Saturday, February 18, 2012

ಬದಲಾಗಲಿ.... ಈ ಸಮಾಜ... ನೀ ಮೊದಲು ಬದಲಾಗು...-1

(ಸ್ವಗತ
ಅಮ್ಮಂಗೆ ಆ ಡಾಕ್ಟ್ರು ಹೇಳಿದ್ ಮಾತ್ರೆ ತಗೊಂಡ್ಬೇಕು.. ಮನೆಗೆ ಸ್ಪಲ್ಪ ಸಾಮಾನ್ ತೊಗೋಂಡು ಹೋಗ್ಬೇಕು.. ಆದ್ರೆ .. ಛೇ.. ಏನ್ಮಾಡ್ಲಿ.. ( ಬಾಟಲಿ ಒದೆಯೋ ಶಾಟ್ )
ನಾನೂ ಆಗ್ಲೇ ಚೆನ್ನಾಗಿ ಓದಿದ್ರೆ.. ಒಂದು ಗೌರ್ಮೆಂಟ್ ಕೆಲ್ನಾ ಸಿಕ್ತಿದ್ರೆ.. ಕೈ ತುಂಬಾ ಸಂಬ್ಳ, ತಿರುಗೋಕೆ ಕಾರು, ಮಜ್ವಾಗಿರ್ತಿತ್ತು. ಆದ್ರೆ ಏನ್ಮಾಡೋದು ಅಣೆಬರನೇ ಸರಿ ಇಲ್ಲಾ ಅನ್ಸುತ್ತೆ..
ಇಲ್ಲ.. ಈ ಥರ ಸುಮ್ನೆ ಕೂತ್ರೆ ಅಮ್ಮಂಗೆ ಔಷ್ದಿ ಬರಲ್ಲ. . ಮನೆಗೆ ಅಕ್ಕಿ ಬೇಳೆ ಬರಲ್ಲ.. ಇಲ್ಲ ನಾನು ಏನಾದ್ರೂ ಮಾಡ್ಬೇಕು.. ಏನಾದ್ರೂ ಕೆಲ್ಸ ಮಾಡಬೇಕು.. ಚೆನ್ನಾಗಿ ದುಡಿಬೇಕು.. ಹಾ...////
ಬದಲಾಗಲಿ.... ಈ ಸಮಾಜ... ನೀ ಮೊದಲು ಬದಲಾಗು


ಹೆತ್ತೊಡಲಿಗೆ ನೆರವಾಗಬೇಕು, ಹಸಿದ ಹೊಟ್ಟೆ ಹೊರೆಯಬೇಕು.. ಖಾಯಿಲೆ ಕಸಾಲೆಗಳನ್ನು ನಿಭಾಯಿಸುತ್ತಾ ನಂಬಿದವರಿಗೆ ಆಸರೆಯಾಗಬೇಕು.. ಆದ್ರೆ ಇದಕ್ಕೊಂದು ಕೆಲಸ ಬೇಕು. . ಆದ್ರೆ ಇದಕ್ಕೆ ಬೇಕಾದ ವಿದ್ಯೆಯೂ ಇಲ್ಲ, ನಮ್ಮನ್ನ ಹೇಳುವವರು ಕೇಳುವವರಿಲ್ಲ.. ಇದು ಈಗಿನ ಅದೆಷ್ಟೋ ಯುವ ಮನಸ್ಸುಗಳ ಕೊರಗು..

ಯಾವುದೋ ಕಾರಣಕ್ಕೆ ಓದೋದಿಕ್ಕೆ ಸಾಧ್ಯವಾಗೋದಿಲ್ಲ. . ಉತ್ತಮ ಬದುಕು ಕಾಣಲು ಮನೆಯಲ್ಲಿ ಪೂರಕ ವಾತಾವರಣವಿಲ್ಲ. ಇದಿಷ್ಟಕ್ಕೆ ಅರಳಬೇಕಾದ ಮನಸ್ಸುಗಳು ಮುದುಡುತ್ತವೆ.. ತಾನು ಯಾವುದಕ್ಕೂ ಸುಖವಿಲ್ಲ, ತಾನು ಯಾರಿಗೂ ಬೇಕಾಗಿಲ್ಲ. ತಾನಿಂದ ಏನೂ ಆಗಬೇಕಿಲ್ಲ ಅನ್ನೋ ಮನೋಭಾವನೆಯಲ್ಲೇ ತಮ್ಮ ಯವ್ವನವನ್ನ ಕಳೆದವರು ಅದೆಷ್ಟೋ ಮಂದಿ.. ಇನ್ನು ಕೆಲವರಿಗೆ ತಾವು ಓದಿಲ್ಲ, ಒಳ್ಳೇ ಕೆಲಸ ಸಿಕ್ಕೋದಿಲ್ಲ ಅಂತ ಬೇಸರ. ಮತ್ತೆ ಕೆಲವರು ನಾನು ಹಾಗಾಗಿದ್ರೆ, ಹೀಗಾಗಿದ್ರೆ ಅನ್ನೋ ಕಲ್ಪನೆಗಳಲ್ಲೇ ಮುಳುಗಿ ರಸ್ತೆಗಳಲ್ಲಿ, ಪಾರ್ಕ್ ಗಳಲ್ಲಿ ಅಂಡಲೆದಾಡಿ ಕೊನೆಗೆ ನಿದ್ದೆಯಲ್ಲೇ ತಮ್ಮ ಆಯಸ್ಸು ಮುಗಿಸುವವರಿಗೇನೂ ಕಮ್ಮಿ ಇಲ್ಲ..

