Saturday, February 18, 2012

ಬದಲಾಗಲಿ.... ಈ ಸಮಾಜ... ನೀ ಮೊದಲು ಬದಲಾಗು...

ಬದುಕಿನ ಬಗ್ಗೆ ನಿಖರವಾದ ಗುರಿಯನ್ನ ಹೊಂದಿರಬೇಕು. ಜೀವನದಲ್ಲಿ ನಾನು ಸರಿಯಾದ ಮಾರ್ಗದಲ್ಲಿ ಮುನ್ನಡೆಯುತ್ತಿದ್ದೇನೆ ಅನ್ನೋ ಪರಿಜ್ಞಾನವನ್ನ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತೆ. ದೇಶ ಪ್ರೇಮವೂ ಬೆಳೆಯುತ್ತೆ..
ಆದ್ರೆ, ಎತ್ತ ಸಾಗುತ್ತಿದೆ ನಮ್ಮ ಯುವ ಸಮುದಾಯ. ಈ ಪ್ರಶ್ನೆಗೆ ನಿರ್ಧಿಷ್ಟವಾದ ಉತ್ತರ ಮಾತ್ರ ಸಿಗಲ್ಲ. ಯಾಕಂದ್ರೆ ಇವತ್ತಿನ ಯುವ ಜನತೆಗೆ ಬದುಕು ಅನ್ನೋದು ದಿಕ್ಸೂಚಿ ಇಲ್ಲದ ಹಡಗಿನಂತಾಗಿದೆ. ಜಸ್ಟ್‌ ಲೈಫ್‌ ಅನ್ನು ಎಂಜಾಯ್‌ ಮಾಡಬೇಕು ಅಷ್ಟೇ.ಮೋಜು, ಮಸ್ತಿ ಅಂತ ಬಿಂದಾಸ್‌ ಲೈಫ್‌ಗೆ ಒಗ್ಗಿಕೊಂಡಿರುವ ಯುವ ಸಮುದಾಯ ಹಾದಿ ತಪ್ಪುತ್ತಿದೆ.
ಹೌದು, ಸಿರಿತನದ ಆಮಲಿನಲ್ಲಿ ಎಲ್ಲವನ್ನ ಮರೆಯುತ್ತಾರೆ. ದುಡ್ಡಿಗಾಗಿ ಕೊಲೆ ಮಾಡುವುದಕ್ಕೂ ಹೇಸುವುದಿಲ್ಲ. ಅಣ್ಣ –ತಮ್ಮ, ಅಕ್ಕ- ತಂಗಿ, ಅಪ್ಪ-ಅಮ್ಮ, ಸ್ನೇಹ ಅನ್ನೋ ಸಂಬಂಧಗಳು ಕಿಮ್ಮತ್ತು ಕಳೆದುಕೊಳ್ತಾ ಇವೆ. ಹೆಸರು, ಪ್ರತಿಷ್ಠೆ, ದುಡ್ಡಿಗೋಸ್ಕರ ರಕ್ತ ಹರಿಸುತ್ತಾರೆ . ಪರಿಣಾಮ ಪ್ರತಿ ದಿನ ನೂರಾರು ಯುವಕ, ಯುವತಿಯರು ಅಪರಾಧಿಗಳಾಗುತ್ತಿದ್ದಾರೆ. ಬದುಕಿನಲ್ಲಿ ಕಟ್ಟಿಕೊಂಡ ಸುಂದರ ಕನಸುಗಳಿಗೆ ತಾವಾಗಿಯೇ ಕೊಳ್ಳಿ ಇಟ್ಟುಕೊಳ್ಳುತ್ತಾರೆ.
