ್ದು. ಸದ್ಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ದಾಖಲಿಸಿದ ವಿಶ್ವದ ನಾಲ್ಕನೇ ಆಟಗಾರ ಹಾಗೂ ಟೆಸ್ಟ್‌ ಕ್ರಿಕೆಟ್‌ ನಲ್ಲಿ ಗರಿಷ್ಠ ರನ್‌ ಕಲೆ ಹಾಕಿದ ವಿಶ್ವದ ಎರಡನೇ ಆಟಗಾರನೂ ಹೌದು. ಜತೆಗೆ ಗರಿಷ್ಠ ಕ್ಯಾಚ್‌ ಹಿಡಿದ ಹಿರಿಮೆ ಸಹ ದ್ರಾವಿಡ್‌ಗೆ ಸಲ್ಲುತ್ತೆ.
ಈ ನಡುವೆ, ದ್ರಾವಿಡ್‌ ಟ್ವೆಂಟಿ ಟ್ವೆಂಟಿ ಕ್ರಿಕೆಟ್‌ ಯುವಕರ ಆಟ ಅಂತ ದೂರ ಸರಿದ್ರು. ಆದ್ರೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮಿಂಚು ಹರಿಸಿದ ದ್ರಾವಿಡ್‌ ಟ್ವೆಂಟಿ ಟ್ವೆಂಟಿ ಪಂದ್ಯ ಕೇವಲ ಹೊಡಿ ಬಡಿ ಆಟವಲ್ಲ. ಅನುಭವ ಮತ್ತು ತಾಂತ್ರಿಕತೆಯೂ ಬೇಕಾಗುತ್ತೆ ಎಂಬುದನ್ನ ಸಾಬೀತುಪಡಿಸಿದ್ರು. ಅಷ್ಟೇ ಅಲ್ಲ, ಇಂಗ್ಲೆಂಡ್‌ ವಿರುದ್ಧ ಚೊಚ್ಚಲ ಹಾಗೂ ಕೊನೆಯ ಟ್ವೆಂಟಿ ಟ್ವೆಂಟಿ ಪಂದ್ಯವನ್ನೂ ಆಡಿದ್ರು. ಜತೆಗೆ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿ ತನ್ನ ಬ್ಯಾಟಿಂಗ್‌ ಝಲಕನ್ನು ಕ್ರಿಕೆಟ್‌ ಜಗತ್ತಿಗೆ ಪರಿಚಯಿಸಿದ್ರು.
ಹಾಗಂತ ರಾಹುಲ್‌ ದ್ರಾವಿಡ್‌ ಏಕದಿನ ಪಂದ್ಯಗಳಲ್ಲಿ ಮಾತ್ರ ಮಿಂಚಲಿಲ್ಲ. ಮೂರು ವರ್ಷಗಳ ನಂತ್ರ ಬ್ಲ್ಯೂ ಜೆರ್ಸಿಯಲ್ಲಿ ಕಾಣಿಸಿಕೊಂಡ್ರೂ ದ್ರಾವಿಡ್‌ ಬ್ಯಾಟಿಂಗ್‌ನಲ್ಲಿ ಮಾತ್ರ ಅದೇ ಕಲಾತ್ಮಕತೆ ಕಾಣುತ್ತಿತ್ತು. ಆದ್ರೆದೊಡ್ಡಪೇರಿಸಲುಮಾತ್ರ ಜಾಮಿಗೆಸಾಧ್ಯವಾಗಲಿಲ್ಲ. ಹಾಗೇ ಸರಣಿ ಸೋಲಿನೊಂದಿಗೆ ರಾಹುಲ್‌ ತನ್ನ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಬೇಕಾಗಿದೆ.
ಒಟ್ಟಿನಲ್ಲಿ ರಾಹು ಲ್‌ ದ್ರಾವಿಡ್‌ ಅನ್ನೋ ಬ್ಯಾಟಿಂಗ್‌ ಕಲಾವಿದನನ್ನು ಇನ್ನು ಮುಂದೆ ಅಂಗಣದಲ್ಲಿ ಬ್ಲ್ಯೂ ಜೆರ್ಸಿಯಲ್ಲಿ ನೋಡಲು ಸಾಧ್ಯವಿಲ್ಲ. ಆದ್ರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇನ್ನೂ ಎರಡು ವರ್ಷಗಳ ಕಾಲ ಆಡುವ ಸಾಮರ್ಥ್ಯ ಹೊಂದಿದ್ರೂ ಬಿಸಿಸಿಐ ಇದಕ್ಕೆ ಅವಕಾಶ ಕಲ್ಪಿಸುತ್ತಾ ಅನ್ನೋದು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.
ಏನೇ ಆದ್ರೂ ಸಹ ಆಟಗಾರರ ನೆಚ್ಚಿನ ಜಾಮಿಯಾಗಿರುವ ರಾಹುಲ್‌ ದ್ರಾವಿಡ್‌ ತನ್ನ ವರ್ಣ ರಂಜಿತ ಏಕದಿನ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳುತ್ತಿದ್ದಾರೆ. ಕಳೆದ 15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿನಲ್ಲಿ ದ್ರಾವಿಡ್‌ ಹೆಸರಿಗೆ ಎಲ್ಲೂ ಕಪ್ಪುಚುಕ್ಕೆ ಅಂಟಿಕೊಂಡಿಲ್ಲ. ಅಷ್ಟರ ಮಟ್ಟಿಗೆ ರಾಹುಲ್‌ ದ್ರಾವಿಡ್‌ ಫರ್ಪೆಕ್ಟ್‌. ತನ್ನ 38ರ ಹರೆಯದಲ್ಲೂ ಕ್ಲಾಸ್‌ಗೂ ಸೈ, ಮಾಸ್‌ಗೂ ಜೈ ಅನ್ನೋ ದ್ರಾವಿಡ್‌ ರಂತಹ ಆಟಗಾರನನ್ನು ವಿಶ್ವ ಕ್ರಿಕೆಟ್‌ಗೆ ಕೊಡುಗೆಯಾಗಿ ನೀಡಿದ ಹೆಮ್ಮೆ ಕರ್ನಾಟಕದ್ದು.
ಸನತ್ ರೈ

No comments:

Post a Comment