ಹೌದು, ಭವಿಷ್ಯವನ್ನ ಬದಲಾಯಿಸಲು ಸಾಧ್ಯವಿಲ್ಲ. ಆದ್ರೆ ಹವ್ಯಾಸವನ್ನ ಬದಲಾಯಿಸಬಹುದು.. ಹವ್ಯಾಸ ಬದಲಾದ್ರೆ ಭವಿಷ್ಯ ಕೂಡ ಬದಲಾಗುತ್ತೆ. ಇದಕ್ಕೆ ಅನ್ನೋದು ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ ಅಂತ. ಆದ್ರೆ ಇಂದಿನ ಯುವ ಜನಾಂಗ ಇದ್ರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹೇಗೋ ಜೀವನ ಸಾಗಿಸಿದ್ರೆ ಸಾಕು.. ಬೇರೆಯವರ ಸಮಸ್ಯೆಗಳನ್ನ ಕಟ್ಟಿಕೊಂಡು ನಮಗೆ ಏನಾಗಬೇಕು ಅನ್ನೋ ಸ್ವಾರ್ಥ ಬುದ್ದಿಯೇ ಜಾಸ್ತಿಯಾಗುತ್ತಿದೆ.

ಒಂದಂತೂ ನಿಜ, ಇಂದಿನ ಯುವ ಸಮುದಾಯ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡು ಒದ್ದಾಡ್ತಾ ಇದೆ. ಯಾರು ಯಾರಿಗೂ ಬುದ್ಧಿ ಹೇಳುವ ಹಾಗಿಲ್ಲ. ಎಲ್ರೂ ತಪ್ಪಿತಸ್ಥರೇ. ಇದ್ರಿಂದ ಸಮಾಜ ಉದ್ದಾರವಾಗುತ್ತೆ ಅನ್ನೋದು ಮುರ್ಖತನವೇ ಸರಿ. ಸ್ವಾಮಿ ವಿವೇಕಾನಂದ – ಗಾಂಧೀಜಿಯವರ ತತ್ವ ಸಿದ್ಧಾಂತಗಳು ನಮ್ಮ ಯುವ ಜನತೆಗೆ ಬೇಕಾಗಿಲ್ಲ. ಬದಲಾಗಿ ಸಿನಿಮಾ ತಾರೆಯರು, ಕ್ರಿಕೆಟಿಗರು ಯುವ ಜನತೆಗೆ ಆದರ್ಶಪ್ರಾಯರಾಗಿದ್ದಾರೆ. ಹಾಗಂತ ಇದು ತಪ್ಪು ಅಂತಲೂ ಹೇಳುವ ಹಾಗಿಲ್ಲ. ಆದ್ರೆ ಅತೀಯಾದ ಅಭಿಮಾನ ಕೊನೆಗೆ ಮುಳುವಾಗುತ್ತೆ. ಸ್ವಾರ್ಥ ಸಮಾಜದಲ್ಲಿ ನಮ್ಮನ್ನು ನಾವೇ ಮರೆತುಬಿಡುತ್ತೇವೆ.

ಅಂದ ಹಾಗೇ, ಸಮಾಜ ನಂಬಿಕೆ ಮೇಲೆ ನಿಂತಿದೆ ಆದ್ರೆ ಅಲ್ಲಿ ನಂಬಿಕೆಯೇ ಇಲ್ಲ ಅಂದ ಮೇಲೆ ಯಾವುದನ್ನ ನಿರೀಕ್ಷೆ ಮಾಡುವಂತಿಲ್ಲ. ವೈರಾಗ್ಯ, ಮತ್ಸರ, ಕಲಹದಿಂದಾಗಿ ಸಮಾಜದಲ್ಲಿ ವಿದ್ವಂಸಕ ಘಟನೆಗಳು ನಡೀತಾ ಇರ್ತಾವೆ. ಇನ್ನೊಂದೆಡೆ ರಾಜಕೀಯ ಮತ್ತು ರಾಜಕಾರಣಿಗಳ ಸ್ವಾರ್ಥದಿಂದಲೂ ಯುವ ಜನಾಂಗ ಅಲ್ಲೋಲಕಲ್ಲೋಲವಾಗುತ್ತಿದೆ.