ಅಷ್ಟೇ ಅಲ್ಲ, ಗೊತ್ತು ಗೊತ್ತಿದ್ರೂ ನಮ್ಮ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಮಾತ್ರ ದುರಂತವೇ ಸರಿ. ಅದು ಎಷ್ಟರ ಮಟ್ಟಿಗೆ ಅಂದ್ರೆ ಶಾಲಾ - ಕಾಲೇಜ್‌ ಮಟ್ಟದಲ್ಲೇ ಡ್ರಗ್‌ ಮಾಫಿಯಾದ ಸುಳಿಯಲ್ಲಿ ಸಿಲುಕಿಕೊಳ್ತಾರೆ. ಸಿಗರೇಟ್‌, ಗುಟ್ಕಾ, ಆಫೀಮ್‌, ಗಾಂಜಾ, ಬ್ರೌನ್‌ ಶುಗರ್‌ ಮೊದಲಾದ ಚಟಕ್ಕೆ ಬಿದ್ದು ನರಳಾಡ್ತಾರೆ. ಹಾಗೇ ಡ್ರಿಂಗ್ಸ್‌, ರೇವಾ ಪಾರ್ಟಿ, ರೈನ್‌ ಡಾನ್ಸ್‌ ಅಂತ ಕುಣಿದು ಕುಪ್ಪಳಿಸುತ್ತಾರೆ. ಅಂಬಿಗನಿಲ್ಲದ ದೋಣಿಯಂತೆ ಜೀವನ ಸಾಗಿಸುತ್ತಿರುವ ಯುವ ಜನತೆಗೆ ಸಮಾಜ ಹೇಗಿದ್ರೆ ಏನಂತೆ... ತಾವು ಮಾತ್ರ ಹಾಯಾಗಿರಬೇಕು ಅನ್ನೋ ಮನೋಭಾವನೆ ಬೆಳೆದುಬಿಟ್ಟಿದೆ.
ಹೀಗೆ ಅಡ್ಡ ದಾರಿ ಹಿಡಿಯುವ ಯುವ ಜನಾಂಗಕ್ಕೆ ಒಂದಲ್ಲ ಒಂದು ದಿನ ಜ್ಞಾನದೋಯವಾಗುತ್ತೆ. ಆದ್ರೆ ಆಗ ಕಾಲ ಮಿಂಚಿ ಹೋಗಿರುತ್ತೆ. ಮಾಡಿರೋದು ತಪ್ಪು... ಸಮಾಜದಲ್ಲಿ ಬದುಕೋದು ಹೇಗೆ ಅಂತ ಯೋಚನೆ ಮಾಡ್ತಾರೆ. ಜತೆಗೆ ಸಮಾಜ ಕೆಟ್ಟ ದೃಷ್ಟಿಯಿಂದ ನೋಡ್ತಾ ಇದ್ದಾಗ ಸಹಜವಾಗಿ ಖಿನ್ನತೆಗೆ ಒಳಪಡುತ್ತಾರೆ. ಅಷ್ಟೇ ಅಲ್ಲ, ಆರ್ಥಿಕ ಸಂಕಷ್ಟ, ಪ್ರೀತಿ- ವಿಶ್ವಾಸದ ಕೊರತೆಯಿಂದ ಹತಾಶೆಗೆ ಒಳಪಡುತ್ತಾರೆ. ತಮಗೆ ಬದುಕೇ ಬೇಡ ಅಂತ ತೀರ್ಮಾನ ಕೂಡ ಮಾಡ್ತಾರೆ. ಆಗ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರ್ತಾರೆ.
ಅಂದ ಹಾಗೇ, ಎಲ್ಲಾ ಸಮಸ್ಯೆಗಳಿಗೆ ಸಾವೇ ಪರಿಹಾರವಲ್ಲ. ಎಷ್ಟೇ ತಪ್ಪು ಮಾಡಿದ್ರೂ, ಹಾದಿ ತಪ್ಪಿದ್ರೂ ಸಮಾಜದಲ್ಲಿ ಬದುಕಲು ಅವಕಾಶವಿದೆ. ಆದ್ರೆ ಇದಕ್ಕೆಲ್ಲಾ ತಾಳ್ಮೆ ಬೇಕು. ಧೈರ್ಯಬೇಕು.. ಆತ್ಮವಿಶ್ವಾಸಬೇಕು. ಸಮಾಜದಲ್ಲಿ ಬೇರೆಯವರಿಗೆ ಮಾದರಿಯಾಗಿ ಜೀವನ ಸಾಗಿಸಬೇಕು ಅನ್ನೋ ಛಲವನ್ನ ಬೆಳೆಸಿಕೊಳ್ಳಬೇಕು. ಆದ್ರೆ, ಅದು ಕೆಲವು ದಿನಗಳಿಗೆ ಸೀಮಿತವಾಗಿರಬಹುದು. ಬದಲಾಗಿ ದಿನಚರಿಯಾಗಿ ಮುಂದುವರಿಸಿಕೊಂಡು ಹೋಗಬೇಕು. ಆಗ ಮಾತ್ರ ಯಶ ಸಾಧಿಸಬಹುದು..
ಹೌದು, ಈ ಯುವತಿಯದ್ದು ಸಿನಿಮಾ ಕಥೆಯಲ್ಲ. ನಿಜ ಜೀವನದಲ್ಲಿ ನಡೆದ ನೈಜ ಘಟನೆ... ಅನಾಥೆಯಾಗಿ ಜನಿಸಿದ ಈ ಹುಡುಗಿಗೆ ದತ್ತು ಪುತ್ರಿಯಾಗಿ ಅಪ್ಪ-ಅಮ್ಮನ ಪ್ರೀತಿ ಸಿಕ್ಕಿತ್ತು. ಆದ್ರೆ ಅತೀಯಾದ ಪ್ರೀತಿಯೇ ಅವಳ ಬದುಕಿನ ದಿಕ್ಕನ್ನು ತಪ್ಪಿಸಿತ್ತು. ಸ್ಮೊಕಿಂಗ್‌ , ಡ್ರಿಂಕ್ಸ್‌ ಚಟವನ್ನ ಬೆಳೆಸಿಕೊಂಡ ಈ ಹುಡುಗಿ ತನ್ನ ಅಪ್ಪನಿಂದಲೇ ಆತ್ಯಾಚಾರಕ್ಕೆ ಬಲಿಯಾದಳು. ಅಲ್ಲಿಂದ ಮುಂದಕ್ಕೆ ಅವಳ ಬದುಕು ನರಕವಾಯ್ತು.
ಅಪ್ಪನ ಕಿರುಕುಳ, ದುಶ್ಚಟಗಳಿಗೆ ಬಲಿಯಾದ ಈ ಹುಡುಗಿ ಮನೆ ಹೊಸ್ತಿಲನ್ನ ದಾಟಿ ಬಂದಳು. ಹೀಗೆ ಬೀದಿಗೆ ಬಂದ ಹುಡುಗಿ ಪ್ರೀತಿಯ ಬಲೆಯೊಳಗೆ ಸಿಲುಕಿದಳು. ಪ್ರೀತಿಸಿದ ಹುಡುಗ ತನಗೆ ಬಾಳು ಕೊಡ್ತಾನೆ ಅಂತ ನಂಬಿಬಿಟ್ಟಳು. ಆದ್ರೆ ಅಲ್ಲೂ ಕೂಡ ಆಕೆ ನಿರಾಸೆಯನ್ನೇ ಅನುಭವಿಸಬೇಕಾಯ್ತು. ಹುಡುಗನ ಮನೆಯವರಿಗೆ ಬೇಡವಾದ ಈಕೆ ತುಂಬು ಗರ್ಬಿಣಿಯಾಗಿ ಬೀದಿಗೆ ಬಂದಳು.. ಆದ್ರೂ ಆತ್ಮವಿಶ್ವಾಸವನ್ನ ಕಳೆದುಕೊಳ್ಳಲಿಲ್ಲ. ತನ್ನ ಮಗುವಿಗಾಗಿ ಬದುಕು ಸಾಗಿಸಬೇಕು ಅಂತ ಅಂದುಕೊಂಡಿದ್ರೂ ದುಶ್ಚಟಗಳನ್ನ ಮಾತ್ರ ಬಿಡಲಿಲ್ಲ. ಕೊನೆಗೆ ಈಕೆ ಮಗುವಿನಿಂದಲೂ ದೂರವಾದಳು.ಕ್ರಮೇಣ ಮಗುವಿನ ಮೇಲಿರುವ ಅಮ್ಮನ ಪ್ರೀತಿಯೇ ಈಕೆಯ ಬದುಕಿನ ಗತಿಯನ್ನ ಬದಲಾಯಿಸಿಬಿಟ್ಟಿತ್ತು.