ಇನ್ನು, ಸ್ವತಂತ್ರವಾಗಿ ಬದುಕುವ ಹಕ್ಕು ನಮ್ಮಗಿದ್ರೂ ನೆಮ್ಮದಿ ಇಲ್ಲ.. ಭದ್ರತೆನೂ ಇಲ್ಲ. ನೆರಳು ಕೂಡ ಇಲ್ಲ. ಒಗ್ಗಟ್ಟಂತೂ ಇಲ್ಲವೇ ಇಲ್ಲ. ಕೆಲಸ ಮುಗಿದ ಮೇಲೆ ಅವನ್ಯಾರೋ, ನಾನ್ಯಾರೋ ಅನ್ನೋ ಪರಿಸ್ಥಿತಿ ಇದೆ. ಪರಸ್ಪರ ಅಪನಂಬಿಕೆಯಿಂದಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆಗೆ ನಾವು ಸಿಲುಕಿದ್ದೇವೆ. ಇದ್ರಿಂದ ನಾವು ಹೊರಬ ರಬೇಕು... ಸಮಾಜಕ್ಕೆ ಬೇಲಿಯ ಹಾಗೇ ಭದ್ರತೆ ನೀಡಬೇಕು.. ಮರಗಳ ಹಾಗೇ ನೆರಳು ನೀಡಬೇಕು..ಸಾಲಕ್ಕಿಗಳಂತೆ ಒಗ್ಗಟ್ಟಿನಿಂದಿರಬೇಕು..ಆಗ ಸಮೃದ್ಧ ಸಮಾಜವನ್ನ ಕಟ್ಟಬಹುದು. ಆದ್ರೆ ಇದಕ್ಕೆಲ್ಲಾ ನಾವು ಮನಸ್ಸು ಮಾಡಬೇಕು ಅಷ್ಟೇ..
ನಿಜ, ಕಾಲೇಜು ಶಿಕ್ಷಣದ ಜೊತೆ ಜೀವನ ಶಿಕ್ಷಣ ನೀಡಬೇಕು..ಕಾಲೇಜಿನಲ್ಲಿರುವ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಮಾದರಿಗಳಾಗಬೇಕು..ಸಿರಿವಂತ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಕೂಡ ಬಡ ರೈತನ ಮಕ್ಕಳ ಜೊತೆ ಮುಕ್ತವಾಗಿ ಬೆರೆಯುವಂತಾಗಬೇಕು.ಸಮಾಜದ ಮೇಲು ಕೀಳು ಹೊಡೆದಟ್ಟಿ ಸಾಮರಸ್ಯದ ಬೀಜ ನೆಡಬೇಕು. ಆಗ ಮಾತ್ರ ಯುವಕ ಯುವತಿಯರ ಕಣ್ಣಲ್ಲಿ ಸ್ಪಷ್ಟ ಗುರಿ ಮೂಡುತ್ತೆ.

ನಾವೆಲ್ಲರೂ ಒಂದೇ ಎಂಬ ಭಾವನೆಯನ್ನ ಮೈಗೂಡಿಸಿಕೊಂಡಾಗ ವಿವೇಕಾನಂದರು ಯುವಕರ ಮೇಲಿಟ್ಟ ವಿಶ್ವಾಸಕ್ಕೆ ಅರ್ಥ ಬರುತ್ತೆ. ಗಾಂಧೀಜಿಯ ರಾಮ ರಾಜ್ಯದ ಕನಸು ನನಸಾಗುತ್ತೆ. ಆದ್ರೂ ಇವೆಲ್ಲಾ ಆಗುತ್ತಾ.. ಆಗುತ್ತೆ. ಬದಲಾಗುವುದಾದ್ರೆ ಈ ಲೋಕ, ನೀ ಬದಲಾದ್ರೆ, ಸರಿಯಾಗೋದು ಈ ಸಮಾಜ, ನೀ ಮೊದಲಾದ್ರೆ...ಬನ್ನಿ ಬದಲಾಗೋಣ..
ಕೆಟ್ಟದ್ದನ್ನು ಕೇಳಬೇಡ.. ಕೆಟ್ಟದ್ದನ್ನ ನೋಡಬೇಡ... ಕೆಟ್ಟದ್ದನ್ನ ನುಡಿಯಬೇಡ....

ಸನತ್ ರೈ

No comments:

Post a Comment