ಇನ್ನೊಬ್ಬ ಹುಡುಗನ ಸ್ಟೋರಿನೇ ಡಿಫರೆಂಟ್‌.... ಮೀಸೆ ಚಿಗುರುವ ಮುನ್ನವೇ ಡ್ರಗ್ಸ್‌ ಗೆ ಎಡಿಕ್ಟ್‌ ಆಗಿಬಿಟ್ಟಿದ್ದ. ಹೈಸ್ಕೂಲ್‌ನಲ್ಲಿರುವಾಗಲೇ ವೈಟ್ನರ್‌ ವ್ಯಸನಿಯಾದ ಈ ಹುಡುಗ ದಾರಿ ತಪ್ಪಿದ. ಒಂದೆಡೆ, ಅಜ್ಜಿ ಮತ್ತು ಅಮ್ಮನ ಅತೀಯಾದ ಪ್ರೀತಿಯ ಜತೆಗೆ ಪೊರ್ಕಿ ಗೆಳೆಯರ ಒಡನಾಟದಿಂದ ದುಶ್ಚಟಗಳ ದಾಸನಾದ. ಪರಿಣಾಮ ಮನೆ ಬಿಟ್ಟ ಈ ಹುಡುಗ ಬೀದಿಯಲ್ಲಿ ಅಲೆದಾಟ ನಡೆಸಿದ. ತಾನು ಅಂಟಿಸಿಕೊಂಡ ಚಟದ ದುಡ್ಡಿಗಾಗಿ ಕಳ್ಳತನ ಮಾಡೋಕ್ಕೆ ನಿಂತ ಈತ ಅದಕ್ಕಾಗಿ ಜನರಿಂದ ಧರ್ಮದೇಟನ್ನೂ ತಿಂದ ಉದಾಹ್ರಣೆಗಳು ಈತನ ಬೆನ್ನಿಗಿವೆ. ..
ಇದೀಗ ಇತನಿಗೆ ತನ್ನ ತಪ್ಪಿನ ಅರಿವಾಗಿದೆ. ಈಗಾಗಲೇ ಬೆಂಗಳೂರಿನ ನ್ಯೂ ಡಾನ್‌ ರಿಹಾಬಿಲಿಟೇಷನ್‌ನ ಸೆಂಟರ್‌ನಲ್ಲಿರುವ ಈ ಹುಡುಗನ ಮನ ಪರಿವರ್ತನೆಯಾಗಿದೆ. ಅಷ್ಟೇ ಅಲ್ಲ, ಕೆಲಸ ಮಾಡಿ ಸ್ವಂತ ಕಾಲ ಮೇಲೆ ನಿಲ್ಲಬೇಕೆಂಬ ಆಸೆಯೂ ಚಿಗುರಿದೆ. ಜತೆಗೆ ಹೆತ್ತಮ್ಮನನ್ನ ಚೆನ್ನಾಗಿ ನೋಡ್ಕೊಬೇಕು ಅನ್ನೋ ಅರಿವು ಕೂಡ ಬಂದಿದೆ..
ಒಟ್ಟಿನಲ್ಲಿ ತಪ್ಪು ಮಾಡೋದು ಸಹಜ. ಆದ್ರೆ ಅದು ತಪ್ಪು ಅಂತ ತಿಳಿದಾಗ ತಿದ್ದಿ ಮುನ್ನೆಡೆಯೊದೆ ಜಾಣತನ. ಆ ಕೆಲಸವನ್ನ ಈತ ಮಾಡಿದ್ದಾನೆ. ಹೀಗೆ ಬೇರೆಯವರ ಹಿತವಚನಗಳನ್ನ ಕೇಳುವುದರ ಜತೆಗೆ ನಮ್ಮತನವನ್ನ ಮೈಗೂಡಿಸಿಕೊಂಡು ಮುನ್ನಡೆದ್ರೆ ಉತ್ತಮ ಸಮಾಜವನ್ನ ಕಟ್ಟಬಹುದು.
ಏನೇ ಆದ್ರೂ, ಜೀವನ ಅಂದ್ರೆ ಸಮಸ್ಯೆಗಳು ಇರೋದು ಸಹಜ. ಅಲ್ಲಿ ಸಂಭ್ರಮ, ನೋವು, ನಿರಾಸೆ, ಹತಾಶೆ ಎಲ್ಲವೂ ಇರುತ್ತೆ. ಎಲ್ಲದಕ್ಕೂ ಸಾವೇ ಅಂತ್ಯವಲ್ಲ. ಎಲ್ಲದಕ್ಕೂ ಪರಿಹಾರ ಇದೆ. ಅದನ್ನ ಹುಡುಕಿಕೊಂಡು ಮುನ್ನಡೆಯಬೇಕು. ಮೊದಲು ನೀ ಬದಲಾಗು... ಬನ್ನಿ ಬದಲಾಗೋಣ...
ಸನತ್ ರೈ

No comments:

Post a Comment